ಪ್ರತ್ಯೇಕ ರಾಜ್ಯದ ಪರ ನಿಂತ ಶ್ರೀರಾಮುಲುವನ್ನು ಮೂರ್ಖನೆಂದ ಸಿದ್ದರಾಮಯ್ಯ
ಬೆಂಗಳೂರು, ಜುಲೈ 28: ಕರ್ನಾಟಕ ಏಕೀಕರಣದ ಇತಿಹಾಸವೇ ಗೊತ್ತಿರದ ಶ್ರೀರಾಮುಲು ಪ್ರತ್ಯೇಕ ರಾಜ್ಯ ಬೇಡಿಕೆ ಇಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯ ಮಾಡಿದ್ದಾರೆ.
ಸುದ್ದಿಗಾರರೊಂದಿಗೆ ಈ ವಿಷಯ ಮಾತನಾಡಿದ ಸಿದ್ದರಾಮಯ್ಯ ಅವರು, ಶ್ರೀರಾಮುಲು ಬೇಡಿಕೆ ಮೂರ್ಖತನದ್ದು, ಮೂರ್ಖರಷ್ಟೆ ಇಂತಹಾ ಬೇಡಿಕೆಗಳನ್ನು ಇಡಲು ಸಾಧ್ಯ ಎಂದು ಮಾತಿನ ಪೆಟ್ಟು ನೀಡಿದ್ದಾರೆ.
ಕರ್ನಾಟಕ ಏಕೀಕರಣ ಯಾವಾಗ ಆಯ್ತು, ಅದಕ್ಕೆ ಯಾವೆಲ್ಲಾ ಮಹನೀಯರು ಹೋರಾಟ ಮಾಡಿದ್ದರು, ಏತಕ್ಕಾಗಿ ಏಕೀಕರಣ ಆಯ್ತು ಇದೆಲ್ಲಾ ಏನೂ ಗೊತ್ತಿಲ್ಲದವರೆಲ್ಲಾ ಪ್ರತ್ಯೇಕ ರಾಜ್ಯ ಕೇಳುತ್ತಿದ್ದಾರೆ ಎಂದು ಸಿದ್ದರಾಮಯ್ಯ ಅಸಹನೆ ವ್ಯಕ್ತಪಡಿಸಿದರು.

ಕಾಂಗ್ರೆಸ್ನಿಂದ ನಂಜುಂಡಪ್ಪ ಆಯೋಗ ರಚನೆ
ಸರ್ಕಾರ ಸಂಪೂರ್ಣ ಕರ್ನಾಟಕದ ಅಭಿವೃದ್ಧಿಗೆ ಒತ್ತು ನೀಡುತ್ತಲೇ ಬಂದಿದೆ. ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ನಂಜುಂಡಪ್ಪ ಆಯೋಗ ರಚನೆ ಮಾಡಿದ್ದರು. ಅದರ ಅವಧಿ ಮುಗಿಯುತ್ತಾ ಬಂದಾಗ ನಾನು ಅದರ ಅವಧಿ ಹೆಚ್ಚಿಸಿದ್ದೆ ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಹೈ-ಕರ್ನಾಟಕಕ್ಕೆ ವಿಶೇಷ ಮಾನ್ಯತೆ ನೀಡಿದ್ದ ಯುಪಿಎ
ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನಕ್ಕೆ 371 (ಜೆ) ನೀಡುವಂತೆ ಬಿಜೆಪಿಯ ಅಂದಿನ ಸರ್ಕಾರದ ಎಲ್.ಕೆ.ಅಡ್ವಾಣಿ ಅವರನ್ನು ಕೇಳಿದಾಗ ಅವರು ನಿರಾಕರಿಸಿದ್ದರು ಆದರೆ ಯುಪಿಎ ಸರ್ಕಾರ ವಿಶೇಷ ಮಾನ್ಯತೆ ನೀಡಿ ಹೈ-ಕರ್ನಾಟಕ ಅಭಿವೃದ್ಧಿಗೆ ಬೆಂಬಲ ಸೂಚಿಸಿತು ಎಂದು ನೆನೆಪು ಮಾಡಿಸಿದರು.

ಬಿಜೆಪಿ ಸುಳ್ಳು ಹೇಳುತ್ತಿದೆ
ನನ್ನನ್ನೂ ಸೇರಿದಂತೆ ಕಾಂಗ್ರೆಸ್ ಪಕ್ಷ ಹಿಂದೂ ವಿರೋಧಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶ ಮುಸ್ಲಿಂ ರಾಷ್ಟ್ರ ಆಗುತ್ತದೆ ಎಂದೆಲ್ಲಾ ಬಿಜೆಪಿ ಸುಳ್ಳು ಹೇಳಿತು. 600 ವರ್ಷ ಮೊಘಲರು ಭಾರತವನ್ನು ಆಳಿದರು ಆದರೆ ಭಾರತ ಮುಸ್ಲಿಂ ರಾಷ್ಟ್ರ ಆಗಿಲ್ಲ ಬಿಜೆಪಿ ಕೇವಲ ಸುಳ್ಳು ಹೇಳುವ ಕಾರ್ಯ ಮಾಡುತ್ತಿದೆ ಎಂದು ಅವರು ಹೇಳಿದರು.

ಲೋಕಸಭೆ ಚುನಾವಣೆ ನಮಗೆ ಅತ್ಯಂತ ಮಹತ್ವ
ಲೋಕಸಭೆ ಚುನಾವಣೆ ಬಗ್ಗೆಯೂ ಮಾತನಾಡಿದ ಅವರು, ಲೋಕಸಭೆ ಚುನಾವಣೆ ನಮಗೆ ಅತ್ಯಂತ ಮಹತ್ವವಾಗಿದ್ದು, ಮುಂಚೂಣಿ ಘಟಕಗಳ ಸದಸ್ಯರುಗಳು ಜವಾಬ್ದಾರಿಯುತವಾಗಿ ಕೆಲಸ ಮಾಡಿ ಹೆಚ್ಚಿನ ಸ್ಥಾನವನ್ನು ಗೆಲ್ಲಲೇ ಬೇಕು ಎಂದು ಅವರು ಹೇಳಿದರು.












Click it and Unblock the Notifications