ಲೋಕಾಯುಕ್ತದಲ್ಲಿ ಭ್ರಷ್ಟಾಚಾರ, ಭಾಸ್ಕರರಾವ್ 7ನೇ ಆರೋಪಿ
ಬೆಂಗಳೂರು, ಆಗಸ್ಟ್ 04 : ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ನ್ಯಾ.ಭಾಸ್ಕರರಾವ್ ಅವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಲೋಕಾಯುಕ್ತರಾಗಿದ್ದ ಭಾಸ್ಕರರಾವ್ ಅವರು ಈ ಪ್ರಕರಣದಲ್ಲಿ 7ನೇ ಆರೋಪಿ.
ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ (ಎಸ್ಐಟಿ) ಬುಧವಾರ 560 ಪುಟಗಳ ಹೆಚ್ಚುವರಿ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಭಾಸ್ಕರರಾವ್ ಪುತ್ರ ಅಶ್ವಿನ್ ರಾವ್, ಲೋಕಾಯುಕ್ತದ ಜಂಟಿ ಆಯುಕ್ತರಾಗಿದ್ದ ಸಯ್ಯದ್ ರಿಯಾಜ್ ಹಗರಣದಲ್ಲಿ ಪ್ರಮುಖ ಆರೋಪಿಗಳಾಗಿದ್ದಾರೆ.[ಲೋಕಾಯುಕ್ತದಲ್ಲಿ ಏನಿದು ಹಗರಣ?]
ಸರ್ಕಾರಿ ಅಧಿಕಾರಿಗಳಿಗೆ ಹಣದ ಬೇಡಿಕೆ ಇಡಲು ಅಶ್ವಿನ್ ರಾವ್ ಅವರು ಲೋಕಾಯುಕ್ತ ಕಚೇರಿ ಮತ್ತು ಭಾಸ್ಕರರಾವ್ ಅವರ ನಿವಾಸವನ್ನು ಬಳಸಿಕೊಂಡಿದ್ದಾರೆ. ಈ ಬಗ್ಗೆ ತಿಳಿದಿದ್ದರೂ ಭಾಸ್ಕರರಾವ್ ಪುತ್ರನನ್ನು ರಕ್ಷಿಸಲು ಮತ್ತು ಸಾಕ್ಷಿಗಳನ್ನು ನಾಶಮಾಡಲು ಯತ್ನಿಸಿದ್ದಾರೆ ಎಂದು ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.[ಭಾಸ್ಕರರಾವ್ ರಾಜೀನಾಮೆ]
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ನ್ಯಾ. ಭಾಸ್ಕರರಾವ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ರಾಜ್ಯಪಾಲರು ಜುಲೈ ತಿಂಗಳಿನಲ್ಲಿ ಒಪ್ಪಿಗೆ ನೀಡಿದ್ದರು. ಹಗರಣಕ್ಕೆ ಸಂಬಂಧಿಸಿದಂತೆ ಅಶ್ವಿನ್ ರಾವ್ ಅವರನ್ನು ಎಸ್ಐಟಿ ಬಂಧಿಸಿದ ಬಳಿಕ ಲೋಕಾಯುಕ್ತ ಸ್ಥಾನಕ್ಕೆ ಭಾಸ್ಕರರಾವ್ ರಾಜೀನಾಮೆ ನೀಡಿದ್ದರು....
ಹೇಳಿಕೆಗಳ ದಾಖಲೆ ಸಲ್ಲಿಕೆ
ಭಾಸ್ಕರರಾವ್ ಅವರ ವಿರುದ್ಧ ಸಲ್ಲಿಕೆ ಮಾಡಿರುವ 560 ಪುಟಗಳ ಹೆಚ್ಚುವರಿ ಚಾರ್ಜ್ಶೀಟ್ನಲ್ಲಿ ಐಎಎಸ್ ಅಧಿಕಾರಿ ಎಂ.ಲಕ್ಷ್ಮೀನಾರಾಯಣ ಮತ್ತು ನಿವೃತ್ತ ನೋಂದಣಿ ಮಹಾನಿರ್ದೇಶಕ (ಐಜಿಆರ್) ಜಿ.ಸಿ.ಪ್ರಕಾಶ್ ಅವರ ಹೇಳಿಕೆಗಳನ್ನು ದಾಖಲು ಮಾಡಲಾಗಿದೆ.
