ಸರಕಾರದ ಮೇಲೆ ಪೇಜಾವರರು ಹೊರಿಸಿದ ಆರೋಪ
ಮಂಗಳೂರು, ಫೆ 13: ಬೂದಿಮುಚ್ಚಿದ ಕೆಂಡದಂತಾಗಿರುವ ಮಂಗಳೂರಿನ ಉಳ್ಳಾಲದಲ್ಲಿ ಹಿಂದೂಗಳು ಆತಂಕದಿಂದ ದಿನ ದೂಡುವಂತಾಗಿದೆ. ನಮ್ಮ ಸಹನೆಗೂ, ತಾಳ್ಮೆಗೂ ಒಂದು ಮಿತಿಯಿದೆ ಎನ್ನುವುದನ್ನು ಸರಕಾರ ಅರಿತು ಕೊಳ್ಳಲಿ. ಅಲ್ಲದೇ, ಕರಾವಳಿ ಭಾಗದಲ್ಲಿ ಹಿಂದೂಗಳು ಭಯದಿಂದ ಬದುಕುತ್ತಿರುವುದಕ್ಕೆ ಸರಕಾರದ ಆಡಳಿತ ವೈಫಲ್ಯವೇ ಕಾರಣ ಎಂದು ಪೇಜಾವರ ಶ್ರೀಗಳು ಆರೋಪಿಸಿದ್ದಾರೆ.
ಉಳ್ಳಾಲದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಅದಕ್ಕಾಗಿ ಗುರುವಾರ (ಫೆ13) ವಿವಿಧ ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಉಳ್ಳಾಲ ಪರಿಸರಕ್ಕೆ ಭೇಟಿ ನೀಡಲಾಗುವುದು ಎಂದು ಉಡುಪಿ ಪೇಜಾವರ ಮಠದ ಹಿರಿಯ ಶ್ರೀಗಳು ಹೇಳಿದ್ದಾರೆ. (ಮುಖ್ಯಮಂತ್ರಿಗೆ ಪೇಜಾವರ ಶ್ರೀಗಳು ಕೇಳಿದ ಸಪ್ತ ಪ್ರಶ್ನೆ)
ನಗರದಲ್ಲಿ ವಿವಿಧ ಸ್ವಾಮೀಜಿಗಳ ಸಮ್ಮುಖದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಪೇಜಾವರ ಮಠದ ವಿಶ್ವೇಶತೀರ್ಥ ಶ್ರೀಗಳು, ಕಳೆದ ಕೆಲವು ದಿನಗಳಿಂದ ಹಿಂದೂಗಳು ಆ ಪರಿಸರದಲ್ಲಿ ಜೀವನ ಸಾಗಿಸುವುದೇ ಕಷ್ಟ ಎನ್ನುವ ಪರಿಸ್ಥಿತಿ ಮೂಡಿದೆ. ಹಿಂದೂಗಳಿಗೆ ಧೈರ್ಯ ತುಂಬುವ ಕೆಲಸವಾಗ ಬೇಕಾಗಿದೆ. ಹಾಗಾಗಿ ನಾವು ಗುರುವಾರ ಆ ಪರಿಸರಕ್ಕೆ ಭೇಟಿ ನೀಡಿ, ಹಿಂದೂ ಸಮುದಾಯದವರ ಬಳಿ ಮಾತುಕತೆ ನಡೆಸುತ್ತೇವೆ ಎಂದಿದ್ದಾರೆ. (ಹೊಸವರ್ಷದ ಮುನ್ನ ಪೇಜಾವರರ ಮಹತ್ವದ ನಿರ್ಧಾರ)
ಭಾರತದಂತಹ ಹಿಂದೂ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಹಿಂದೂಗಳಿಗೇ ರಕ್ಷಣೆ ಇಲ್ಲದಿರುವುದು ವಿಪರ್ಯಾಸ. ಹಿರಿಯ ಸ್ವಾಮೀಜಿಯಾಗಿ ಈ ವಿಷಯದಲ್ಲಿ ಸುಮ್ಮನಿರಲು ನನ್ನಿಂದ ಸಾಧ್ಯವಿಲ್ಲ. ಹಿಂದೂಗಳ ಶ್ರೇಯಸ್ಸನ್ನು ಕಾಪಾಡುವುದು ನಮ್ಮ ಕರ್ತವ್ಯ ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಹಿಂದೂ ಧಾರ್ಮಿಕ ಮುಖಂಡರು ತೆಗೆದು ಕೊಂಡ ಕೆಲವು ನಿರ್ಣಯಗಳು. ಮುಂದೆ ಓದಿ..

