ಹಬ್ಬಗಳ ಹೊತ್ತಲ್ಲೇ ದಿಢೀರ್ ಬೆಲೆ ಏರಿಕೆ ಶಾಕ್ ಕೊಟ್ಟ ತರಕಾರಿ, ಯಾವುದು ಗೊತ್ತಾ?
ಈಗಾಗಲೇ ದುಬಾರಿ ದುನಿಯಾದಿಂದ ಕಂಗಾಲಾಗಿರುವ ಜನರಿಗೆ ಇದೀಗ ತರಕಾರಿಗಳು ಬೆಲೆ ಏರಿಕೆ ಶಾಕ್ ನೀಡಲು ಹೊರಟಿವೆ. ಕಳೆದ ವಾರ ಕಡಿಮೆ ಇದ್ದ ಟೊಮೆಟೋ ಬೆಲೆಯು ಇದ್ದಕ್ಕಿದ್ದಂತೆ ದುಪ್ಪಟ್ಟಾಗಿದೆ ಎಂದು ವರದಿಯಾಗಿದೆ. ವಾರದ ಹಿಂದೆ ಒಂದು ಕೆ.ಜಿ.ಟೊಮೆಟೋ ದರವು ಕೇವಲ 30ರಿಂದ 40 ರೂಪಾಯಿ ಮಾತ್ರವಿತ್ತು. ಈಗ ದಿಢೀರನೇ ಬೆಲೆ ಏರಿದ್ದು, ಕೆ.ಜಿಗೆ 80 ರೂಪಾಯಿವರೆಗೆ ದಾಟಿದೆ ಎಂದು ವರದಿಯಾಗಿದೆ.
ನಷ್ಟದಿಂದ ತತ್ತರಿಸಿದ್ದ ಟೊಮೆಟೋ ಬೆಳೆಗಾರರು ಫುಲ್ ಖುಷಿಯಾಗಿದ್ದಾರೆ. ಟೊಮೆಟೋ ಬೆಳೆಗೆ ರೋಗ ಹಾಗೂ ಇನ್ನಿತರ ಕಾರಣಗಳಿಂದ ರೈತರು ಭಾರಿ ನಷ್ಟ ಅನುಭವಿಸಿದ್ದರು. ಇತ್ತೀಚೆಗೆ ಸುರಿದ ಭಾರಿ ಮಳೆಯಿಂದಾಗಿಯೂ ಬೆಳೆ ಹಾನಿಯಾಗಿ ಇಳುವರಿ ತಗ್ಗಿದೆ. ಮತ್ತೊಂದೆಡೆ ಸಾಲು ಸಾಲು ಹಬ್ಬಗಳು ಬರುತ್ತಿರುವುದರಿಂದ ಕರ್ನಾಟಕ ಮಾತ್ರವಲ್ಲದೆ ಬೇರೆ ರಾಜ್ಯಗಳಿಂದ ಕೂಡ ಟೊಮೇಟೋಗೆ ಡಿಮ್ಯಾಂಡ್ ಹೆಚ್ಚಾಗಿದೆ.

ಪಶ್ಚಿಮ ಬಂಗಾಳ, ತಮಿಳುನಾಡು, ತೆಲಂಗಾಣ, ಒಡಿಶಾ ಸೇರಿದಂತೆ ಹಲವು ರಾಜ್ಯಗಳಿಂದ ಕರ್ನಾಟಕದ ಟೊಮೇಟೋಗೆ ಡಿಮ್ಯಾಂಡ್ ಹೆಚ್ಚಾಗಿದೆಯಂತೆ. ಭಾರಿ ಬೇಡಿಕೆ ಹೆಚ್ಚಾದ ಕಾರಣ ಸದ್ಯಕ್ಕೆ ಕೋಲಾರದಿಂದ ಬಾಂಗ್ಲಾದೇಶಕ್ಕೆ ಟೊಮೆಟೋ ರಫ್ತು ನಿಲ್ಲಿಸಲಾಗಿದೆ.
ಕೇವಲ ನಾಲ್ಕು ದಿನಗಳಲ್ಲಿ ಟೊಮೆಟೋ ಬೆಲೆ ನಿರಂತರವಾಗಿ ಏರಿಕೆ ಕಂಡಿದ್ದು, ಕೋಲಾರದ ಟೊಮೆಟೋಗೆ ಇನ್ನಿಲ್ಲದ ಡಿಮ್ಯಾಂಡ್ ಸೃಷ್ಟಿಯಾಗಿದೆ. ಚಿನ್ನದ ನಾಡು ಕೋಲಾರದಲ್ಲಿ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೆಟೋ ಮಾರುಕಟ್ಟೆ ಇದ್ದು, ಇಲ್ಲಿಗೆ ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಚಿತ್ರದುರ್ಗ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಬೆಳೆದ ಟೊಮೆಟೋ ಮಾರಾಟಕ್ಕೆ ಬರುತ್ತದೆ.

