ಬಿಎಂಟಿಸಿ ಬಸ್ ಹರಿದು ವಿದ್ಯಾರ್ಥಿ ಸಾವು
ಬೆಂಗಳೂರು, ಫೆ.5: ಬಿಎಂಟಿಸಿ ಬಸ್ಸೊಂದು ಹರಿದು ಇಂಜಿನಿಯರ್ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೆ ಮೃತಪಟ್ಟ ಘಟನೆ ಇತ್ತೀಚೆಗೆ ಎಚ್ ಎಎಲ್ ವಿಮಾನ ನಿಲ್ದಾಣ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ. ತನ್ನ ಸ್ನೇಹಿತೆ ಜತೆ ಕಾಲೇಜಿನಿಂದ ತೆರಳುತ್ತಿದ್ದ ವಿದ್ಯಾರ್ಥಿ ದುರಂತ ಸಾವನ್ನಪ್ಪಿದ್ದಾನೆ.
ಮೃತಪಟ್ಟ ವಿದ್ಯಾರ್ಥಿಯನ್ನು ಇಸ್ರೋ ಹೌಸಿಂಗ್ ಕಾಲನಿಯ ಇಸ್ರೋದ ಉದ್ಯೋಗಿ ಪನ್ನಿರ್ ಸೆಲ್ವಂರ ಪುತ್ರ ಅಶ್ವತ್ಥ್ ಸೆಲ್ವಂ (21) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ವಿದ್ಯಾರ್ಥಿನಿ ರಿತಿಕಾಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವೈಟ್ ಫೀಲ್ಡ್ ನ ಸಿಎಂಆರ್ ಐಟಿ ಕಾಲೇಜಿನಲ್ಲಿ 6ನೆ ಸೆಮಿಸ್ಟರ್ ಇಂಜಿನಿಯರಿಂಗ್ ಓದುತ್ತಿದ್ದ ಇವರಿಬ್ಬರು ಸಂಜೆ ವೇಳೆ ಕಾಲೇಜು ಮುಗಿಸಿ ಹಿಂದಿರುಗುತ್ತಿದ್ದರು. ಎಚ್ ಎಎಲ್ ಹೆಲಿಕಾಪ್ಟರ್ ಡಿವಿಜನ್ ನ ಗೇಟ್ ಮುಂಭಾಗ ಆಕ್ಟೀವಾ ಚಲಾಯಿಸುತ್ತಿದ್ದ ರಿತಿಕಾ ರಸ್ತೆ ಉಬ್ಬು ಬಂದಾಗ ಏಕಾಏಕಿ ಬ್ರೇಕ್ ಒತ್ತಿದ ಕಾರಣ ಇಬ್ಬರು ಆಯತಪ್ಪಿ ಬಿದ್ದಿದ್ದಾರೆ. ವಾಹನ ಚಲಿಸುತ್ತಿದ್ದ ರಿತಿಕಾ ಬಲಗಡೆ ಬಿದ್ದರೆ, ಅಶ್ವತ್ ಸೆಲ್ವಂ ಎಡಗಡೆ ಬಿದ್ದಿದ್ದು, ಹಿಂದಿನಿಂದ ಬಂದ ಬಿಎಂಟಿಸಿ ಬಸ್ ಆತನ ಮೇಲೆ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಉಳಿದಂತೆ, ಬೆಂಗಳೂರಿನ ಹುಳಿಮಾವು, ಕೋಲಾರ, ಉಡುಪಿ, ತುಮಕೂರು, ಶಿವಮೊಗ್ಗ ಹಾಗೂ ತುಮಕೂರು ಜಿಲ್ಲೆಗಳಿಂದ ಬಂದಿರುವ ಕ್ರೈಂ ನ್ಯೂಸ್ ಗಳತ್ತ ನೋಡಿ...