ಮಹಿಳೆಯರ ಮೇಲೆ ಅನುಚಿತ ವರ್ತನೆ
ಮೀನುಗಾರರು ರಾತ್ರಿ ವೇಳೆ ಸಮುದ್ರಕ್ಕೆ ಹೋದಾಗ, ಹಿಂದೂ ಮಹಿಳೆಯರ ಜೊತೆ ಅನುಚಿತವಾಗಿ ನಡೆದು ಕೊಳ್ಳಲಾಗುತ್ತಿದೆ. ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ದೂರು ನೀಡಿದರೂ ಸರಕಾರ ಗಂಭೀರವಾಗಿ ಪರಗಣಿಸುತ್ತಿಲ್ಲ ಎಂದು ಪೇಜಾವರ ಶ್ರೀಗಳು ವಿಷಾದ ವ್ಯಕ್ತ ಪಡಿಸಿದ್ದಾರೆ.

ಇತರರು ಬಂದರೆ ಸ್ವಾಗತಿಸುತ್ತೇವೆ
ಉಳ್ಳಾಲದಲ್ಲಿ ಇತರ ಧರ್ಮದ ಮುಖಂಡರು ನಮ್ಮ ಜೊತೆ ಬಂದರೆ ಅವರನ್ನೂ ಸ್ವಾಗತಿಸುತ್ತೇವೆ. ನಮಗೆ ಎರಡು ಧರ್ಮಗಳ ನಡುವೆ ಭಿನ್ನಾಭಿಪ್ರಾಯ ಬೇಕಾಗಿಲ್ಲ. ಹಿಂದೂ ಮತ್ತು ಮುಸಲ್ಮಾನರು ಸೋದರತೆಯಿಂದ ಬಾಳ ಬೇಕೆಂದು ಬಯಸುವವರು ನಾವು. ಆ ನಿಟ್ಟಿನಲ್ಲಿ ಗುರುವಾರ ಸಂಜೆ ನಾಲ್ಕು ಗಂಟೆಗೆ ನಾವು ವಿವಿಧ ಮಠಾಧೀಶರೊಂದಿಗೆ ಅಲ್ಲಿಗೆ ಭೇಟಿ ನೀಡಲಿದ್ದೇವೆ ಎಂದು ಪೇಜಾವರರು ಪತ್ರಿಕಾ ಗೋಷ್ಠಿಯಲ್ಲಿ ಹೇಳಿದ್ದಾರೆ.

ಕೆಲವೊಂದು ನಿರ್ಣಯ
ಹಿಂದೂ ಧಾರ್ಮಿಕ ಮುಖಂಡರು ಭಾಗವಹಿಸಿದ್ದ ಸಭೆಯಲ್ಲಿ ಕೆಲವೊಂದು ನಿರ್ಣಯಕ್ಕೆ ಬರಲಾಯಿತು. ಹಿಂದೂಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ಆಕ್ರಮಣದ ಬಗ್ಗೆ ನಾಡಿನ ಸ್ವಾಮೀಜಿಗಳ ಜೊತೆ ರಾಜ್ಯಪಾಲರ ಬಳಿ ಹೋಗಿ, ಅವರಿಗೆ ವಸ್ತುಸ್ಥಿತಿಯನ್ನು ಗಮನಕ್ಕೆ ತರುವುದು.

ಮೀನುಗಾರರ ಬೋಟ್ ಮೇಲೆ ದಾಳಿ
ರಾತ್ರಿ ಹೊತ್ತು ಮೀನುಗಾರಿಕೆಗೆ ತೆರಳುವು ಮೊಗವೀರ ಸಮುದಾಯದವರ ಮನೆ ಮೇಲೆ, ಬೋಟ್ ಮೇಲೆ ದಾಳಿ ನಡೆಸಲಾಗುತ್ತಿದೆ. ಪರಿಸ್ಥಿತಿ ಹತೋಟಿಗೆ ಬರಬಹುದು ಎನ್ನುವ ತಾಳ್ಮೆಯಲ್ಲಿ ನಾವಿದ್ದೆವು. ನಮ್ಮ ಸಹನೆಗೂ ಒಂದು ಮಿತಿಯಿದೆ ಎನ್ನುವುದನ್ನು ಜಿಲ್ಲಾಡಳಿತ ಅರಿತು ಕೊಳ್ಳಲಿ. ದಾಳಿ ನಡೆಸುವವರ ವಿರುದ್ದ ಕಠಿಣ ಕ್ರಮ ಸರಕಾರ ತೆಗೆದು ಕೊಳ್ಳಬೇಕು.

ಸಹನೆಗೂ ಒಂದು ಮಿತಿಯಿದೆ
ನಾಡಿನಲ್ಲಿ ಶಾಂತಿ ಸೌಹಾರ್ದತೆ ಇರಬೇಕೆಂದು ನಾವು ಬಯಸುತ್ತೇವೆ. ಆಡಳಿತದ ವಿಚಾರದಲ್ಲಿ ಜಾತಿವಾದ ಬೇಡ. ವಿನಾಕಾರಣ ನಮ್ಮವರ ಮೇಲೆ ಕೇಸು ಹಾಕುವುದು ಬೇಡ. ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಕಡೆಯಾಗಬೇಕು.












Click it and Unblock the Notifications