6 ಹೊಸ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಚಿಂತನೆ - ಶರಣ ಪ್ರಕಾಶ್ ಪಾಟೀಲ್
ಕರ್ಣಾಟಕದ 6 ಕಡೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಬೆಂಗಳೂರು, ಏಪ್ರಿಲ್ 12: ಯಾದಗಿರಿ, ಬಾಗಲಕೋಟೆ, ಹಾವೇರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಸೇರಿ 6 ಕಡೆಗಳಲ್ಲಿ ಹೊಸ ವೈದ್ಯಕೀಯ ಕಾಲೇಜು ಪ್ರಾರಂಭಕ್ಕೆ ಚಿಂತನೆ ನಡೆಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಶರಣ ಪ್ರಕಾಶ್ ಪಾಟೀಲ್, "ಈಗಾಗಲೇ ವೈದ್ಯಕೀಯ ಪಿಜಿ ಕೋರ್ಸ್ ಗಳಿಗೆ ಕೌನ್ಸಲಿಂಗ್ ಪ್ರಾರಂಭವಾಗಿದೆ. ಆಪ್ಶನ್ ಎಂಟ್ರಿಯನ್ನೂ ಆರಂಭಿಸಲಾಗಿದೆ. ಇದು ಮುಗಿದ ನಂತರ ಎರಡನೇ ಹಂತದ ಕೌನ್ಸಿಲಿಂಗ್ ನಡೆಸುತ್ತೇವೆ. ಈ ತಿಂಗಳ 27 ಒಳಗೆ ಕೌನ್ಸಲಿಂಗ್ ಪ್ರಕ್ರಿಯೆ ಮುಗಿಸಲು ಸುಪ್ರೀಂ ಕೋರ್ಟ್ ತಿಳಿಸಿದೆ. ಇದರಂತೆ ಪ್ರಕ್ರಿಯೆ ಮುಗಿಸುತ್ತೇವೆ," ಎಂದು ಹೇಳಿದ್ದಾರೆ.
ಸೀಟು ಹಂಚಿಕೆ
ಈ ಬಾರಿ ಶೇ.75 % ಸರ್ಕಾರಿ ಕೋಟಾ, ಶೇ. 15 ಎನ್.ಆರ್.ಐ ಕೋಟಾ ಹಾಗೂ ಶೇ.10 % ಮ್ಯಾನೇಜ್ ಮೆಂಟ್ ಕೋಟಾ ಸೀಟುಗಳು ಲಭ್ಯವಿವೆ. ಇನ್ನು ಡೀಮ್ಡ್ ವಿವಿಗಳು 25 % ಸೀಟು ಕೊಡಲು ಒಪ್ಪಿಗೆ ನೀಡಿವೆ ಎಂದು ಶರಣ ಪ್ರಕಾಶ್ ಪಾಟೀಲ್ ಮಾಹಿತಿ ನೀಡಿದ್ದಾರೆ.
ಈ ಬಾರಿ ಶೇಕಡಾ 10 -15ರಷ್ಟು ಮಾತ್ರ ವೈದ್ಯಕೀಯ ಕೋರ್ಸ್ ಗಳಿಗೆ ಶುಲ್ಕ ಹೆಚ್ಚಳ ಮಾಡಿದ್ದೇವೆ. ಡೀಮ್ಡ್ ವಿವಿಗಳ ಶುಲ್ಕ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ. ಹೀಗಾಗಿ ಡೀಮ್ಡ್ ವಿವಿಗಳು ಅವರಿಗೆ ಅನುಕೂಲವಾಗುವಂತೆ ಶುಲ್ಕ ಹೆಚ್ಚಳ ಮಾಡಿವೆ ಎಂದು ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
ಕಿಮ್ಸ್ ಅಕ್ರಮ
ಸೀಟು ಹಂಚಿಕೆಯಲ್ಲಿ ಕಿಮ್ಸ್ ನಲ್ಲಿ ಅಕ್ರಮ ನಡೆದಿರೋದನ್ನು ಸಚಿವರು ಇದೇ ವೇಳೆ ಒಪ್ಪಿಕೊಂಡಿದ್ದಾರೆ. ಕಿಮ್ಸ್ ನ ಎನ್.ಆರ್.ಐ ಕೋಟಾದಲ್ಲಿ ದಂತ ವೈದ್ಯಕೀಯ ಸೀಟು ಪಡೆದು ಇಪ್ಪತ್ತೈದು ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿದ್ದಾರೆ. ಇವರಿಗೆ ನಾವೇನು ಮಾಡಲಾಗದು ಎಂದು ಶರಣ ಪ್ರಕಾಶ್ ಪಾಟೀಲ್ ಹೇಳಿದ್ದಾರೆ.
"ಸದ್ಯ ಈ ವಿದ್ಯಾರ್ಥಿಗಳ ಬಗ್ಗೆ ನಾವು ನಿರ್ಧಾರ ಮಾಡಲು ಆಗುವುದಿಲ್ಲ. ಅವರ ಭವಿಷ್ಯವನ್ನು ಕೋರ್ಟ್ ನಿರ್ಧರಿಸಲಿದೆ. ಅವರ ಸೀಟುಗಳನ್ನು ಬಿಡುಗಡೆ ಮಾಡಿ, ವಿದ್ಯಾರ್ಥಿಗಳ ಹಣ ವಾಪಸ್ ನೀಡುವಂತೆ ತಿಳಿಸಲಾಗಿದೆ," ಎಂದು ಪಾಟೀಲ್ ಹೇಳಿದ್ದಾರೆ.
ಕಳೆದ ವರ್ಷ ಸೀಟು ಹಂಚಿಕೆಗೆ ಸರಿಯಾದ ನಿಯಮಗಳು ಇರಲಿಲ್ಲ. ಈ ಬಾರಿ ಇಂತಹ ಘಟನೆಗಳು ನಡೆಯದಂತೆ ಸೂಕ್ತ ನಿಯಮಗಳನ್ನು ಜಾರಿಗೆ ತಂದಿದ್ದೇವೆ. ವಿದ್ಯಾರ್ಥಿಗಳ ಸೀಟು ಹಿಂಪಡೆದು ಹಣ ನೀಡದೇ ಇದ್ದರೆ ಸರ್ಕಾರ ಕಿಮ್ಸ್ ವಿರುದ್ದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಶರಣ್ ಪ್ರಕಾಶ್ ಪಾಟೀಲ್ ಭರವಸೆ ನೀಡಿದ್ದಾರೆ.