ಉಡುಪಿ: ಕಮಲಶಿಲೆ ದೇಗುಲ ಟ್ರಸ್ಟಿಗಳ ಮೇಲೆ ದೂರು
ಉಡುಪಿ, ಡಿ.10: ಕಮಲಶಿಲೆ ಶ್ರೀಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಆದಾಯ ವ್ಯಯ ವ್ಯವಹಾರದಲ್ಲಿ ಅಕ್ರಮ ನಡೆದಿದ್ದು, ಟ್ರಸ್ಟಿಗಳು ಮುಜರಾಯಿ ಇಲಾಖೆಗೆ ಸರಿಯಾದ ಲೆಕ್ಕ ಪತ್ರ ನೀಡದೆ ಲಕ್ಷಾಂತರ ರುಪಾಯಿ ಲಪಟಾಯಿಸಿದ್ದಾರೆ ಎಂದು ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶ್ರೀಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪಕ ಟ್ರಸ್ಟಿಯಾದ ಸಚ್ಚಿದಾನಂದ ಚಾತ್ರ ಹಾಗೂ ಕಾರ್ಯಕಾರಿ ಮುಖ್ಯಸ್ಥ ಬಾರೆಗುಂಡಿ ಶ್ರೀನಿವಾಸ ಚಾತ್ರ ಅವರು ದೇಗುಲದ ಲೆಕ್ಕಪತ್ರಗಳನ್ನು ಮುಜರಾಯಿ ಇಲಾಖೆಗೆ ನೀಡದೆ ಧಾರ್ಮಿಕ ಮತ್ತು ದತ್ತಿ ಇಲಾಖೆಗೆ ಸುಳ್ಳು ದಾಖಲೆಗಳನ್ನು ನೀಡಿ ದೇವಸ್ಥಾನದ ಒಟ್ಟು 40ಲಕ್ಷ ರೂ. ಹಣವನ್ನು ದುರುಪಯೋಗ ಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತಂತೆ ಹರೀಶ್ ಮಹಾಬಲ ಶೆಟ್ಟಿ ಅವರು ನೀಡಿದ ಅರ್ಜಿಯನ್ನು ಪುರಸ್ಕರಿಸಿದ ಉಡುಪಿ ನ್ಯಾಯಾಲಯದ ಆದೇಶದಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಖಾಸಗಿ ದೂರು ದಾಖಲಾಗಿದೆ. [1ಕೋಟಿ ವೆಚ್ಚದಲ್ಲಿ ಶಿರ್ವ ದೇವಾಲಯ ನವೀಕರಣ]

ದೇವಸ್ಥಾನದ ಆಡಳಿತ ಮೊಕ್ತೇಸರ ಸಚ್ಚಿದಾನಂದ ಚಾತ್ರಾ ಮತ್ತು ಅನು ವಂಶಿಕ ಮೊಕ್ತೇಸರ ಶ್ರೀನಿವಾಸ ಚಾತ್ರ ಮತ್ತು ಚಂದ್ರಶೇಖರ್ ಶೆಟ್ಟಿ ಸೇರಿಕೊಂಡು ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಸುಳ್ಳು ಮಾಹಿತಿಯನ್ನು ಮತ್ತು ಸುಳ್ಳು ಸಾಕ್ಷಿ ಸಿದ್ಧಪಡಿಸಿದ್ದಾರೆ. ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಧಾರ್ಮಿಕ ಮತ್ತು ದತ್ತಿ ಇಲಾಖೆ ಅಧಿಕಾರಿಗಳ ಮುಂದೆ ಹಾಜರುಪಡಿಸಿ ದೇವಸ್ಥಾನದ ಆಡಳಿತ ನಡೆಸುತ್ತಿದ್ದಾರೆ ಎಂದು ದೂರುದಾರ ಹರೀಶ್ ಮಹಾಬಲ ಶೆಟ್ಟಿ ದೂರಿನಲ್ಲಿ ತಿಳಿಸಿದ್ದಾರೆ. [ಕೊಡಿಯಾಲ ತೇರು, ರಥವೇರಿದ ವೆಂಕಟರಮಣ]
ದೇವಸ್ಥಾನದ ಲೆಕ್ಕಪತ್ರಗಳ ಬಗ್ಗೆ ಸರಿಯಾದ ದಾಖಲಾತಿಗಳನ್ನು ಒದಗಿಸದೆ ದೇವಸ್ಥಾನದ ಒಟ್ಟು ಅಂದಾಜು 40ಲಕ್ಷ ರು. ದುರುಪಯೋಗ ಮಾಡಿದ್ದು, ಇವರು ದೇವಸ್ಥಾನ ಹಾಗೂ ಸಾರ್ವಜನಿಕರಿಗೆ ವಂಚಿಸಿ ಹಲವು ವರ್ಷಗಳಿಂದ ದೇವಸ್ಥಾನದ ಆಡಳಿತ ನಡೆಸುತ್ತಿದ್ದಾರೆ ಎಂದು ಹರೀಶ್ ಮಹಾಬಲ ಶೆಟ್ಟಿ ಹೇಳಿದ್ದಾರೆ. [ನೇಪಾಳದ ದೇಗುಲ ಬಿಟ್ಟ ಕನ್ನಡಿಗ ಅರ್ಚಕರು]
ಉಡುಪಿ ಜಿಲ್ಲೆ ಕುಂದಾಪುರದ ಪ್ರಮುಖ ಹಿಂದೂ ಧಾರ್ಮಿಕ ಕ್ಷೇತ್ರವಾಗಿದ್ದು, ಬ್ರಾಹ್ಮಿ ದುರ್ಗಾಪರಮೇಶ್ವರಿ ದೇಗುಲ ಪ್ರಸಿದ್ಧಿಯಾಗಿದೆ. ಇಲ್ಲಿ ನವರಾತ್ರಿ ಸಂದರ್ಭದಲ್ಲಿ ಪ್ರತಿನಿತ್ಯ ವಿಶೇಷ ಪೂಜೆ ಹಾಗೂ ಬೆಳ್ಳಿ ರಥೋತ್ಸವ ನಡೆಸಲಾಗುತ್ತದೆ.












Click it and Unblock the Notifications