ಭಾಸ್ಕರರಾವ್ಗೆ ಮಾಹಿತಿ ನೀಡಿದ್ದರು
ಐಎಎಸ್ ಅಧಿಕಾರಿ ಎಂ.ಲಕ್ಷ್ಮೀನಾರಾಯಣ ಅವರು ಅಶ್ವಿನ್ ರಾವ್ ಸರ್ಕಾರಿ ಅಧಿಕಾರಿಗಳಿಗೆ ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ಭಾಸ್ಕರರಾವ್ ಅವರಿಗೆ ಮಾಹಿತಿ ನೀಡಿದ್ದರು. ಜಿ.ಸಿ.ಪ್ರಕಾಶ್ ಅವರು ಲೋಕಾಯುಕ್ತರ ಅಧಿಕೃತ ನಿವಾಸಕ್ಕೆ ಭೇಟಿ ನೀಡಿದಾಗ ಹಗರಣದಲ್ಲಿ ಆರೋಪಿಯಾಗಿರುವ ಭಾಸ್ಕರ್ ತಾನು ಲೋಕಾಯುಕ್ತರ ಪಿಎ ಎಂದು ಪರಿಚಯ ಮಾಡಿಕೊಂಡಿದ್ದ ಎಂದು ಹೇಳಿಕೆ ಕೊಟ್ಟಿದ್ದಾರೆ.
ಸಂದೇಶಗಳು ರವಾನೆಯಾಗಿದ್ದವು
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಅಶ್ವಿನ್ ರಾವ್ ಅವರ ವಿರುದ್ಧ ಚಾರ್ಜ್ಶೀಟ್ ಸಲ್ಲಿಕೆಯಾದ ನಂತರವೂ ಭಾಸ್ಕರರಾವ್ ಮತ್ತು ಅಶ್ವಿನ್ ರಾವ್ ನಡುವೆ ಸಂದೇಶಗಳು ರವಾನೆಯಾಗಿವೆ ಎಂದು ಎಸ್ಐಟಿ ಚಾರ್ಜ್ಶೀಟ್ನಲ್ಲಿ ಹೇಳಿದೆ.
ಒಂದೇ ದಿನದಲ್ಲಿ ದಾಖಲೆ ನೀಡಿದ್ದರು
ಲೋಕಾಯುಕ್ತದಲ್ಲಿ ನಡೆದ ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸುವಂತೆ ಉಪ ಲೋಕಾಯುಕ್ತ ಸುಭಾಷ್ ಬಿ.ಅಡಿ ಅವರು ನೀಡಿದ್ದ ಆದೇಶವನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಲು ಭಾಸ್ಕರರಾವ್ ಅವರು ಪುತ್ರನಿಗೆ ಒಂದೇ ದಿನದಲ್ಲಿ ದಾಖಲೆಗಳನ್ನು ನೀಡಿದ್ದರು. 2015ರ ಜೂನ್ 29ರಂದು ಅವರು ದಾಖಲೆಗಾಗಿ ಅರ್ಜಿ ಹಾಕಿದ್ದರು. ಜೂನ್ 30ರಂದು ಲೋಕಾಯುಕ್ತ ಕಚೇರಿಯಿಂದ ಅವರಿಗೆ ದಾಖಲೆಗಳನ್ನು ನೀಡಲಾಗಿತ್ತು. ಅಂದೇ ಅವರು ಹೈಕೋರ್ಟ್ಗೆ ಅರ್ಜಿ ಹಾಕಿದ್ದರು.
ಮಗನ ಜೊತೆ ಮಾತನಾಡಲು ಪೇದೆ ಫೋನ್ ಬಳಕೆ
ಎಸ್ಐಟಿ ಸಲ್ಲಿಸಿರುವ ಚಾರ್ಜ್ಶೀಟ್ನಲ್ಲಿ ಕೇಂದ್ರಿಯ ಮೀಸಲು ಪಡೆದ ಪೇದೆಯೊಬ್ಬರ ಹೇಳಿಕೆಯನ್ನು ದಾಖಲು ಮಾಡಲಾಗಿದೆ. ಲೋಕಾಯುಕ್ತ ಪಿಆರ್ಓ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಪೇದೆಯ ಮೊಬೈಲ್ ಪಡೆದು ಭಾಸ್ಕರರಾವ್ ಮಗನ ಜೊತೆ ಮಾತನಾಡಿದ್ದರು. ಸೈಯದ್ ರಿಯಾಜ್ ಅವರು ಈ ಫೋನ್ ಅನ್ನು ಭಾಸ್ಕರರಾವ್ ಅವರಿಗೆ ಕೊಟ್ಟಿದ್ದರು.