ಖಾಸಗಿ ಶಾಲೆಗೆ ಸೆಡ್ಡು ಹೊಡೆದ ಮಂಡ್ಯದ ಸರ್ಕಾರಿ ಶಾಲೆ
ಮಂಡ್ಯ, ಜೂನ್ 13 : ಸರ್ಕಾರಿ ಶಾಲೆಗಳೆಂದು ಮೂಗು ಮುರಿಯುವವರಿಗೆ, ಶಾಲೆಗೆ ಮಕ್ಕಳೇ ಬರುತ್ತಿಲ್ಲ ಎಂದು ಗೊಣಗುವವರಿಗೆ ಕೆ.ಆರ್.ಪೇಟೆಯ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ 'ಮಾದರಿ'ಯಾಗಿದೆ.
ಇಲ್ಲಿ ತರಗತಿ ಆರಂಭವಾದ ಮೂರೇ ದಿನಕ್ಕೆ 236 ವಿದ್ಯಾರ್ಥಿಗಳು ದಾಖಲಾಗಿದ್ದು, ಒಂದು ಸರ್ಕಾರಿ ಶಾಲೆ ಹೀಗೂ ಇರಬಹುದು ಎಂಬುವುದಕ್ಕೂ ಇದು ನಿದರ್ಶನವಾಗಿದೆ.
ವಿದ್ಯಾರ್ಥಿಗಳ ವಿದ್ಯಾದಾಹ ತಣಿಸುವ ಸಲುವಾಗಿ 1910ರಲ್ಲಿ ಆರಂಭವಾದ ಶಾಲೆ ಇದೀಗ ಶತಮಾನವನ್ನು ಪೂರೈಸಿದೆ. ಅಲ್ಲಿಂದ ಇಲ್ಲಿಯವರೆಗೆ ಈ ಶಾಲೆಯಲ್ಲಿ ಲಕ್ಷಾಂತರ ಮಂದಿ ವಿದ್ಯೆ ಪಡೆದಿದ್ದಾರೆ. [ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ಸರ್ಕಾರಕ್ಕೆ ಧಿಕ್ಕಾರ!]
ಬೇರೆ ಕಡೆಗಳಲ್ಲಿರುವ ಸರ್ಕಾರಿ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಸ್ಥಿತಿಗೆ ತಲುಪಿದ್ದರೆ, ಇಲ್ಲಿ ಮಾತ್ರ ದಾಖಲಾತಿ ಮುಗಿದಿದೆ ಎಂಬ ಫಲಕ ಕಂಡುಬರುತ್ತಿರುವುದು ಅಚ್ಚರಿ ಮೂಡಿಸುತ್ತಿದೆ. ಅಷ್ಟೇ ಅಲ್ಲ, ಈ ಶಾಲೆ ಎಷ್ಟರ ಮಟ್ಟಿಗೆ ಖ್ಯಾತಿ ಪಡೆದಿದೆ ಎಂಬುದಕ್ಕೆ ಸಾಕ್ಷಿ ಮುಂದಿದೆ.
ಸರ್ಕಾರಿ ಶಾಲೆಯೊಂದು ಖಾಸಗಿ ಶಾಲೆಗೆ ಸೆಡ್ಡು ಹೊಡೆದು ಅಭಿವೃದ್ಧಿ ಕಾಣುವುದು ಇವತ್ತಿನ ದಿನಗಳಲ್ಲಿ ಅಷ್ಟು ಸುಲಭವಲ್ಲ. ಅದಕ್ಕೆ ಕಠಿಣ ಶ್ರಮ, ಶಿಸ್ತುಪಾಲನೆ, ಉತ್ತಮ ಶಿಕ್ಷಣ ಮತ್ತು ಕಾಳಜಿ ಬೇಕಾಗುತ್ತದೆ. ಅದೆಲ್ಲವನ್ನು ಈ ಶಾಲೆಯಲ್ಲಿ ರೂಢಿಸಿಕೊಂಡು ಬಂದಿದ್ದರ ಪರಿಣಾಮವೇ ಸರ್ಕಾರಿ ಶಾಲೆಯಾದರೂ ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. [ಮರಳಿ ಶಾಲೆಗೆ : ಇಲ್ಲಿ ಬಾಗಿಲು ತೆರೆದಿದೆ, ಛಾವಣಿಯೂ ತೆರೆದಿದೆ!]
ಈ ಸರ್ಕಾರಿ ಶಾಲೆಯ ಅಭಿವೃದ್ಧಿ ಹಿಂದೆ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರ ಶ್ರಮ ಮತ್ತು ಕಾಳಜಿ ಇರುವುದನ್ನು ಅಲ್ಲಗಳೆಯುವಂತಿಲ್ಲ. ಎಲ್ಲರೂ ಖಾಸಗಿ ಶಾಲೆಯತ್ತ ಒಲವು ತೋರುತ್ತಿದ್ದ ಸಂದರ್ಭವೇ ಇಲ್ಲಿ ಪೂರ್ವ ಪ್ರಾಥಮಿಕ (ಎಲ್ಕೆಜಿ-ಯುಕೆಜಿ) ಶಾಲೆಯನ್ನು ಆರಂಭಿಸಲಾಯಿತು.