ಕೋಲಾರ ಜಿಲ್ಲೆಯು ಆಂಧ್ರಪ್ರದೇಶ, ತಮಿಳುನಾಡು ಜಿಲ್ಲೆಗಳಿಗೆ ಹೊಂದಿಕೊಂಡಂತೆ ಇರುವುದರಿಂದ ಅಲ್ಲಿಂದಲೂ ಪ್ರತಿನಿತ್ಯ ಬಂದು ಟೊಮೆಟೋ ಖರೀದಿಸುವವರು ಹೆಚ್ಚಾಗಿದ್ದಾರೆ. ಇಲ್ಲಿಂದ ಬರೋಬ್ಬರಿ ಇಪ್ಪತ್ತಕ್ಕೂ ಹೆಚ್ಚು ರಾಜ್ಯಗಳಿಗೆ ಟೊಮೆಟೋ ಪೂರೈಕೆಯಾಗುತ್ತಿದೆ. ಹಾಗಾಗಿ ಟೊಮೆಟೋ ಬೆಳೆಗಾರರಿಗೆ ಸದ್ಯ ನಿಜವಾದ ಹಬ್ಬ ಬಂದಂತಾಗಿದೆ.
ಇಳುವರಿ ತಗ್ಗಿರುವುದರಿಂದ ಮಾರುಕಟ್ಟೆಗಳಿಗೆ ಬರುತ್ತಿರುವ ಟೊಮೆಟೋ ಪ್ರಮಾಣವು ಇಳಿಮುಖವಾಗುತ್ತಿದೆ. ಈ ಕಾರಣದಿಂದಲೇ ಬೆಲೆಯೂ ದಿಢೀರ್ ಏರಿಕೆ ಕಂಡಿದೆ. ಸದ್ಯ ದಸರಾ, ದೀಪಾವಳಿ ಹಬ್ಬಗಳು ಸಾಲಿನಲ್ಲಿರುವುದರಿಂದ ಟೊಮೆಟೋ ಬೆಲೆ ಮತ್ತಷ್ಟು ಏರಬಹುದು ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.
ರೈತರು ಈ ಸಲ ನಾಟಿ ಮಾಡಿರುವ ಟೊಮೆಟೋ ಬೆಳೆಯಲ್ಲಿ ಶೇ 50ರಷ್ಟು ಹಾನಿಗೆ ಒಳಗಾಗಿದೆ. ವಿವಿಧ ರೋಗಗಳಿಂದಲೂ ಟೊಮೆಟೊ ಗಿಡಗಳು ತೋಟದಲ್ಲೇ ನಶಿಸಿವೆ. ಮತ್ತೊಂದೆಡೆ ನರ್ಸರಿಯವರು ಕಳಪೆ ಟೊಮೆಟೋ ಸಸಿಗಳನ್ನು ವಿತರಣೆ ಮಾಡಿರುವ ಆರೋಪಗಳೂ ಕೇಳಿಬಂದಿವೆ. ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದ ಮಳೆ ಕೂಡ ಅಬ್ಬರಿಸಿದೆ. ಈ ಎಲ್ಲ ಕಾರಣಗಳಿಂದ ಟೊಮೆಟೋ ಗುಣಮಟ್ಟದ ಇಳುವರಿ ಸುಮಾರು ಅರ್ಧದಷ್ಟು ತಗ್ಗಿದೆ. ಹಾಗಾಗಿ ಸಾಮಾನ್ಯವಾಗಿಯೇ ಬೆಲೆ ಏರಿಕೆ ಕಂಡುಬಂದಿದೆ ಎಂದು ಹೇಳಲಾಗುತ್ತಿದೆ.
ಒಂದೆಡೆ ರೈತರಿಗೆ ಉತ್ತಮ ಬೆಲೆ ಸಿಕ್ಕಿದ್ದರೂ ತೋಟದಲ್ಲಿ ಬೆಲೆ ಇಲ್ಲವಾಗಿದೆ. ಇತ್ತ ಗ್ರಾಹಕರಿಗಂತೂ ಬೆಲೆ ಏರಿಕೆ ಬಿಸಿ ತಟ್ಟಲಿದೆ. ಮಧ್ಯದಲ್ಲಿರುವ ವ್ಯಾಪಾರಿಗಳು ಮಾತ್ರ ಕೈತುಂಬಾ ಹಣ ನೋಡಲಿದ್ದಾರೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಿದ್ದಾರೆ.












Click it and Unblock the Notifications