ಪ್ರತಿಮಾ ಹತ್ಯೆಗೆ ತಿರುವು; 5 ಲಕ್ಷ ಹಣ, ಚಿನ್ನ ಮತ್ತು ಬೆಳ್ಳಿಯ ಕಥೆ!
ಬೆಂಗಳೂರು, ನವೆಂಬರ್ 19: ಕರ್ನಾಟಕದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದ ಗಣಿ ಭೂ ವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಹತ್ಯೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಬೆಂಗಳೂರು ಪೊಲೀಸರ ತನಿಖೆ ವೇಳೆ ಹಣ, ಚಿನ್ನ ಮತ್ತು ಬೆಳ್ಳಿಯ ಮಾಹಿತಿ ಲಭ್ಯವಾಗಿದೆ. ಹತ್ಯೆ ಪ್ರಕರಣದ ಆರೋಪಿ ಕಿರಣ್ ಪೊಲೀಸರ ವಶದಲ್ಲಿದ್ದಾನೆ.
ನವೆಂಬರ್ 4ರ ಶನಿವಾರ ರಾತ್ರಿ 37 ವರ್ಷದ ಪ್ರತಿಮಾ ಹತ್ಯೆ ನಡೆದಿತ್ತು. ದೊಡ್ಡಕಲ್ಲಸಂದ್ರದ ಅಪಾರ್ಟ್ಮೆಂಟ್ನಲ್ಲಿ ಅವರ ಶವ ಭಾನುವಾರ ಪತ್ತೆಯಾಗಿತ್ತು. ಉಸಿರುಗಟ್ಟಿಸಿ, ಕುತ್ತಿಗೆ ಸೀಳಿ ಅವರನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಪ್ರತಿಮಾ ಗಣಿ ಭೂ ವಿಜ್ಞಾನ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.

ಕೊಲೆ ನಡೆದ ಕೆಲವೇ ಗಂಟೆಗಳಲ್ಲಿ ಬೆಂಗಳೂರು ಪೊಲೀಸರು ಪ್ರತಿಮಾ ಹತ್ಯೆ ಪ್ರಕರಣದ ಆರೋಪಿ, ಮಾಜಿ ಕಾರು ಚಾಲಕ ಕಿರಣ್ ಬಂಧಿಸಿದ್ದರು. ತನಿಖೆಯ ವೇಳೆ ಕಿರಣ್ ತನ್ನ ತಪ್ಪೊಪ್ಪಿಕೊಂಡಿದ್ದಾನೆ. ಅಲ್ಲದೇ ಪ್ರತಿಮಾ ಮನೆಯಿಂದ ಹಣ, ಆಭರಣ ಕದ್ದಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಸ್ನೇಹಿತನಿಗೆ 5 ಲಕ್ಷ ನೀಡಿದ್ದ ಆರೋಪಿ; ಸರ್ಕಾರಿ ಅಧಿಕಾರಿ ಪ್ರತಿಮಾ ಬಳಿ ಕಿರಣ್ ಕಾರು ಚಾಲಕನಾಗಿದ್ದ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಕಿರಣ್ರನ್ನು ಕೆಲಸದಿಂದ ತೆಗೆದು ಹಾಕಿ ಬೇರೆ ಚಾಲಕನನ್ನು ನೇಮಿಸಲಾಗಿತ್ತು. ಕೆಲಸ ವಾಪಸ್ ಕೇಳಲು ಹೋಗಿದ್ದ ಕಿರಣ್ ಪ್ರತಿಮಾರನ್ನು ಕೊಲೆ ಮಾಡಿದ್ದ, ಬಳಿಕ ಮನೆಯಲ್ಲಿದ್ದ ಹಣ, ಚಿನ್ನಾಭರಣ ದೋಚಿದ್ದ.
ಕಿರಣ್ಗೆ ಶಿವ ಎಂಬ ಸ್ನೇಹಿತನಿದ್ದಾನೆ. ಆತ ಕೋಣನಕುಂಟೆಯ ನಿವಾಸಿ. ಪ್ರತಿಮಾ ಹತ್ಯೆ ಮಾಡಿದ ಕಿರಣ್ ಮನೆಯಲ್ಲಿ ಸಿಕ್ಕ ಸುಮಾರು 5 ಲಕ್ಷ ಹಣ ಮತ್ತು 3 ರಿಂದ 4 ಲಕ್ಷ ರೂಪಾಯಿ ಚಿನ್ನ ಮತ್ತು ಬೆಳ್ಳಿಯನ್ನು ಕದ್ದುಕೊಂಡು ಬಂದಿದ್ದ. ಸ್ನೇಹಿತ ಶಿವನಿಗೆ ಕರೆ ಮಾಡಿ ಹಣ ಮತ್ತು ಚಿನ್ನಾಭರಣ ಇಡಲು ಸೂಕ್ತವಾದ, ನಂಬಿಕೆಯ ಜಾಗ ಬೇಕು ಎಂದು ಹೇಳಿದ್ದ.