ಬೆಂಗಳೂರು: ಮದುವೆಗೆ ವಿರೋಧ ಯುವಕ ನೇಣಿಗೆ
ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಮನೆಯಲ್ಲಿ ಒಪ್ಪದ ಕಾರಣ ಬೇಸತ್ತ ಯುವಕನೊಬ್ಬ ನೇಣಿಗೆ ಶರಣಾದ ಘಟನೆ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾರುತಿ ಬಡಾವಣೆಯ ನೇಕಾರರ ಕಾಲೋನಿಯ ವೆಂಕಟೇಶ್ ಪ್ರಸಾದ್ (22) ಮನೆ ಸಮೀಪದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಆದರೆ, ಆತನದ್ದು ಒನ್ ವೇ ಲವ್ ಆಗಿತ್ತು. ಯುವತಿಯನ್ನು ಒಪ್ಪಿಸಿ ನನಗೂ ಆಕೆಗೂ ಮದುವೆ ಮಾಡಿಸಿ ಎಂದು ಮನೆಯಲ್ಲಿ ಪೀಡಿಸುತ್ತಿದ್ದ. ಆದರೆ, ಯುವತಿ ಹಾಗೂ ಈತನ ಮನೆಯವರು ಒಪ್ಪದ ಕಾರಣ ಮನನೊಂದು ನೇಣಿಗೆ ಶರಣಾಗಿದ್ದಾನೆ

ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಪ್ರಕರಣ
ಮಣಿಪಾಲ: ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್ ನ 10 ನೇ ಮಹಡಿಯ ಕಾಮಗಾರಿ ಕಟ್ಟಡದಲ್ಲಿ ಗಂಗಾಧರ (23 ವರ್ಷ) ಎಂಬವರು ಮಧ್ಯಾಹ್ನ ಸುಮಾರು 2:00 ಗಂಟೆಗೆ ಪೈಂಟಿಂಗ್ ಕೆಲಸ ಮಾಡಿಕೊಂಡಿರುವಾಗ ಪೈಂಟಿಂಗ್ ಮಾಡುವ ಹಲಗೆಯನ್ನು ತೆಗೆದುಕೊಳ್ಳಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬೆಲ್ಟ್ ಸಮೇತ ಆಯ ತಪ್ಪಿ ನೆಲಕ್ಕೆ ಬಿದ್ದು ಗಂಭೀರ ಗಾಯಗೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ವಿಕ್ರಮ್ (21), ತಂದೆ: ವಿಠಲ್, ವಾಸ: ಕೊಡಂಕೂರು, ವಸಂತ ನಿವಾಸ, ಭಜನ ಮಂದಿರದ ಬಳಿ, ಉಡುಪಿ ತಾಲೂಕು ಇವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಸಂಖ್ಯೆ 04/14 ಕಲಂ 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೋಲಾರದಲ್ಲಿ ಸರಣಿ ಕಳ್ಳತನ ಪ್ರಕರಣ
ಗಲ್ಪೇಟೆ ಪೊಲೀಸ್ ಠಾಣೇಯಲ್ಲಿ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ ಶಾಂತಿನಗರದ ವಾಸಿ ಇಂತಿಯಾಜ್ಪಾಷ ರವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಊರಿಗೆ ಹೋಗಿದ್ದು, ಈ ಸಮಯದಲ್ಲಿ ಯಾರೋ ಕಳ್ಳರು ಮನೆಗೆ ಹಾಕಿದ್ದ ಬೀಗವನ್ನು ಮುರಿದು ಹಾಕಿ ಒಳ ಪ್ರವೇಶಿಸಿ, 9 ಸಾವಿರ ರೂ.ಗಳ ಹಣ ಮತ್ತು 1 ಲಕ್ಷ ಮೌಲ್ಯದ ಬಡವೆಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ.
ಕತ್ತಿನ ಚೈನ್ ಕಳ್ಳತನ: ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣಕ್ಕೆ ಸಂಭಂಧಿಸಿದಂತೆ ಅಪರಾಧ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ನಗರ, ಬೈರೇಗೌಡ ನಗರದ ವಾಸಿ ಶ್ರೀಮತಿ ಉಮಾದೇವಿ ರವರು ತಮ್ಮ ಮನೆಯ ಬಳಿಯ ಅಂಗಡಿಗೆ ಹೋಗುತ್ತಿದ್ದು. ಈ ಸಮಯದಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರೂ ಅಪರಿಚಿತ ಹುಡುಗರು ಉಮಾದೇವಿ ರವರ ಕತ್ತಿನಲ್ಲಿದ್ದ ಸುಮಾರು 35-40 ಗ್ರಾಂ ತೂಕದ ಕತ್ತಿನ ಚೈನನ್ನು ಕಿತ್ತುಕೊಂಡು ಹೋಗಿರುತ್ತಾರೆ.

