ವಿವಿಧ ಇಲಾಖೆಗಳಲ್ಲಿ ಹುದ್ದೆ ಕಡಿತ ಮಾಡಲಿದೆ ಸರ್ಕಾರ
ಬೆಂಗಳೂರು, ಫೆಬ್ರವರಿ 20: ಬೊಕ್ಕಸಕ್ಕೆ ಆಗುವ ಹೊರೆ ತಪ್ಪಿಸಲು ವಿವಿಧ ಇಲಾಖೆಗಳಲ್ಲಿರುವ ಅನಗತ್ಯ ಹುದ್ದೆಗಳನ್ನು ಕಡಿತಗೊಳಿಸಲು ಕರ್ನಾಟಕ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಸಮಗ್ರ ವರದಿ ನೀಡಲು ಸಂಪುಟ ಉಪ ಸಮಿತಿಯನ್ನು ರಚನೆ ಮಾಡಲಾಗಿದೆ.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಲಾಗಿದೆ. ಕಂದಾಯ ಸಚಿವ ಆರ್. ಅಶೋಕ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದ್ದು, ಐವರು ಸಚಿವರು ಸಮಿತಿಯಲ್ಲಿದ್ದಾರೆ.
ಯಾವ-ಯಾವ ಇಲಾಖೆಯಲ್ಲಿ ಹುದ್ದೆಗಳನ್ನು ವಿಲೀನ ಮಾಡಬಹುದು ಎಂಬುದನ್ನು ಉಪ ಸಮಿತಿ ಅಧ್ಯನ ನಡೆಸಲಿದೆ. ಮೂರು ತಿಂಗಳ ಒಳಗಾಗಿ ಸಂಪುಟ ಉಪ ಸಮಿತಿ ಸರ್ಕಾರಕ್ಕೆ ವರದಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ.
ಸರ್ಕಾರದ ಆಯವ್ಯಯದ ಶೇ 70ರಷ್ಟು ಸಂಪನ್ಮೂಲ ನೌಕರರ ವೇತನಕ್ಕೆ ಬಳಕೆಯಾಗುತ್ತಿದೆ. ಆದ್ದರಿಂದ, ಸರ್ಕಾರದ ಬೊಕ್ಕಸಕ್ಕೆ ಆಗುತ್ತಿರುವ ಹೊರೆ ತಪ್ಪಿಸಲು ಅನಗತ್ಯ ಹುದ್ದೆಗಳನ್ನು ಕಡಿತಗೊಳಿಸಲಾಗುತ್ತಿದೆ. ಇದಕ್ಕಾಗಿ ಸಂಪುಟ ಉಪ ಸಮಿತಿಯಿಂದ ವರದಿ ಕೇಳಲಾಗಿದೆ.

ಸರ್ಕಾರದ ಆದೇಶವೇನು?
17/2/2020ರಂದು ನಡೆದ ಸಚಿವ ಸಂಪುಟ ನಿರ್ಣಯದಂತೆ ಸರ್ಕಾರದ ವಿವಿಧ ಇಲಾಖೆ/ಕಚೇರಿಗಳ ವಿಲೀನಾತಿ/ರದ್ದುಗೊಳಿಸುವಿಕೆ ಬಗ್ಗೆ ಹಾಗೂ ವಿವಿಧ ಇಲಾಖೆಗಳಲ್ಲಿ ಮಂಜೂರಾಗಿರುವ ವಿವಿಧ ವೃಂದಗಳ ವೃಂದ ಬಲದ ವೈಜ್ಞಾನಿಕ ಪರಿಷ್ಕರಣೆ/ಹುದ್ದೆಗಳ ರದ್ಧತಿ/ಮರು ವಿನ್ಯಾಸ ಇವುಗಳ ಕುರಿತು ಹಾಗೂ ಈ ಸಂಬಂಧ 6ನೇ ರಾಜ್ಯ ವೇತನ ಆಯೋಗವು ಮಾಡಿರುವ ಶಿಫಾರಸುಗಳನ್ನು ಗಮನದಲ್ಲಿರಿಸಿಕೊಂಡು ಪರಿಶೀಲಿಸಿ ಸೂಕ್ತ ಶಿಫಾರಸುಗಳನ್ನು ಮಾಡಲು ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸುವ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ.

ಆರ್. ಅಶೋಕ ಅಧ್ಯಕ್ಷತೆಯಲ್ಲಿ ಸಮಿತಿ
ಫೆಬ್ರವರಿ 18ರಂದು ಕರ್ನಾಟಕ ಸರ್ಕಾರ ಸಂಪುಟ ಉಪ ಸಮಿತಿಯನ್ನು ರಚನೆ ಮಾಡಿ ಆದೇಶ ಹೊರಡಿಸಿದೆ. ಕಂದಾಯ ಸಚಿವ ಆರ್. ಅಶೋಕ ನೇತೃತ್ವದ ಸಮಿತಿಯಲ್ಲಿ 5 ಸಚಿವರಿದ್ದಾರೆ. ಮೂರು ತಿಂಗಳಿನಲ್ಲಿ ಸಮಿತಿ ವರದಿಯನ್ನು ನೀಡಬೇಕಿದೆ ಎಂದು ಸೂಚನೆ ನೀಡಲಾಗಿದೆ.

ಸಮಿತಿಯ ಸದಸ್ಯರು
ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಆರ್. ಅಶೋಕ ಅಧ್ಯಕ್ಷತೆಯ ಸಮಿತಿಯಲ್ಲಿ ಎಸ್. ಸುರೇಶ್ ಕುಮಾರ್, ಬಸವರಾಜ ಬೊಮ್ಮಾಯಿ, ಜೆ. ಸಿ. ಮಾಧುಸ್ವಾಮಿ, ಡಾ. ಕೆ. ಸುಧಾಕರ್ ಸದಸ್ಯರಾಗಿದ್ದಾರೆ.

ಆದಾಯ ಉಳಿತಕ್ಕೆ ತಂತ್ರ
ಸರ್ಕಾರಕ್ಕೆ ಬರುತ್ತಿರುವ ಆದಾಯದಲ್ಲಿ ಬಹುಪಾಲು ನೌಕರರ ವೇತನಕ್ಕೆ ವ್ಯಯವಾಗುತ್ತಿದೆ. ಮುಂಬರುವ ದಿನಗಳಲ್ಲಿ ಈ ವೆಚ್ಚದ ಗಾತ್ರ ಇನ್ನಷ್ಟು ಹೆಚ್ಚಾಗಲಿದ್ದು, ಆದ್ದರಿಂದ, ಯಾವ-ಯಾವ ಇಲಾಖೆಗಳಲ್ಲಿ ಹೆಚ್ಚುವರಿ ಹುದ್ದೆಗಳಿವೆ, ಯಾವ ಇಲಾಖೆಗಳಲ್ಲಿ ಹುದ್ದೆಗಳನ್ನು ವಿಲೀನ ಮಾಡಬಹುದು ಎಂಬುದನ್ನು ಉಪ ಸಮಿತಿ ಅಧ್ಯಯನ ನಡೆಸಿ ವರದಿ ನೀಡಲಿದೆ.












Click it and Unblock the Notifications