5 ಲಕ್ಷ ರೂ. ಹಣವನ್ನು ಶಿವನಿಗೆ ಕೊಟ್ಟಿದ್ದ. ಹಣವನ್ನು ಮನೆಯಲ್ಲಿ ಇಟ್ಟುಕೊಂಡಿರು. ಮಲೆ ಮಹದೇಶ್ವರ ಬೆಟ್ಟದಿಂದ ಬಂದ ಬಳಿಕ ವಾಪಸ್ ಕೊಡು ಎಂದು ಶಿವನಿಗೆ ಕಿರಣ್ ಸೂಚಿಸಿದ್ದ. ಹಣದ ಮೂಲದ ಕುರಿತು ಯಾವುದೇ ಮಾಹಿತಿ ಕೇಳದ ಶಿವ ಹಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದ. ಆದರೆ ಮೆಲೆ ಮಹದೇಶ್ವರ ಬೆಟ್ಟದಲ್ಲಿಯೇ ಪೊಲೀಸರು ಕಿರಣ್ ಬಂಧಿಸಿದ್ದರು.
ಪೊಲೀಸರ ವಿಚಾರಣೆ ವೇಳೆ ಕಿರಣ್ ಕೊಟ್ಟ ಹಣವನ್ನು ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದೆ ಎಂದು ಶಿವ ಹೇಳಿಕೆ ನೀಡಿದ್ದಾನೆ. ಮತ್ತೊಂದು ಕಡೆ ಕಿರಣ್ ಸಹ ತಪ್ಪೊಪ್ಪಿಕೊಂಡಿದ್ದಾನೆ. ಆದ್ದರಿಂದ ಪ್ರತಿಮಾ ಕೊಲೆ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಕೇವಲ ಕೆಲಸದ ವಿಚಾರಕ್ಕೆ ಕೊಲೆ ನಡೆದಿಲ್ಲ. ಹಣದ ಉದ್ದೇಶವೂ ಅಡಗಿದೆ ಎಂಬುದು ಬಹಿರಂಗವಾಗಿದೆ.
ನವೆಂಬರ್ 4ರ ಶನಿವಾರ ಪ್ರತಿಮಾ ಕೆಲಸಕ್ಕೆ ಹೋಗಿದ್ದರು. ಸಚಿವರ ಜೊತೆ ನಡೆದ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಪಾಲ್ಗೊಂಡಿದ್ದರು. ಸಂಜೆ ಡ್ರೈವರ್ ಅವರನ್ನು ಮನೆಗೆ ಬಿಟ್ಟು ತೆರಳಿದ್ದ ಬಳಿಕ ಯಾವುದೇ ಫೋನ್ ಕರೆಗೆ ಪ್ರತಿಮಾ ಉತ್ತರ ನೀಡಿರಲಿಲ್ಲ. ಆದ್ದರಿಂದ ಪ್ರತಿಮಾ ಸಹೋದರ ಭಾನುವಾರ ಬೆಳಗ್ಗೆ ಅನುಮಾನಗೊಂಡು ಬಂದು ನೋಡಿದಾಗ ಪ್ರತಿಮಾ ಶವ ಪತ್ತೆಯಾಗಿತ್ತು.
ಪ್ರತಿಮಾ ಮನೆಯ ಮುಖ್ಯದ್ವಾರದ ಬಳಿಯೇ ಅವರ ಊಟದ ಡಬ್ಬ, ಬ್ಯಾಗ್, ಕನ್ನಡಕ ಬಿದ್ದಿತ್ತು. ಶವ ಮಾತ್ರ ಕೋಣೆಯಲ್ಲಿ ಮಂಚದ ಮೇಲೆ ಪತ್ತೆಯಾಗಿತ್ತು. ಕಿರಣ್ ಪ್ರತಿಮಾ ಅವರ ವೇಲ್ನಿಂದ ಕುತ್ತಿಗೆ ಬಿಗಿದಿದ್ದ. ಪ್ರಜ್ಞೆ ತಪ್ಪಿದ ಅವರನ್ನು ಕೋಣೆಗೆ ಎಳೆದುಕೊಂಡು ಹೋಗಿದ್ದ. ಕಿಚನ್ನಲ್ಲಿ ಸಿಕ್ಕ ಚಾಕುವಿನಿಂದ ಅವರ ಕತ್ತು ಕೊಯ್ದು ಹತ್ಯೆ ಮಾಡಿದ್ದ.
ಪ್ರತಿಮಾ ಹತ್ಯೆ ಮಾಡಿದ ಬಳಿಕ ಶಿವನಿಗೆ ಹಣ ಕೊಟ್ಟು ಸ್ನೇಹಿತರ ಜೊತೆ ಕಿರಣ್ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿದ್ದ. ಕೊಲೆ ಪ್ರಕರಣದ ತನಿಖೆಗೆ 4 ತಂಡ ರಚನೆ ಮಾಡಿದ್ದ ಪೊಲೀಸರು ಕಿರಣ್ ಬೆಟ್ಟದಲ್ಲಿ ಫೋನ್ ಆನ್ ಮಾಡಿದಾಗ ಲೋಕೇಷನ್ ಆಧಾರದ ಮೇಲೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿ ಆತನನ್ನು ಬಂಧಿಸಿದ್ದರು.












Click it and Unblock the Notifications