ಕಾಂಗ್ರೆಸ್ ಖಡಕ್ ನೋಟಿಸ್ಗೆ ತಣ್ಣಗಾಗಿ ಉತ್ತರಿಸಿದ ಅತೃಪ್ತ ಶಾಸಕರು
ಬೆಂಗಳೂರು, ಜನವರಿ 25: ಕಾಂಗ್ರೆಸ್ ಸಿಎಲ್ಪಿ ಸಭೆಗೆ ಗೈರಾಗಿ ಮುಂಬೈನಲ್ಲಿ ಠಿಕಾಣಿ ಹೂಡಿದ್ದ ಶಾಸಕರಿಗೆ ಪಕ್ಷ ನೀಡಿದ್ದ ಶಿಸ್ತಿನ ನೋಟಿಸ್ಗೆ ನಾಲ್ಕರಲ್ಲಿ ಮೂರು ಶಾಸಕರು ಉತ್ತರ ನೀಡಿದ್ದಾರೆ. ಅತೃಪ್ತರ ಮುಖಂಡ ರಮೇಶ್ ಜಾರಕಿಹೊಳಿ ಸಹ ನೊಟೀಸ್ಗೆ ಉತ್ತರಿಸಿದ್ದಾರೆ.
ಮಗಳ ಮದುವೆ ತಯಾರಿಯಲ್ಲಿ ಇರುವ ಕಾರಣ ಸಿಎಲ್ಪಿ ಸಭೆಗೆ ಬರಲಾಗಲಿಲ್ಲ ಎಂದು ಅತೃಪ್ತ ಶಾಸಕರ ಮುಖಂಡ ರಮೇಶ್ ಜಾರಕಿಹೊಳಿ ಅವರು ನೋಟಿಸ್ಗೆ ಉತ್ತರ ನೀಡಿದ್ದರೆ.
ರಮೇಶ್ ಜಾರಕಿಹೊಳಿ ಆಪ್ತ ಮಹೇಶ್ ಕುಮಟಳ್ಳಿ ಅವರು ಸಹ ನೋಟಿಸ್ಗೆ ಉತ್ತರಿಸಿದ್ದು ಬೆನ್ನು ನೋವಿದ್ದು ಚಿಕಿತ್ಸೆಗಾಗಿ ಮುಂಬೈಗೆ ತೆರಳಿದ್ದೆ ಎಂದು ಸಮಜಾಯಿಷಿ ನೀಡಿದ್ದಾರೆ. ಮತ್ತೊಬ್ಬ ಶಾಸಕರ ಬಿ.ನಾಗೇಂದ್ರ ಸಹ ಉತ್ತರ ನೀಡಿದ್ದಾರೆ. ಮೂವರು ಸಹ ನಾವು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಆದರೆ ಶಾಸಕ ಉಮೇಶ್ ಜಾದವ್ ಮಾತ್ರ ಕೆಪಿಸಿಸಿ ನೋಟಿಸ್ಗೆ ಉತ್ತರ ನೀಡಿಲ್ಲ. ನಾನಿನ್ನೂ ಗೊಂದಲದಲ್ಲಿದ್ದು ಯೋಚಿಸಿ ನಿರ್ಣಯ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಸಿಎಲ್ಪಿ ಸಭೆ ನಡೆದಂದೇ ದಿನೇಶ್ ಗುಂಡೂರಾವ್ಗೆ ಪತ್ರ ಬರೆದು ಸಭೆಗೆ ಬರಲಾಗದು ಎಂದು ಕಾರಣ ತಿಳಿಸಿದ್ದರು.

