ರಾಜ್ಯದ ರೈತರಿಗೆ ಗುಡ್ ನ್ಯೂಸ್: ಜಮೀನು ದಾರಿಗೆ ಸರ್ಕಾರದಿಂದ ಹೊಸ ನಿಯಮ ಜಾರಿ
ಬೆಂಗಳೂರು, ಮಾರ್ಚ್ 05: ಗ್ರಾಮೀಣ ಭಾಗದಲ್ಲಿ ಅತ್ಯುತ್ತಮ ರಸ್ತೆ ಸಂಪರ್ಕ ಒದಗಿಸುವುದು ನಮ್ಮ ಗುರಿಯಾಗಿದೆ. ಅದಕ್ಕಾಗಿ ರಾಜ್ಯ ಸರ್ಕಾರ ವಿನೂತನ ಯೋಜನೆಗಳನ್ನು ಜಾರಿಗೆ ತಂದಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. ನಮ್ಮ ಗ್ರಾಮ, ನಮ್ಮ ಹೊಲ' ಯೋಜನೆ ಸ್ಥಗಿತವಾಗಿರುವುದರಿಂದ ರೈತರು ಹೊಲಕ್ಕೆ ಹೋಗುವ ದಾರಿಗಳಿಗೆ ಅವಕಾಶ ಕಲ್ಪಿಸುವ ನೀತಿಯನ್ನು ಹೊಸ ರೂಪದಲ್ಲಿ ತರುವಂತೆ ಮಾನ್ಯ ಮುಖ್ಯಮಂತ್ರಿಗಳಿಗೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದೇನೆ. ಅದು ಈ ಬಜೆಟ್ನಲ್ಲಿ ಮಂಡನೆಯಾಗುವ ಸಾಧ್ಯತೆ ಇದೆ ಎಂದರು.
ಪ್ರಗತಿಪಥ ಎಂಬ ವಿನೂತನ ಕಾರ್ಯಕ್ರಮದಡಿ ₹5,000 ಕೋಟಿ ಖರ್ಚು ಮಾಡಿ, ಎಲ್ಲ ಶಾಸಕರಿಗೆ ಕನಿಷ್ಠ 15 ಕಿಮೀ ರಸ್ತೆ ಅಭಿವೃದ್ಧಿ ಅವಕಾಶ ಕೊಡಬೇಕು ಸಂಕಲ್ಪ ಇಟ್ಟುಕೊಂಡಿದ್ದೇವೆ. ಇದಕ್ಕೆ ಆರ್ಥಿಕ ವ್ಯವಹಾರಗಳ ಇಲಾಖೆಯಿಂದ ಸಮ್ಮತಿ ಸಿಕ್ಕಿದೆ. ಈ ತಿಂಗಳ ಒಳಗೆ ಇದರ ಎಲ್ಲ ಮಾನದಂಡಗಳನ್ನು ಕಾರ್ಯಕಾರಿ ಎಂಜಿನಿಯರ್ಗೆ ತಲುಪಿಸಿ, ಎಲ್ಲ ಶಾಸಕರ ಆದ್ಯತೆ ಮೇರೆಗೆ ಯೋಜನೆ ಜಾರಿಗೆ ತರುತ್ತೇವೆ. ಹಾಗೆಯೇ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ನಾಲ್ಕನೆಯ ಹಂತದ ಮಾನದಂಡಗಳನ್ನು ಪ್ರಕಟಿಸಲಾಗಿದ್ದು, ನಮ್ಮ ರಾಜ್ಯದಲ್ಲಿ ದೊಡ್ಡ ಗ್ರಾಮಗಳಿಗೆ ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ ರಸ್ತೆಗಳು ಮಂಜೂರು ಆಗಿವೆ.