ವೈ.ಎನ್ ಹೊಸಕೋಟೆ ಪೊಲೀಸ್ ಠಾಣೆ
ಪಿರ್ಯಾದಿ ಮಲ್ಲೇಶ ನಾಯಕ ಬಿನ್ ಬೋರಯ್ಯ, 30-ವರ್ಷ, ನಾಯಕ ಜನಾಂಗ, ಕರಿಯಮ್ಮನಪಾಳ್ಯ, ಪಾವಗಡ ತಾ||ರವರು ಠಾಣೆಗೆ ಹಾಜರಾಗಿ ಬಂದು ನೀಡಿದ ಪಿರ್ಯಾದು ಅಂಶವೇನೆಂದರೆ, ಈ ದಿನ ಪಿರ್ಯಾದಿಯು ಚಿಕ್ಕಹಳ್ಳಿಯಲ್ಲಿ ಈರಣ್ಣರವರಿಂದ 5,000/- ರೂ ಹಣ ಪಡೆಯಲು ದೊಡ್ಡಬಳ್ಳಾಪುರದಿಂದ ಪಾವಗಡಕ್ಕೆ ಕೆ.ಎ.43.ಎಲ್.8525 ನೇ ಹಿರೋಹೋಂಡಾ ಮೋಟಾರ್ಬೈಕ್ನಲ್ಲಿ ಬೆಳಿಗ್ಗೆ 10-30 ಗಂಟೆಗೆ ಬಂದು ಚಳ್ಳಕೆರೆ ಕ್ರಾಸ್ನಲ್ಲಿರುವ ಒಂದು ಹೋಟೇಲ್ನಲ್ಲಿ ತಿಂಡಿ ತಿನ್ನುವಾಗ್ಗೆ ಒಬ್ಬಳು ಹೆಂಗಸು ಮತ್ತು ಒಬ್ಬ ಗಂಡಸು ಬಂದಿದ್ದು ಹೆಂಗಸು ಪಾವಗಡ ಬಸ್ಸ್ಟಾಂಡ್ಗೆ ಡ್ರಾಪ್ ಕೇಳಿದ್ದರಿಂದ ಆಕೆಯನ್ನು ಟೋಲ್ಗೇಟ್ಗೆ ಬಿಟ್ಟು ನಂತರ ಚಿಕ್ಕಹಳ್ಳಿಗೆ ಹೋಗಿದ್ದಾಗ ಆಕೆ ಸುಮಾರು 1-30 ಗಂಟೆಯ ಸಮಯದಲ್ಲಿ ಪೋನ್ ಮಾಡಿ ಪೊನ್ನಸಮುದ್ರ ಗೇಟ್ನಲ್ಲಿದ್ದೇನೆ ಬಾ ಎಂದು ತಿಳಿಸಿದ್ದರಿಂದ ಪಿರ್ಯಾದಿ ಅಲ್ಲಿಗೆ ಹೋಗಿ
ಅಲ್ಲಿಂದ ಪಿರ್ಯಾದಿ ಬೈಕ್ನಲ್ಲಿ, ಹೆಂಗಸು ಬಸ್ಸಿನಲ್ಲಿ ವೈ.ಎನ್ ಹೊಸಕೋಟೆಗೆ ಬಂದು ಆ ಮಹಿಳೆ ಇಲ್ಲಿ ನಮ್ಮ ಜನರು ಇದ್ದಾರೆ ವೈ.ಎನ್.ಹಳ್ಳಿ ಆಂಜನೇಯ ದೇವಸ್ಥಾನದ ಹತ್ತಿರ ಹೋಗೋಣವೆಂದು ತಿಳಿಸಿ ಪಿರ್ಯಾದಿಯ ಬೈಕ್ನಲ್ಲಿ ಸಂಜೆ 4-30 ಗಂಟೆಗೆ ದೇವಸ್ಥಾನದ ಹತ್ತಿರ ಹೋಗಿ ಬೈಕ್ನ್ನು ವೈ.ಎನ್ ಹಳ್ಳಿ ರಸ್ತೆಯಲ್ಲಿ ಬಿಟ್ಟು ಆ ಹೆಂಗಸು ಬೆಟ್ಟದ ಕಡೆಗೆ ಹೋಗಿ ಪಿರ್ಯಾದಿಯನ್ನು ಬರಮಾಡಿಕೊಂಡು ಆತನ ಫೋನ್ ನಿಂದ ಬೆರೊಬ್ಬ ವ್ಯಕ್ತಿಗೆ ಪೋನ್ ಮಾಡಿ ಕರೆಸಿಕೊಂಡು ಪಿರ್ಯಾದಿಗೆ ಕಲ್ಲನ್ನು ತೋರಿಸಿ ಬೆದರಿಸಿ ಪಿರ್ಯಾದಿಯ ಜೇಬಿನಲ್ಲಿದ್ದ ಬೈಕ್ ಕೀ ಮತ್ತು 9620730417 ನೇ ನಂಬರಿನ ನೋಕಿಯಾ ಮೊಬೈಲ್ನನ್ನು ಪಡೆದುಕೊಂಡು ಸುಮಾರು 40,000/- ರೂ ಬೆಲೆಯ ಬೈಕನ್ನು ತೆಗೆದುಕೊಂಡು ಮೋಸ ಮಾಡಿ ಹೋಗಿರುತ್ತಾರೆ ಅಂತ ಪಿರ್ಯಾದು ಅಂಶವಾಗಿರುತ್ತೆ.

