Darshan: ನಾನು ಮೊದಲು ದರ್ಶನ್ ಗುಂಪಲ್ಲಿ ಇದ್ದೆ: ಉಮಾಪತಿ
ಬೆಂಗಳೂರು, ಜೂನ್ 18: ನಾನು ಮೊದಲು ದರ್ಶನ್ ಗುಂಪಲ್ಲಿ ಇದ್ದೆ. ದೇವರು ನನ್ನನ್ನು ಹೊರಗೆ ಕರೆದುಕೊಂಡು ಬಂದ. ಗಿಡವಾಗಿ ಬಗ್ಗದು ಮರವಾಗಿ ಬಗ್ಗೋದಿಲ್ಲ. ತಪ್ಪು ಮಾಡಿದಾಗ ತಿದ್ದಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು ಎಂದು ನಿರ್ಮಾಪಕ ಉಮಾಪತಿ ಹೇಳಿದ್ದಾರೆ.
ಕನ್ನಡದ ಖಾಸಗಿ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ದರ್ಶನ್ ಅವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ತಪ್ಪು ಮಾಡಿದಾಗ ತಿದ್ದಿಕೊಳ್ಳಬೇಕು. ಕಾನೂನು ಕೈಗೆತ್ತಿಕೊಳ್ಳಬಾರದು' ಎಂದಿದ್ದಾರೆ. ನಮ್ಮ ಬೆರಳು ಬೇರೆಯವರ ಕಣ್ಣಿಗೆ ಚುಚ್ಚಿದರೆ ನೋವಾಗುತ್ತದೆ. ಅದೇ ರೀತಿ ನಮ್ಮದೇ ಕಣ್ಣಿಗೆ ಚುಚ್ಚಿದರೂ ನೋವಾಗುತ್ತದೆ ಎಂದು ಹೇಳಿದ್ದಾರೆ.

ಪೊಲೀಸ್ ಇಲಾಖೆ ಬಗ್ಗೆ ಜನಗಳಿಗೆ ನಂಬಿಕೆ ಬಂದಿದೆ. ದೊಡ್ಡವರಿಗೂ, ಸಣ್ಣವರಿಗೆ ಒಂದೇ ನ್ಯಾಯ. ಮಾರುತಿ ಕಾರಲ್ಲಿ ಹೋಗುವವರಿಗೆ, ಲ್ಯಾಂಬೋರ್ಗಿನಿಯಲ್ಲಿ ಹೋಗುವವರಿಗೆ ಒಂದೇ ನ್ಯಾಯ ಇರಬೇಕು. ನಮ್ಮನ್ನು ನಂಬಿಕೊಂಡು ಬಂದವರ ಕೈ ಬಿಡಬಾರದು. ತಿನ್ನೋ ಅನ್ನಕ್ಕೆ ಮಣ್ಣು ಹಾಕುವ ಕೆಲಸ ಮಾಡಬಾರದು. ಎ2 ಸ್ವಲ್ಪ ಯೋಚಿಸಬೇಕಿತ್ತು. ತಾಳ್ಮೆ ಅನ್ನೋದು ತುಂಬಾನೇ ಅವಶ್ಯಕವಾಗುತ್ತದೆ. ಹಳ್ಳಕ್ಕೆ ಬಿದ್ದಿದ್ದಾರೆ, ಆಳಿಗೊಂದು ಕಲ್ಲು ಎಸೆಯಬಾರದು. ಅದನ್ನು ನಂಬಿದವನು ನಾನು ಎಂದು ಉಮಾಪತಿ ಶ್ರೀನಿವಾಸ್ ಹೇಳಿದ್ದಾರೆ.
ರಾಬರ್ಟ್ ಚಿತ್ರದ ವೇಳೆ ಕೂಡ ಬಹಳ ನನಗೆ ಹಿಂಸೆ ಕೊಟ್ಟರು. ಅಂದು ಮೈಸೂರಿನ ಒಂದು ಪ್ರಕರಣವೊಂದರಲ್ಲಿ ನನ್ನನ್ನು ಕೂರಿಸಿ, ಟೇಬಲ್ ಮೇಲೆ ವೆಪನ್ ಇಟ್ಟು ಬೆದರಿಸಿದರು. ಅವತ್ತು ನನ್ನ ಸುತ್ತಮುತ್ತ ಇದದ್ದು, ಬರೋಬ್ಬರಿ 10ರಿಂದ 20 ಜನರು. ಅಂದು ನಾನು ಸತ್ತು ಬದುಕಿದ್ದೇನೆ. ಆ ಕೇಸ್ ನಲ್ಲಿ ನನ್ನನ್ನು ಸಿಲುಕಿಸುವ ಹುನ್ನಾರ ಮಾಡಿದ್ರು ಎಂದು ಹೇಳಿದರು.
ನಾನು ಕೆಟ್ಟ ಕೆಲಸ ಮಾಡಿದ್ರೆ, ಯಾರಾದ್ರೂ ಸುಮ್ಮನೆ ಬಿಡುತ್ತಾರಾ? ನೀವೆಲ್ಲಾ ಅವತ್ತು ಕ್ಷಮಿಸಿ ಸುಮ್ಮನಾದ ಕಾರಣಕ್ಕೆ ಇವತ್ತು ಇಷ್ಟೆಲ್ಲಾ ಆಗಿದೆ. ಅಂದೇ ಇದೆಲ್ಲವನ್ನೂ ಚಿವುಟಿ ಹಾಕಬೇಕಿತ್ತು. ಒಬ್ಬ ಅಮಾಯಕನನ್ನು ಮೈಸೂರು ಕೇಸ್ನಲ್ಲಿ ಸಿಲುಕಿಸಲು ಪ್ರಯತ್ನಿಸಿದ್ರು. ಅಂದು ನಾನು ಮನೆಗೆ ಹೋದಾಗ ನನ್ನ ಮಕ್ಕಳು ನನ್ನನ್ನು ತಬ್ಬಿಕೊಂಡು, ಅತ್ತಿದ್ದರು. ಆ ದೃಶ್ಯವನ್ನು ಇಂದಿಗೂ ನನ್ನಿಂದ ಮರೆಯಲು ಸಾಧ್ಯವೇ ಇಲ್ಲ.
ನಾನು ಎಲ್ಲಿ ಕೊಡಬೇಕೋ ಅಲ್ಲಿಯೇ ಕೊಡುತ್ತೀನಿ. ಆದ್ರೆ, ಕಾನೂನಿನ ಚೌಕಟ್ಟಿನಲ್ಲಿಯೇ ಕೊಡುತ್ತೀನಿ ಅದು ನಾನು. ನಮ್ಮಪ್ಪ ನನಗೆ ಹೇಳಿಕೊಟ್ಟಿದ್ದು, 'ಕಾಲ ಕಾಯ್ದು, ಬಾಲ ಕುಯ್ಯಬೇಕು ಎಂದು ಹೇಳಿದರು. ಇನ್ನೂ ಸುದೀಪ್ ಮತ್ತು ಪುನೀತ್ ರಾಜ್ಕುಮಾರ್ ಸರ್ ಕೂಡ ಹಲ್ಲುಕಚ್ಚಿಕೊಂಡು ಸುಮ್ಮನಿದ್ದರು ಎಂದು ಸ್ಫೋಟಕ ಸಂಗತಿಯನ್ನು ನಿರ್ಮಾಪಕ ಉಮಾಪತಿ ಅವರು ಎಲ್ಲರ ಮುಂದೆ ಬಹಿರಂಗಪಡಿಸಿದ್ದಾರೆ.












Click it and Unblock the Notifications