ಕಾಂಗ್ರೆಸ್ ಪಕ್ಷದ ಆಳಕ್ಕಿಳಿದಿದೆ ಭಯೋತ್ಪಾದನೆಯ ಬೇರು: ರಘುಪತಿ ಭಟ್
ಉಡುಪಿ, ಜನವರಿ 7: ಶಿವಮೊಗ್ಗದ ಬಾಂಬ್ ಟ್ರಯಲ್, ಮಂಗಳೂರು ಕುಕ್ಕರ್ ಸ್ಛೋಟ ಪ್ರಕರಣದ ತನಿಖೆಗೆ ಸಂಬಂಸಿ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದ ರಿಶಾನ್ ತಂದೆ ತಾಜುದ್ದೀನ್ ಶೇಖ್ ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದು ಭಯೋತ್ಪಾದನೆಯ ಬೇರು ಕಾಂಗ್ರೆಸ್ ಪಕ್ಷದ ಆಳಕ್ಕಿಳಿದಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಆರೋಪಿಸಿದ್ದಾರೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಅವರು, ಕರಾವಳಿಯ ಶಾಸಕ, ಮಾಜಿ ಸಚಿವರೊಬ್ಬರಿಗೆ ತಾಜುದ್ದೀನ್ ಆಪ್ತರಾಗಿದ್ದು ಸೂಕ್ತ ದಾಖಲೆ ಇಲ್ಲದೆ ಎನ್ಐಎ ದಾಳಿ ನಡೆಸದು, ತಾಜುದ್ದೀನ್ ಅವರನ್ನು ಪಕ್ಷದಿಂದ ವಜಾ ಮಾಡುತ್ತೀರಾ ಇಲ್ಲಾ ಭಡ್ತಿ ನೀಡುತ್ತೀರಾ ಎಂದು ಕಾಂಗ್ರೆಸ್ ನಾಯಕರನ್ನ ರಘುಪತಿ ಭಟ್ ಪ್ರಶ್ನಿಸಿದ್ದಾರೆ.
ಇನ್ನೂ ಕರಾವಳಿಯಲ್ಲಿ ಎಲ್ಲೆಲ್ಲಿ ಭಯೋತ್ಪಾದನೆಯ ಜಾಲ ಹರಡಿದೆಯೋ ಎನ್ನುವ ಆತಂಕ ಮೂಡುವಂತಾಗಿದ್ದು ರಿಶಾನ್ ತಾಯಿ, ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದು ಪ್ರಧಾನಿ ಮೋದಿ ಅವಹೇಳನ ಸಹಿತ ಆಕೆಯ ಚಟುವಟಿಕೆಗಳ ವಿರುದ್ಧ ಪೆನ್ ಡ್ರೈವ್ ಸಹಿತ ರಾಜ್ಯ ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ಅವರಿಗೆ ದೂರು ನೀಡಲಾಗಿದೆ.
ಕುಕ್ಕರ್ ಬಾಂಬ್ ಸ್ಛೋಟದ ಆರೋಪಿ ಜತೆಗೆ ಆರ್ಥಿಕ ವ್ಯವಹಾರದಲ್ಲಿ ನೆರವಾದ ಶಂಕೆ ಹಿನ್ನೆಲೆಯಲ್ಲಿ ಎನ್ಐಎ ದಾಳಿ ನಡೆಸಿದೆ ಎಂದರು.
ಇನ್ನೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನರೇಂದ್ರ ಮೋದಿ ಅವರ ಮುಂದೆ ನಾಯಿಮರಿ ತರ ಗಡಗಡ ಅಂತಾರೆ ಎನ್ನುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿಕೆ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಮಾಜಿ ಸಿಎಂ ನಾಯಿಗೆ ಹೋಲಿಸಿದ್ದು ಕಾಂಗ್ರೆಸ್ ಸಂಸ್ಕೃತಿ, ವ್ಯಕ್ತಿತ್ವವನ್ನು ತೋರಿಸುತ್ತದೆ. ಮತ್ತೆ ಸಿಎಂ ಆಗುವ ಸಿದ್ದರಾಮಯ್ಯ ಕನಸು ನನಸಾಗದು ಎಂದು ನುಡಿದರು.
ಸಂತೆಕಟ್ಟೆಯಲ್ಲಿ ಓವರ್ಪಾಸ್ ಕಾಮಗಾರಿ ಸ್ಥಗಿತವಾಗಿದ್ದು ವಾಹನ ಸಂಚಾರ ವ್ಯವಸ್ಥೆ, ದಟ್ಟಣೆ ಹಿನ್ನೆಲೆಯಲ್ಲಿ ಪರ್ಯಾಯ ವ್ಯವಸ್ಥೆಗೆ ಕ್ರಮ ಕೈಗೊಂಡು ಕಾಮಗಾರಿ ಮತ್ತೆ ಆರಂಭಿಸಲಾಗುವುದು. ಒಂದು ವರ್ಷದೊಳಗೆ 25ಮೀಟರಿನ ಡಬ್ಬಲ್ ಬ್ರಿಡ್ಜ್ ಕಾಮಗಾರಿ ಪೂರ್ಣವಾಗಲಿದೆ ಎಂದು ಹೇಳಿದರು.