ಆದರೆ ಇದರ ಮಾನದಂಡಗಳನ್ನು ಸರಳೀಕರಣ ಮಾಡಬೇಕು ಎಂದು ಕೋರಿ ಕೆಲವು ತಿಂಗಳ ಹಿಂದೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದು, ಅದು ಸಾಧ್ಯವಿಲ್ಲ ಎಂದು ತಿರಸ್ಕಾರ ಮಾಡಿದ್ದಾರೆ. ಮತ್ತೊಮ್ಮೆ ರಾಜ್ಯದ ಪರವಾಗಿ ಕೇಂದ್ರ ಸರ್ಕಾರಕ್ಕೆ ವಿನಂತಿ ಮಾಡುತ್ತೇನೆ. ಅವರು ಮಾನದಂಡ ಬದಲಾವಣೆ ಮಾಡದ ಕಾರಣ 'ಪ್ರಗತಿ ಪಥ' ಮತ್ತು 'ಕಲ್ಯಾಣ ಪಥ' ಯೋಜನೆಗಳನ್ನು ತಂದಿದ್ದೇವೆ. ಇದರೊಂದಿಗೆ ಗ್ರಾಮ ಸಡಕ್ ಯೋಜನೆ ಕೂಡ ಬಂದರೆ ರಾಜ್ಯದ ಗ್ರಾಮಗಳಲ್ಲಿ ಉತ್ತಮ ರಸ್ತೆ ಸಂಪರ್ಕ ಕ್ರಾಂತಿ ನಡೆಯಲಿದೆ.
ಪಿಎಂಜಿಎಸ್ವೈ ಮಾನದಂಡಗಳು ಸರಳೀಕರಣವಾಗದ ಹಿನ್ನೆಲೆಯಲ್ಲಿ ಪ್ರಗತಿಪಥ ಮತ್ತು ಕಲ್ಯಾಣ ಪಥ ಯೋಜನೆಗಳನ್ನು ರಾಜ್ಯ ಸರಕಾರ ಜಾರಿಗೆ ತರುತ್ತಿದ್ದು, ಶೀಘ್ರ ಅನುಷ್ಠಾನಗೊಳಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು. ವಿಧಾನಸಭೆಯಲ್ಲಿ ಸದಸ್ಯ ಎನ್.ಎಚ್.ಕೋನರೆಡ್ಡಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸುತ್ತಾ ಅವರು ಈ ವಿಷಯ ತಿಳಿಸಿದರು.
ಪ್ರಗತಿಪಥ ಯೋಜನೆಯ ಅಡಿ 7110 ಕಿ.ಮೀ ಉದ್ದದ ಗ್ರಾಮೀಣ ರಸ್ತೆಗಳನ್ನು ರೂ.5190 ಕೋಟಿಗಳನ್ನು ಅಭಿವೃದ್ಧಿಪಡಿಸಲು ಅನುಮೋದನೆ ನೀಡಲಾಗಿದ್ದು, ಪ್ರಗತಿಪಥ ಯೋಜನೆಗೆ ಕೇಂದ್ರ ಸರಕಾರದ ಹಣಕಾಸು ಸಚಿವಾಲಯ ಇತೀಚೆಗೆ ಅನುಮೋದನೆ ನೀಡಿದೆ. ಪ್ರಗತಿಪಥ ಯೋಜನೆಯ ಶೀಘ್ರ ಅನುಷ್ಠಾನದ ದೃಷ್ಟಿಯಿಂದ ಗ್ರಾಮಪಥ ತಂತ್ರಾಂಶದಲ್ಲಿ ಅರ್ಹ ರಸ್ತೆಗಳ ಆಯ್ಕೆ ಪ್ರಕ್ರಿಯೆ ಹಂತದಲ್ಲಿರುತ್ತದೆ ಎಂದು ಸಚಿವರು ವಿವರಿಸಿದರು.
ನಮ್ಮ ಹೊಲ ನಮ್ಮ ರಸ್ತೆ ಯೋಜನೆ ಜಾರಿಯಲ್ಲಿರುವುದಿಲ್ಲ. ಮಹಾತ್ಮ ಗಾಂಧಿ ನರೇಗಾ ಯೋಜನೆ ಅಡಿ ಗ್ರಾಪಂ ಒಟ್ಟು ವೆಚ್ಚದ ಶೇ.10ರ ಮಿತಿಯೊಳಗೆ ರೈತರ ಜಮೀನುಗಳಿಗೆ ಸಂಪರ್ಕ ಕಲ್ಪಿಸುವ ಆದೇಶವನ್ನು ಹೊರಡಿಸಲಾಗಿದೆ ಎಂದರು.