ಶಿವಮೊಗ್ಗ ಕೋಟೆ ಠಾಣೆ, ವಾಹನ ಕಳುವು
ಮಹ್ಮದ್ ಶಫಿ ಬಿನ್ ಬಾಷಾಸಾಭ್ ವಾಸ ಭರ್ಮಪ್ಪ ನಗರ ಇವರು ಗಾಂಧಿ ಪಾರ್ಕ್ ಬಳಿ ನಿಲ್ಲಿಸಿದ್ದ ತನ್ನ ಬೈಕ್ ನಂ ಕೆಎ 20 ವೈ 1139 ಬಜಾಜ್ ಪಲ್ಸರ್ ಬೈಕನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ. ಅಂದಾಜು ಬೆಲೆ, 40,000/- ಗಳು.

ಗೋಣಿಬೀಡು ಪೊಲೀಸ್ ಠಾಣೆ
ಗೋಣಿಬೀಡು ಪೊಲೀಸ್ ಠಾಣೆ ಮೊ.ಸಂ.14/2014 - ಕಲಂ:454 457 380 ಐಪಿಸಿ - ಶ್ರೀ ಕ್ಷೇತ್ರ ಅಂಗಡಿಯ ಸಂಚಾಲಕರಾದ ಎ.ಎಸ್ ನಾಗರಾಜ ನೀಡಿದ ದೂರಿನ ಸಾರಾಂಶವೇನೆಂದರೆ, ಅಂಗಡಿ ಗ್ರಾಮದ ಜೈನ ಬಸದಿಯ 3 ತೀರ್ಥಂಕರ ವಿಗ್ರಹ ಹಾಗೂ ಒಂದು ನೇಮಿನಾಥ ವಿಗ್ರಹ ಕಳ್ಳತನವಾಗಿದೆ ಎಂದು ಬಸದಿಯ ಅರ್ಚಕರಾದ ಧರಣೇಂದ್ರಭಟ್ ರವರು ಪೋನ್ ಮುಖಾಂತರ ತಿಳಿಸಿದ ಮೇರೆಗೆ ಹೋಗಿ ನೋಡಲಾಗಿ ಹೊಯ್ಸಳರ ಕಾಲದಲ್ಲಿ ಸ್ಥಾಪನೆಯಾದ ಸುಮಾರು 900 ವರ್ಷಗಳ ಪುರಾತನ ಕಾಲದ ತೀರ್ಥಂಕರ ಬಸದಿಯಲ್ಲಿದ್ದ 22 ನೇ ತೀರ್ಥಂಕರ ನೇಮಿನಾಥ ಸ್ವಾಮಿ, 23 ನೇ ತೀರ್ಥಂಕರ ಆದಿನಾಥ ಸ್ವಾಮಿ, 24 ನೇ ತೀರ್ಥಂಕರ ಮಲ್ಲಿನಾಥ ಸ್ವಾಮಿ ವಿಗ್ರಹಗಳು, ಹಾಗೂ ಮಹಾವೀರ ಬಸದಿಯಲ್ಲಿದ್ದ ನೇಮಿನಾಥ ವಿಗ್ರಹ ಕಳ್ಳತನವಾಗಿರುತ್ತೆ.
ಸದರಿ ದೇವಸ್ಥಾನದ ನಾಲ್ಕು ವಿಗ್ರಹಗಳನ್ನು ಗರ್ಭಗುಡಿಯ ಬಾಗಿಲು ತೆಗೆದು ಒಳನುಗ್ಗಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಅವುಗಳ ಅಂದಾಜು ಬೆಲೆ 70 ಲಕ್ಷ ರೂ ಗಳಾಗಿರುತ್ತೆ.












Click it and Unblock the Notifications