10 ರೈಲು ರದ್ದುಗೊಳಿಸಿದ ನೈಋತ್ಯ ರೈಲ್ವೆ; ಪಟ್ಟಿ ನೋಡಿ
ಬೆಂಗಳೂರು, ಜೂನ್ 01; ನೈಋತ್ಯ ರೈಲ್ವೆ ಹಲವು ರೈಲುಗಳ ಸಂಚಾರ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಪ್ರಯಾಣಿಕರ ಕೊರತೆ ಕಾರಣ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಈ ರೈಲುಗಳ ಪಟ್ಟಿಯನ್ನು ಸಹ ಬಿಡುಗಡೆ ಮಾಡಲಾಗಿದೆ.
ಟ್ವೀಟ್ ಮೂಲಕ ನೈಋತ್ಯ ರೈಲ್ವೆ ಈ ಕುರಿತು ಮಾಹಿತಿ ನೀಡಿದೆ. ಶೇ 5ಕ್ಕಿಂತ ಕಡಿಮೆ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದ ಕಾರಣ ಈ ರೈಲುಗಳ ಸಂಚಾರವನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಎಲ್ಲಾ ರೈಲುಗಳು ಬೆಂಗಳೂರು ನಗರವನ್ನು ಹೊರವಲಯದಿಂದ ಸಂಪರ್ಕಿಸುತ್ತಿವೆ. ಕಡಿಮೆ ಪ್ರಯಾಣ ದರ ಇದ್ದರೂ ಸಹ ಈ ರೈಲುಗಳಲ್ಲಿ ಜನರು ಸಂಚಾರ ನಡೆಸುತ್ತಿಲ್ಲ.

ಈ ರೈಲುಗಳ ರದ್ದು ತಾತ್ಕಾಲಿಕವೂ ಅಥವ ಖಾಯಂ? ಎಂದು ಟ್ವೀಟ್ನಲ್ಲಿ ಮಾಹಿತಿ ನೀಡಿಲ್ಲ. ಆದರೆ ರೈಲುಗಳು ಹೆಸರು, ಹೊರಡುವ ದಿನಾಂಕಗಳನ್ನು ಟ್ವೀಟ್ನಲ್ಲಿ ಉಲ್ಲೇಖ ಮಾಡಲಾಗಿದೆ. ಪ್ರಯಾಣಿಕರು ರದ್ದುಗೊಂಡಿರುವ ರೈಲುಗಳ ಬಗ್ಗೆ ಮಾಹಿತಿ ತಿಳಿದಿರುವುದು ಉತ್ತಮ.
ಯಾವ-ಯಾವ ದಿನಾಂಕ; ರದ್ದುಗೊಂಡಿರುವ ರೈಲುಗಳ ದಿನಾಂಕ ಹೀಗಿದೆ. 1/6/2023 ರಿಂದ 3/6/2023ರ ತನಕ. 5/6/2023 ರಿಂದ 10/6/2023 ಮತ್ತು 12/6/2023 ರಿಂದ 17/6/2023. ಅಂದರೆ ಜೂನ್ ತಿಂಗಳ 17ರ ತನಕ ಈ ರೈಲುಗಳ ಸಂಚಾರ ರದ್ದುಗೊಂಡಿದೆ. ಒಟ್ಟು 10 ರೈಲುಗಳನ್ನು ರದ್ದು ಮಾಡಲಾಗಿದೆ.

