ಹಾಸನ: ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭದಲ್ಲಿ ದುರಂತ: ಬಾನು ಮುಷ್ತಾಕ್ ಪ್ರತಿಕ್ರಿಯೆ
ಹಾಸನ ಜಿಲ್ಲೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭದಲ್ಲಿ ಸಂಭವಿಸಿದ ಭಾರೀ ದುರಂತಕ್ಕೆ ಸಂಬಂಧಿಸಿದಂತೆ ಲೇಖಕಿ ಹಾಗೂ ಬೂಕರ್ ಪ್ರಶಸ್ತಿ ವಿಜೇತರಾದ ಬಾನುಮುಷ್ತಾಕ್ ಅವರು ರಿಯಾಕ್ಟ್ ಮಾಡಿದ್ದಾರೆ. ನಮ್ಮ ಜಿಲ್ಲೆಯ ಇತಿಹಾಸದಲ್ಲೇ ನಡೆದಿರದಂತಹ ಅತಿ ದಾರುಣ ದುರಂತವು ಮೊಸಳೆ ಹೊಸಹಳ್ಳಿಯಲ್ಲಿ ಸಂಭವಿಸಿರುವುದು ಆಘಾತಕಾರಿ ಸಂಗತಿಯಾಗಿದೆ. ಗಣೇಶ ವಿಸರ್ಜನೆ ಮೆರವಣಿಗೆಯ ಸಂಭ್ರಮ ಕ್ಷಣಾರ್ಧದಲ್ಲೇ ದುಃಖ ಮತ್ತು ಕಣ್ಣೀರು ತುಂಬಿದ ಅನಾಹುತವಾಗಿ ಮಾರ್ಪಟ್ಟಿದ್ದು, ಅನೇಕ ಮಂದಿ ತಮ್ಮ ಪ್ರಾಣ ಕಳೆದುಕೊಂಡಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ವಿಶೇಷವಾಗಿ, ಮೊಸಳೆ ಹೊಸಹಳ್ಳಿಯ ಇಂಜಿನಿಯರಿಂಗ್ ಕಾಲೇಜಿನ ಏಳು ಮಂದಿ ಯುವ ವಿದ್ಯಾರ್ಥಿಗಳು ಪ್ರಾಣ ಕಳೆದುಕೊಂಡಿರುವುದು ನಮ್ಮೆಲ್ಲರಿಗೂ ಅತೀವ ವಿಷಾದ ಉಂಟುಮಾಡಿದೆ. ಇಂತಹ ಯುವ ಚೇತನಗಳು ಅಕಾಲಿಕವಾಗಿ ಕಣ್ಮರೆಯಾಗಿರುವುದು ಅತಿದೊಡ್ಡ ದುರಂತವಾಗಿದೆ. ಈ ದುರಂತದಲ್ಲಿ ಮೃತಪಟ್ಟ ಎಲ್ಲರಿಗೂ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಹಾರೈಸುತ್ತೇನೆ. ದುಃಖ ತಪ್ತ ಕುಟುಂಬಗಳಿಗೆ ನನ್ನ ಸಾಂತ್ವನ ಎಂದಿದ್ದಾರೆ.

ಈ ಕಷ್ಟದ ಸಮಯದಲ್ಲಿ, ಸಮಾಜವಾಗಿ ನಾವು ಎಲ್ಲರೂ ಒಗ್ಗಟ್ಟಿನಿಂದ, ಸಹಾನುಭೂತಿಯಿಂದ, ಪರಸ್ಪರ ನೆರವು ನೀಡುತ್ತ, ಬಾಧಿತ ಕುಟುಂಬಗಳೊಂದಿಗೆ ನಿಂತುಕೊಳ್ಳುವುದು ಅತ್ಯಂತ ಅವಶ್ಯಕ. ಅವರ ನೋವು ಮತ್ತು ದುಃಖದಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ ಎಂದು ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇನ್ನು ಈ ಸಂಬಂಧ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಹಾಸನ ಜಿಲ್ಲೆಯ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ವಿಸರ್ಜನೆಯ ವೇಳೆ ಮೆರವಣಿಗೆಗೆ ವಾಹನ ಅಪ್ಪಳಿಸಿದ ಅಪಘಾತದಲ್ಲಿ ಆರು ಜನ ದುರ್ಮರಣಕ್ಕೀಡಾಗಿ 20 ಜನ ಗಾಯಗೊಂಡಿರುವ ಘಟನೆ ದಿಗ್ಬ್ರಮೆ ತರಿಸಿದೆ. ಗಣೇಶೋತ್ಸವದ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಜನರ ಮೇಲೆ ಏಕಾಏಕಿ ಕ್ಯಾಂಟರ್ ವಾಹನವೊಂದು ನುಗ್ಗಿ ಈ ಅವಘಡ ಸಂಭವಿಸಿರುವುದು ನಿಜಕ್ಕೂ ಘೋರ ದುರಂತ.
ಮೃತರ ಆತ್ಮಕ್ಕೆ ಶಾಂತಿ ದೊರಕಲಿ, ಗಾಯಾಳುಗಳಿಗೆ ಅಗತ್ಯ ಚಿಕಿತ್ಸೆ ಒದಗಿಸಲು ತುರ್ತು ಕ್ರಮ ವಹಿಸಲಿ, ಮೃತ ಕುಟುಂಬಗಳಿಗೆ ಈ ಕೂಡಲೇ ಸರ್ಕಾರ ಸೂಕ್ತ ಪರಿಹಾರ ಘೋಷಿಸಲಿ ಎಂದು ಒತ್ತಾಯಿಸುವೆ ಎಂದು ಹೇಳಿದ್ದಾರೆ. ಇನ್ನು ಈ ದುರಂತಕ್ಕೆ ಸಂಬಂಧಿಸಿದಂತೆ ಕರ್ನಾಟಕ ಕಾಂಗ್ರೆಸ್ ಸರ್ಕಾರವು ನೀಡಿರುವ ಪರಿಹಾರವು ಸಾಕಾಗುವುದಿಲ್ಲ ಎಂದು ಜಿಡಿಎಸ್ ಸಹ ಹೇಳಿದೆ. ಈ ದುರಂತವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಬೇಕು. ಅಲ್ಲದೇ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದೆ.












Click it and Unblock the Notifications