ಮಕ್ಕಳಿಗೆ ಶಿಸ್ತುಬದ್ಧ ಕಾನ್ವೆಂಟ್ ಮಾದರಿಯ ಸಮವಸ್ತ್ರವನ್ನು ಉಚಿತವಾಗಿ ನೀಡಲು ಕ್ರಮ ಕೈಗೊಳ್ಳಲಾಯಿತು. ಮಕ್ಕಳಿಗೆ ಆಂಗ್ಲ ಶಿಕ್ಷಣ ನೀಡಲು ಶಿಕ್ಷಕರನ್ನು ನೇಮಿಸಲಾಯಿತು. ಶಾಲೆಯ ಅಭಿವೃದ್ಧಿಗೆ ಎಸ್ಡಿಎಂಸಿ ಸದಸ್ಯರು ಟೊಂಕ ಕಟ್ಟಿ ನಿಂತರು. ಶಿಕ್ಷಕರು ಕೂಡ ಮಕ್ಕಳಿಗೆ ಉತ್ತಮವಾಗಿ ಬೋಧನೆ ಮಾಡಲಾರಂಭಿಸಿದರು. ಇದರ ಪರಿಣಾಮವಾಗಿ ಶಾಲೆ ಅಭಿವೃದ್ಧಿ ಕಾಣತೊಡಗಿತು. [ಮರಳಿ ಶಾಲೆಗೆ : ಇಲ್ಲಿ ಬಾಗಿಲು ತೆರೆದಿದೆ, ಛಾವಣಿಯೂ ತೆರೆದಿದೆ!]
ಸಾವಿರಾರು ರೂಪಾಯಿ ಡೊನೇಷನ್ ನೀಡಿ ಖಾಸಗಿ ಶಾಲೆಗೆ ಸೇರಿಸುವ ಬದಲು ಇದೇ ಶಾಲೆಗೆ ಸೇರಿಸೋಣ ಎಂಬ ಭಾವನೆ ಪೋಷಕರಲ್ಲಿ ಬರತೊಡಗಿತು. ಇದರ ಫಲವಾಗಿ 131 ವಿದ್ಯಾರ್ಥಿಗಳಿಗೆ ಕುಸಿದಿದ್ದ ಶಾಲಾ ದಾಖಲಾತಿ ಕ್ರಮೇಣ ಏರಿಕೆಯಾಗತೊಡಗಿತು.
ಇವತ್ತು ಈ ಶಾಲೆಯಲ್ಲಿ ಎಲ್ಕೆಜಿಯಿಂದ 7ನೇ ತರಗತಿವರೆಗೆ ಸುಮಾರು 800 ವಿದ್ಯಾರ್ಥಿಗಳು ಕಲಿಯುತ್ತಿದ್ದು, ದಾಖಲಾತಿ ಮುಗಿದೆ ಎಂಬ ಫಲಕ ಹಾಕುವಷ್ಟರ ಮಟ್ಟಿಗೆ ಬೆಳೆದಿರುವುದು ನಿಜಕ್ಕೂ ಸಂತೋಷ ಪಡುವ ವಿಚಾರವಾಗಿದೆ. [ಅಧ್ಯಾಪಕರಿಲ್ಲದ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳೇ ಟೀಚರ್ಸ್]
ರಾಜ್ಯದಲ್ಲಿರುವ ಬಹಳಷ್ಟು ಶಾಲೆಗಳಲ್ಲಿ ಮೂಲಸೌಕರ್ಯಗಳಿಲ್ಲ. ಕುಳಿತುಕೊಳ್ಳಲು ಪೀಠೋಪಕರಣಗಳು ಕೂಡ ಇಲ್ಲ. ಆದರೆ ಈ ಶಾಲೆಯಲ್ಲಿ ಹಾಗಲ್ಲ. ಇಲ್ಲಿ ಎಲ್ಲ ರೀತಿಯ ಸೌಲಭ್ಯಗಳಿವೆ. ಇದು ಹೇಗೆ ಸಾಧ್ಯವಾಯಿತೆಂದರೆ ಒಂದಷ್ಟು ಸರ್ಕಾರದ ಅನುದಾನದಿಂದ ಆಗಿದ್ದರೆ, ಉಳಿದಂತೆ ದಾನಿಗಳ ಕೊಡುಗೆ ಎಂದರೆ ತಪ್ಪಾಗಲಾರದು.
ಶಾಲೆಗೆ ಕೊಡುಗೆ ನೀಡಿರುವ ದಾನಿಗಳ ದೊಡ್ಡಪಟ್ಟಿಯೇ ಇದ್ದು ಅವರಲ್ಲಿರುವ ಶಾಲೆ ಬಗೆಗಿನ ಒಲವೇ ಇವತ್ತು ಸರ್ಕಾರಿ ಶಾಲೆಯೊಂದು ಮಾದರಿ ಶಾಲೆಯಾಗಿ ಅಭಿವೃದ್ಧಿ ಕಾಣಲು ಸಾಧ್ಯವಾಗಿದೆ.