* ರೈಲು ನಂಬರ್ 06531 ಕೆಎಆರ್ ಬೆಂಗಳೂರು-ದೇವನಹಳ್ಳಿ ಮೆಮು ಎಕ್ಸ್ಪ್ರೆಸ್
* ರೈಲು ನಂಬರ್ 06533 ದೇವನಹಳ್ಳಿ-ಯಲಹಂಕ ಮೆಮು ಎಕ್ಸ್ಪ್ರೆಸ್
* ರೈಲು ನಂಬರ್ 06534 ಯಲಹಂಕ-ಕೆಐಎ ಮೆಮು ಎಕ್ಸ್ಪ್ರೆಸ್
* ರೈಲು ನಂಬರ್ 06535 ದೇವನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್ ಮೆಮು ಎಕ್ಸ್ಪ್ರೆಸ್
* ರೈಲು ನಂಬರ್ 06536 ಬೆಂಗಳೂರು ಕಂಟೋನ್ಮೆಂಟ್- ದೇವನಹಳ್ಳಿ ಮೆಮು ಎಕ್ಸ್ಪ್ರೆಸ್
* ರೈಲು ನಂಬರ್ 06537 ದೇವನಹಳ್ಳಿ-ಬೆಂಗಳೂರು ಕಂಟೋನ್ಮೆಂಟ್ ಮೆಮು ಎಕ್ಸ್ಪ್ರೆಸ್
* ರೈಲು ನಂಬರ್ 06538 ಬೆಂಗಳೂರು ಕಂಟೋನ್ಮೆಂಟ್-ದೇವನಹಳ್ಳಿ ಮೆಮು ಎಕ್ಸ್ಪ್ರೆಸ್
* ರೈಲು ನಂಬರ್ 06539 ದೇವನಹಳ್ಳಿ-ಯಲಹಂಕ ಮೆಮು ಎಕ್ಸ್ಪ್ರೆಸ್
* ರೈಲು ನಂಬರ್ 06540 ಯಲಹಂಕ-ದೇವನಹಳ್ಳಿ ಮೆಮು ಎಕ್ಸ್ಪ್ರೆಸ್
* ರೈಲು ನಂಬರ್ 06532 ದೇವನಹಳ್ಳಿ- ಕೆಎಸ್ಆರ್ ಬೆಂಗಳೂರು ಮೆಮು ಎಕ್ಸ್ಪ್ರೆಸ್
ನೈಋತ್ಯ ರೈಲ್ವೆ ರದ್ದುಗೊಳಿಸಿದ ಎಲ್ಲಾ ರೈಲುಗಳು ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಇತರ ಹೊರವಲಯಕ್ಕೆ ಸಂಪರ್ಕ ಕಲ್ಪಿಸುವ ಮೆಮು ರೈಲುಗಳಾಗಿವೆ. ಕಡಿಮೆ ಪ್ರಯಾಣ ದರವಿದ್ದರೂ ಪ್ರಯಾಣಕರ ಕೊರತೆ ಕಾರಣ ಈ ರೈಲುಗಳನ್ನು ರದ್ದುಗೊಳಿಸಲಾಗಿದೆ.
ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರೈಲುಗಳ ಪ್ರಯಾಣ ದರ ಕೇವಲ 30 ರೂ. ಆಗಿದೆ. ಕ್ಯಾಬ್ಗಳ ದರಕ್ಕೆ ಹೋಲಿಕೆ ಮಾಡಿದರೆ ಇದರ ದರ ನೂರಾರು ರೂ. ಕಡಿಮೆ ಇದೆ. ಆದರೂ ಜನರು ಏಕೆ ಸಂಚಾರ ನಡೆಸುತ್ತಿಲ್ಲ? ಎಂಬ ಪ್ರಶ್ನಗೆ ಉತ್ತರವಿಲ್ಲ.
ಕಳೆದ ವರ್ಷ ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಕೆಐಎ ಹಾಲ್ಟ್ ಸ್ಟೇಷನ್ಗೆ ಭೇಟಿ ನೀಡಿದ್ದರು. ಬೆಂಗಳೂರು ನಗರ-ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಸರಿಯಾದ ಅಧ್ಯಯನ ನಡೆಸಿ ಹೆಚ್ಚುವರಿ ರೈಲು ಓಡಿಸಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಆದರೆ ಈ ಮಾರ್ಗ ಪ್ರಯಾಣಿಕರನ್ನು ಸೆಳೆಯಲು ಪದೇ ಪದೇ ವಿಫಲವಾಗುತ್ತಿದೆ.
ರದ್ದುಗೊಂಡಿರುವ ಎಲ್ಲಾ ರೈಲುಗಳಲ್ಲಿ ಶೇ 4ರಷ್ಟು ಪ್ರಯಾಣಿಕರು ಮಾತ್ರ ಸಂಚಾರ ನಡೆಸುತ್ತಿದ್ದಾರೆ. 8 ಬೋಗಿಗಳ ಈ ರೈಲುಗಳ ಪ್ರತಿ ಬೋಗಿ 70 ಸೀಟುಗಳನ್ನು ಒಳಗೊಂಡಿದೆ. ಒಂದು ಬೋಗಿಯಲ್ಲಿ ಕೇವಲ 10 ರಿಂದ 12 ಜನರು ಸಂಚಾರ ನಡೆಸುತ್ತಿದ್ದು, ರೈಲು ರದ್ದುಗೊಳಿಸುವುದು ಅನಿವಾರ್ಯವಾಗಿತ್ತು ಎಂಬುದು ಅಧಿಕಾರಿಗಳ ಮಾತು.












Click it and Unblock the Notifications