ಜನವರಿ 19ರ ಸಭೆಗೆ ಗೈರಾಗಿದ್ದರು
ಜನವರಿ 19 ರಂದು ನಡೆದ ಕಾಂಗ್ರೆಸ್ ಪಕ್ಷದ ಶಾಸಕಾಂಗ ಸಭೆಗೆ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಉಮೇಶ್ ಜಾದವ್, ಬಿ.ನಾಗೇಂದ್ರ ಅವರುಗಳು ಗೈರಾಗಿದ್ದರು. ಅವರೆಲ್ಲರೂ ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆನ್ನಲಾಗಿತ್ತು. ನಾಲ್ಕು ಜನ ಶಾಸಕರು ಮುಂಬೈನ ಹೊಟೆಲ್ ಒಂದರಲ್ಲಿ ವಾಸ್ಥವ್ಯ ಹೂಡಿದ್ದರು.

ಪಕ್ಷದಿಂದ ಕಿತ್ತೊಗೆಯುವ ಬೆದರಿಕೆ
ಸಭೆಗೆ ಬರದಿದ್ದಕ್ಕೆ ಕಾರಣ ಕೇಳಿ ಕೆಪಿಸಿಸಿಯು ನಾಲ್ಕು ಶಾಸಕರಿಗೆ ನೊಟೀಸ್ ಜಾರಿ ಮಾಡಿತ್ತು. ನೊಟೀಸ್ಗೆ ಸಮಂಜಸವಾಗಿ ಉತ್ತರಿಸದಿದ್ದರೆ ಸದಸ್ಯತ್ವ ರದ್ದು ಮಾಡುವುದಾಗಿಯೂ ಎಚ್ಚರಿಕೆ ನೀಡಿತ್ತು. ಅದರಂತೆ ಮೂರು ಶಾಸಕರು ಉತ್ತರ ನೀಡಿದ್ದು, ಉಮೇಶ್ ಜಾದವ್ ಏನು ಮಾಡುತ್ತಾರೆಂದು ಕಾದು ನೋಡಬೇಕಾಗಿದೆ.

ಹೊಟೆಲ್ನಲ್ಲಿ ತಂಗಿದ್ದರು
ಈ ನಾಲ್ಕು ಶಾಸಕರು ಮುಂಬೈನಲ್ಲಿ ಹೊಟೆಲ್ ಒಂದರಲ್ಲಿ ತಂಗಿದ್ದರು, ಬಿಜೆಪಿಯೊಂದಿಗೆ ಸತತ ಸಂಪರ್ಕದಲ್ಲಿದ್ದರು ಎನ್ನಲಾಗಿತ್ತು. ಬಹು ದಿನದಿಂದ ಮುಂಬೈನಲ್ಲೇ ಇದ್ದ ಈ ಶಾಸಕರು ಕೆಲ ದಿನದ ಹಿಂದಷ್ಟೆ ರಾಜ್ಯಕ್ಕೆ ವಾಪಸ್ಸಾಗಿದ್ದಾರೆ.

ಅತೃಪ್ತರನ್ನು ತಣ್ಣಗಾಗಿಸಿದ ಕಾಂಗ್ರೆಸ್
ಅತೃಪ್ತ ಶಾಸಕರಿಂದ ಕಾಟದಿಂದ ಕಂಗೆಟ್ಟಿದ್ದ ರಾಜ್ಯ ಕಾಂಗ್ರೆಸ್ಗೆ ಇದು ಗೆಲುವೆಂದೇ ಭಾವಿಸಬಹುದಾಗಿದೆ. ಮೈತ್ರಿ ಸರ್ಕಾರ ಆದಾಗಿನಿಂದಲೂ ಅತೃಪ್ತರ ತಾಳಕ್ಕೆ ಕುಣಿಯುತ್ತಿದ್ದ, ಅವರ ಮುಂದೆ ಬಾಗುತ್ತಿದ್ದ ಕೆಪಿಸಿಸಿ ಇದೇ ಮೊದಲ ಬಾರಿಗೆ ನೊಟೀಸ್ ನೀಡಿ ಅತೃಪ್ತರನ್ನು ತಣ್ಣಗಾಗಿಸಿದೆ.












Click it and Unblock the Notifications