ಕರ್ನಾಟಕದ ಟೋಲ್ ಬೂತ್ ಪುಡಿಗೈದ ಟಿಡಿಪಿ ಸಂಸದನ ಪುತ್ರ
ಟಿಡಿಪಿ ಸಂಸದ ಕೃಷ್ಣಪ್ಪ ನಿಮ್ಮಾಲ ಪುತ್ರ ಅಂಬರೀಶ್ ಮತ್ತು ತಂಡದವರ ಕಾರನ್ನು ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಟೂಲ್ ಬೂತ್ ನ ಸಿಬ್ಬಂದಿಗಳು ನಿಲ್ಲಿಸಿದ್ದಕ್ಕೆ ಟೋಲ್ ಬೂತ್ ಮೇಲೆ ದಾಳಿ ನಡೆಸಿ ಗಾಜುಗಳನ್ನು ಪುಡಿಗೈದಿದ್ದಾರೆ.
ಬೆಂಗಳೂರು, ಏಪ್ರಿಲ್ 24: ಟಿಡಿಪಿ ಸಂಸದರ ಪುತ್ರ ಮಹಾಶಯರೊಬ್ಬರು ಕರ್ನಾಟಕದ ಟೋಲ್ ಬೂತ್ ಪುಡಿಗೈದು ತಮ್ಮ ಪ್ರತಾಪ ತೋರಿದ್ದಾರೆ. ಈ ಎಲ್ಲಾ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿವೆ.
ಟಿಡಿಪಿ ಸಂಸದ ಕೃಷ್ಣಪ್ಪ ನಿಮ್ಮಾಲ ಪುತ್ರ ಅಂಬರೀಶ್ ಮತ್ತು ತಂಡದವರು ಚಿಕ್ಕಬಳ್ಳಾಪುರದ ಬಾಗೇಪಲ್ಲಿ ಟೂಲ್ ಬೂತ್ ಮೇಲೆ ದಾಳಿ ನಡೆಸಿದ್ದಾರೆ. ಟೋಲ್ ಬೂತ್ ನಲ್ಲಿ ಅಂಬರೀಶ್ ಕಾರು ತಡೆದಿದ್ದಕ್ಕಾಗಿ ಅವರು ದಾಳಿ ನಡೆಸಿದ್ದಾಗಿ ಟೋಲ್ ಬೂತ್ ಸಿಬ್ಬಂದಿಗಳು ಹೇಳಿದ್ದಾರೆ.[ರಾಮಚಂದ್ರಾಪುರ ಮಠದಿಂದ 550 ಟನ್ ಮೇವು ಪೂರೈಕೆ]
ಕೃಷ್ಣಪ್ಪ ಹಿಂದೂಪುರ ಕ್ಷೇತ್ರದ ಸಂಸತ್ ಸದಸ್ಯರಾಗಿದ್ದಾರೆ. ಸಿಸಿಟಿವಿಯಲ್ಲಿ ಅವರು ಪುತ್ರ ಸೇರಿ 4 ಜನ ಟೋಲ್ ಬೂತ್ ನ ಗಾಜುಗಳನ್ನು ಪುಡಿಗೈಯುವ ದೃಶ್ಯಗಳು ದಾಖಲಾಗಿದೆ. ಟೋಲ್ ಬೂತ್ ನಲ್ಲಿ ಕಾರು ನಿಲ್ಲಿಸುತ್ತಿದ್ದಂತೆ ಕಾರಿನಿಂದ ಇಳಿದ ನಾಲ್ಕು ಜನ ಏಕಾಏಕಿ ಟೋಲ್ ಬೂತ್ ಗಾಜುಗಳು ಮತ್ತು ಬಾಗಿಲನ್ನು ಪುಡಿಗೈದಿದ್ದಾರೆ.[10 ಸಾವಿರ ಟನ್ ದಾಟಲಿದೆ ಕರ್ನಾಟಕದ ಮಾವು ರಫ್ತು]
ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಇನ್ನು ಘಟನೆ ಸಂಬಂಧ ಪೊಲೀಸರು ಪ್ರತ್ಯಕ್ಷದರ್ಶಿಗಳ ಹೇಳಿಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನೂ ಪಡೆದುಕೊಂಡಿದ್ದಾರೆ. ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ.