ಅಮಿತ್ ಶಾ ವಿರುದ್ಧ ಪೋಸ್ಟ್ ಹಾಕಿದ್ದಕ್ಕೆ ಕಾನೂನು ವಿದ್ಯಾರ್ಥಿ ಅಮಾನತು
ಪುತ್ತೂರು, ಫೆಬ್ರವರಿ 24: ಅಮಿತ್ ಶಾ ವಿರುದ್ಧ ವ್ಯಂಗ್ಯದ ಪೋಸ್ಟ್ ಹಾಕಿದ್ದಕ್ಕೆ ಕಾನೂನು ವಿದ್ಯಾರ್ಥಿಯೊಬ್ಬನನ್ನು ಕಾಲೇಜಿನಿಂದ ಒಂದು ವಾರದ ಕಾಲ ಅಮಾನತು ಮಾಡಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿ ಜಾಸ್ಟಿನ್ ಎಂಬ ವಿದ್ಯಾರ್ಥಿ 'ಅಮಿತ್ ಶಾ ಬಂಡಲ್ ರಾಜಾ' ಎಂದು ಇನ್ಸ್ಟಾಗ್ರಾಂ ನಲ್ಲಿ ಪ್ರಕಟಿಸಿದ್ದಕ್ಕೆ ಸಿಟ್ಟಾದ ಕಾಲೇಜು ಆಡಳಿತ ಮಂಡಳಿ ಆತನನ್ನು ವಾರಗಳ ಕಾಲ ಅಮಾನತು ಮಾಡಿ ಮೌಖಿಕ ಆದೇಶ ನೀಡಿದೆ.
ಮೊನ್ನೆಯಷ್ಟೆ ಕರಾವಳಿ ಜಿಲ್ಲೆ ಪ್ರವಾಸ ಮಾಡಿ ಪುತ್ತೂರಿನ ಇದೇ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಅಮಿತ್ ಶಾ ಸಂವಾದ ನಡೆಸಿದ್ದರು, ಈಗ ಅಮಾನತ್ತಾಗಿರುವ ಜಾಸ್ಟಿನ್ ಕೂಡಾ ಅಂದು ಸಂವಾದದಲ್ಲಿ ಭಾಗವಹಿಸಿದ್ದರು, ಅಂದು ತನ್ನ ಮೊಬೈಲ್ನಲ್ಲಿ ಚಿತ್ರವೊಂದನ್ನು ತೆಗೆದುಕೊಂಡು ಜಾಸ್ಟಿನ್ ಅದನ್ನು ಇನ್ಸ್ಟಾಗ್ರಾಂ ನಲ್ಲಿ ಪ್ರಕಟಿಸಿ 'ಅಮಿತ್ ಶಾ ಬಂಡಲ್ ರಾಜಾ' ಎಂದು ಬರೆದುಕೊಂಡಿದ್ದರು.

ಹೇಗೊ ಈ ವಿಷಯ ಶಾಲೆಯ ಆಡಳಿತ ಮಂಡಳಿಗೆ ತಲುಪಿ ಈಗ ವಿದ್ಯಾರ್ಥಿಯನ್ನು ಅಮಾನತು ಮಾಡಲಾಗಿದೆ. ಆದರೆ ಈ ವಿಷಯ ಈಗ ಚರ್ಚೆಯ ವಿಷಯವಾಗಿದ್ದು, ವಿದ್ಯಾರ್ಥಿ ಅವಹೇಳನಕಾರಿ ಅಥವಾ ಅಶ್ಲೀಲ ಕಮೆಂಟ್ ಹಾಕಿಲ್ಲ ಆತ ಹಾಕಿರುವ ಕಮೆಂಟ್ ವ್ಯಂಗ್ಯದ ಧಾಟಿಯಲ್ಲಿದೆ ಅಷ್ಟೆ ಆಡಳಿತ ಮಂಡಳಿಯ ನಿರ್ಧಾರ ವಿದ್ಯಾರ್ಥಿಯ ಮಾತನಾಡುವ ಹಕ್ಕು ಕಸಿದುಕೊಳ್ಳುವ ಪ್ರಯತ್ನ ಎಂಬ ವಾದಗಳು ಕೇಳಿಬರುತ್ತಿವೆ.
ಅಮಿತ್ ಶಾ ಅವರ ಸಂವಾದ ಕಾರ್ಯಕ್ರಮ ಆಯೋಜಿತವಾಗಿದ್ದ ದಿನವೂ ಕೂಡ ವಿವೇಕಾನಂದ ಕಾಲೇಜಿನ ವರ್ತನೆ ಪತ್ರಕರ್ತರ ಹಾಗೂ ಸಾರ್ವಜನಿಕರ ಟೀಕೆಗೆ ಗುರಿಯಾಗಿತ್ತು. ಸಂವಾದ ಕಾರ್ಯಕ್ರಮಕ್ಕೆ ಯಾವುದೇ ಪತ್ರಕರ್ತರ ಪ್ರವೇಶಕ್ಕೆ ಅಂದು ಆಡಳಿತ ಮಂಡಳಿ ನಿರ್ಭಂದ ಹೇರಿತ್ತು.
ವಿದ್ಯಾರ್ಥಿಗಳು, ಅಮಿತ್ ಶಾ ಗೆ ಯಾವುದಾರೂ ಮುಜುಗರ ಉಂಟುಮಾಡುವಂತಹಾ ಪ್ರಶ್ನೆಗಳನ್ನು ಕೇಳಬಹುದು, ಅಥವಾ ವಿದ್ಯಾರ್ಥಿಗಳ ಎದುರು ಅಮಿತ್ ಶಾ ರಾಜಕೀಯ ಪ್ರಸ್ತಾಪಿಸಬಹುದು ಅವೆಲ್ಲಾ ಮಾಧ್ಯಮದಲ್ಲಿ ಸುದ್ದಿಯಾಗದಿರಲಿ ಎಂದು ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿ ಪತ್ರಕರ್ತರಿಗೆ ನಿಷೇಧ ಹೇರಿತ್ತು.
ಇದೀಗ ಮತ್ತೆ ಬಿಜೆಪಿ ಪರ ನಿಲುವು ತಳೆದು ಓಟು ಹಾಕುವ ಅಧಿಕಾರ ಹೊಂದಿರುವ ಒಬ್ಬ ಕಾನೂನು ವಿದ್ಯಾರ್ಥಿಯನ್ನು ಅಸಂಬಂಧ್ಧತೆಯ ಮಿತಿ ಮೀರದೆ ಹಾಕಿರುವ ಸಾಮಾಜಿಕ ಜಾಲತಾಣದ ಪೋಸ್ಟ್ಗೆ ತರಗತಿಯಿಂದ ಅಮಾನತು ಮಾಡಿರುವ ಶಿಕ್ಷೆ ವಿಧಿಸಿರುವುದಕ್ಕೆ ಖಂಡನೆ ವ್ಯಕ್ತವಾಗುತ್ತಿದೆ.
ವಿದ್ಯಾರ್ಥಿ ಜಾಸ್ಟಿನ್ ಅವರು ಅಮಾನತು ಅದೇಶದ ವಿರುದ್ಧ ಆಡಳಿತ ಮಂಡಳಿಗೆ ಮನವಿ ಸಲ್ಲಿಸಿದ್ದು, ಇಂದು ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದ್ದಾರೆ.












Click it and Unblock the Notifications