ಮತ್ತೆ ವಿಶೇಷ ಅಧಿವೇಶನ: ನಿರ್ವಹಣಾ ಮಂಡಳಿ ವಿರೋಧಿಸಿ ನಿರ್ಣಯ?
ಬೆಂಗಳೂರು, ಅಕ್ಟೋಬರ್ 3: ಸೋಮವಾರ ವಿಧಾನ ಸಭೆಯ ವಿಶೇಷ ಅಧಿವೇಶನ ಮತ್ತೊಮ್ಮೆ ಕರೆಯಲಾಗಿದೆ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ನಿರ್ಣಯ ಕೈಗೊಳ್ಳುವುದಕ್ಕೆ ಹತ್ತು ದಿನದ ಫಾಸಲೆಯೊಳಗೆ ಕರೆಯುತ್ತಿರುವ ಎರಡನೇ ವಿಶೇಷ ಅಧಿವೇಶನ ಇದು.
ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ವಿರೋಧಿಸಿ ನಿರ್ಣಯ ಅಂಗೀಕರಿಸುವ ಸಾಧ್ಯತೆ ಕೂಡ ಇದೆ. ಅಕ್ಟೋಬರ್ 1ರಿಂದ 6ರವರೆಗೆ ಪ್ರತಿ ದಿನ 6 ಸಾವಿರ ಕ್ಯೂಸೆಕ್ ನೀರು ತಮಿಳುನಾಡಿಗೆ ಹರಿಸುವಂತೆ ಸೆಪ್ಟೆಂಬರ್ 30ರಂದು ಸುಪ್ರೀಂ ಕೊರ್ಟ್ ಸೂಚನೆ ನೀಡಿತ್ತು. ಇನ್ನು ಅಕ್ಟೋಬರ್ 4ರೊಳಗೆ ಕಾವೇರಿ ನೀರು ನಿರ್ವಹಣಾ ಮಂಡಳಿ ಕೂಡ ರಚಿಸುವಂತೆ ಆದೇಶಿಸಿತ್ತು.[ಸುಪ್ರೀಂ ಆದೇಶದ ವಿರುದ್ಧ ಮಂಡ್ಯದಲ್ಲಿ ಬೊಗಸೆ ಚಳವಳಿ]

ಸೆಪ್ಟೆಂಬರ್ 30ರಂದು ನಡೆದ ಸರ್ವಪಕ್ಷಗಳ ಸಭೆಯಲ್ಲಿ ಬಂದ ಅಭಿಪ್ರಾಯದ ಅನ್ವಯ ರಾಜ್ಯ ಸರಕಾರ ವಿಶೇಷ ಅಧಿವೇಶನವನ್ನು ಕರೆದಿದೆ. ಸೆಪ್ಟೆಂಬರ್ 23ರಂದು ವಿಶೇಷ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಕ್ಕೆ ಬದ್ಧವಾಗಿರುವಂತೆ ಸಲಹೆ ಬಂದಿತ್ತು. ಈಗ ನಾಲ್ಕು ಜಲಾಶಯಗಳಲ್ಲಿ ಇರುವ 27.6 ಟಿಎಂಸಿ ಅಡಿ ನೀರನ್ನು ಬೆಂಗಳುರು ಮತ್ತು ಇತರ ಪಟ್ಟಣಗಳ ನೀರಿನ ಅಗತ್ಯ ಪೂರೈಸಲು ಬಳಸುವುದಕ್ಕೆ ತೀರ್ಮಾನಿಸಲಾಗಿತ್ತು.[ನೀರು ಬಿಡದೆ ಜೈಲಿಗೆ ಹೋಗಲು ಸಿದ್ಧರಾಗಿ : ಮಾದೇಗೌಡ]
ಸೆಪ್ಟೆಂಬರ್ 23ರಂದು ಕೈಗೊಂಡ ನಿರ್ಣಯದಲ್ಲಿ ಸ್ವಲ್ಪ ಮಾರ್ಪಾಟು ಮಾಡುವ ಸಾಧ್ಯತೆಗಳಿವೆ. ಕಾವೇರಿ ಕೊಳ್ಳದ ರೈತರ ಬೆಳೆಗೆ ಅಲ್ಪ ಪ್ರಮಾಣದ ನೀರು ಹರಿಸುವುದಕ್ಕೆ ಹಾಗೂ ಕಾವೇರಿ ನೀರು ನಿರ್ವಹಣಾ ಮಂಡಳಿಗೆ ವಿರೋಧ ವ್ಯಕ್ತಪಡಿಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಅಕ್ಟೋಬರ್ 18ರಂದು ಸುಪ್ರೀಂ ಕೋರ್ಟ್ ಮುಂದೆ ಕಾವೇರಿ ಪ್ರಕರಣ ವಿಚಾರಣೆಗೆ ಬರಲಿದೆ.












Click it and Unblock the Notifications