ಗಂಗಾಕಲ್ಯಾಣ ಯೋಜನೆ ಅಡಿ ಟಾರ್ಗೆಟ್ ಹೆಚ್ಚಳಕ್ಕೆ ಅಗತ್ಯ ಕ್ರಮ: ಮಹಾದೇವಪ್ಪ
ಗಂಗಾಕಲ್ಯಾಣ ಯೋಜನೆ ಅಡಿ ಕೊಳವೆಬಾವಿಗಳ ಭೌತಿಕ ಗುರಿ ಕಡಿಮೆ ಇದೆ ಎನ್ನುವ ಅಭಿಪ್ರಾಯ ಸದಸ್ಯರಿಂದ ವ್ಯಕ್ತವಾಗಿದ್ದು, ಸದರಿ ಕೊಳವೆಬಾವಿಗಳ ಗುರಿಯ(ಟಾರ್ಗೆಟ್) ಪ್ರಮಾಣವನ್ನು ಮುಂದಿನ ದಿನಗಳಲ್ಲಿ ಹೆಚ್ಚಿಸಲು ಸರಕಾರ ಅಗತ್ಯ ಕ್ರಮವನ್ನು ಕೈಗೊಳ್ಳಲಿದೆ ಎಂದು ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಅವರು ತಿಳಿಸಿದರು.
ವಿಧಾನಸಭೆಯಲ್ಲಿ ಚುಕ್ಕೆಗುರುತಿನ ಪ್ರಶ್ನೆಗೆ ಸದಸ್ಯರಾದ ಸುನೀಲಕುಮಾರ್ ವಿ., ಡಾ.ಚಂದ್ರು ಲಮಾಣಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಬಡಜನರನ್ನು ಮೆಲೆತ್ತುವ ಉದ್ದೇಶದಿಂದ ಗಂಗಾಕಲ್ಯಾಣ, ಭೂಒಡೆತನ ಯೋಜನೆಗಳನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ಸರಕಾರ. ಕಾಂಗ್ರೆಸ್ಗೆ ಬಡವರ ಅಭಿವೃದ್ಧಿಯ ಬಗ್ಗೆ ಬದ್ಧತೆ ಇದ್ದು, ಸಮಾಜಕಲ್ಯಾಣ ಇಲಾಖೆಯ ವಿವಿಧ ನಿಗಮಗಳಿಗೆ ಅಗತ್ಯ ಅನುದಾನ ಹೆಚ್ಚಳ, ಗಂಗಾಕಲ್ಯಾಣ ಯೋಜನೆಯ ಭೌತಿಕ ಗುರಿ ಹೆಚ್ಚಳ ಮತ್ತು ಭೂಒಡೆತನ ಯೋಜನೆಗೆ ವಿಶೇಷ ಒತ್ತು ನೀಡಲಾಗುವುದು ಸದನಕ್ಕೆ ತಿಳಿಸಿದ ಸಚಿವ ಮಹಾದೇವಪ್ಪ ಅವರು ಸದನದ ಸದಸ್ಯರು ನೀಡುವ ಸಲಹೆಗಳನ್ನು ಸ್ವೀಕರಿಸಲಾಗುವುದು. ಮಾಡಬೇಕಾಗಿರುವ ಕೆಲಸಗಳನ್ನು ಮಾಡೇ ಮಾಡಲಾಗುವುದು, ಮಾಡಲಾರದ್ದನ್ನು ಮಾಡಲಾಗುವುದಿಲ್ಲ ಎಂದು ಹೇಳಿದರು.
ಭೂಚೇತನ ಯೋಜನೆ ಅಡಿ ವಿಜಯಪುರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ವರದಿಯಾಗಿದ್ದು,ಈಗಾಗಲೇ ತನಿಖೆಗೆ ಸೂಚಿಸಲಾಗಿದ್ದು;ತನಿಖಾ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ಸಮಾಜಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪ ಹೇಳಿದರು.












Click it and Unblock the Notifications