ಸಚಿವ ರಮೇಶ್ ಜಾರಕಿಹೊಳಿಗೆ ಸಮನ್ಸ್ ನೀಡಿದ ಸಿದ್ದರಾಮಯ್ಯ!
ಬೆಳಗಾವಿ, ಡಿಸೆಂಬರ್ 21 : ಬಿಜೆಪಿ ನಾಯಕರ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರಿಗೆ ನೋಟಿಸ್ ನೀಡಲಾಗಿದೆ. ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ನೋಟಿಸ್ ನೀಡಿದ್ದಾರೆ.
ಬೆಳಗಾವಿಯಲ್ಲಿ ಬುಧವಾರ ರಾತ್ರಿ ಬಿಜೆಪಿ ನಾಯಕ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ಔತಣಕೂಟ ಆಯೋಜಿಸಿದ್ದರು. ಸಚಿವ ರಮೇಶ್ ಜಾರಕಿಹೊಳಿ, ಸಚಿವೆ ಜಯಮಾಲಾ ಅವರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಗುರುವಾರ ರಾತ್ರಿ ಬೆಳಗಾವಿ ಸರ್ಕಿಟ್ ಹೌಸ್ನಲ್ಲಿ ರಮೇಶ್ ಜಾರಕಿಹೊಳಿ ಅವರು ಸಿದ್ದರಾಮಯ್ಯ ಭೇಟಿ ಮಾಡಿದ್ದರು. ಆಗ ಸಿದ್ದರಾಮಯ್ಯ ಅವರು ಔತಣ ಕೂಟದಲ್ಲಿ ಪಾಲ್ಗೊಂಡ ಬಗ್ಗೆ ಮಾತನಾಡಿದ್ದರು. ಬಳಿಕ ವಿವರಣೆ ಕೇಳಿ ನೋಟಿಸ್ ಜಾರಿಗೊಳಿಸಿದ್ದಾರೆ.
ಮಂಗಳವಾರ ಕಾಂಗ್ರೆಸ್ ಶಾಸಕರಿಗೆ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಔತಣ ಕೂಟ ಏರ್ಪಡಿಸಿದ್ದರು. ಈ ಔತಣಕೂಟಕ್ಕೆ ಗೈರಾಗಿದ್ದ ಅವರು, ಬಿಜೆಪಿ ನಾಯಕರ ಔತಣಕೂಟದಲ್ಲಿ ಪಾಲ್ಗೊಂಡ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದೆ.

ರಮೇಶ್ ಜಾರಕಿಹೊಳಿ ಪ್ರತಿಕ್ರಿಯೆ
ಬಿಜೆಪಿ ನಾಯಕರ ಔತಣ ಕೂಟದಲ್ಲಿ ಪಾಲ್ಗೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ರಮೇಶ್ ಜಾರಕಿಹೊಳಿ ಅವರು, 'ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ನಮ್ಮ ಜಿಲ್ಲೆಯವರು. ಔತಣಕೂಟ ಏರ್ಪಡಿಸಿದ್ದರು. ಎಲ್ಲರನ್ನೂ ಕರೆದಿದ್ದರು. ಹಾಗಾಗಿ ಔತಣಕೂಟಕ್ಕೆ ಹೋಗಿದ್ದೆ. ಔತಣ ಕೂಟಕ್ಕೆ ಹೋದರೆ ಬಿಜೆಪಿ ಸೇರಿದಂತೆಯೇ?' ಎಂದು ಪ್ರಶ್ನಿಸಿದ್ದರು.

ಡಿನ್ನರ್ಗೆ ಹೋದರೆ ತಪ್ಪೇನಿದೆ?
'ಬಿಜೆಪಿಯವರ ಡಿನ್ನರ್ಗೆ ಸಚಿವ ರಮೇಶ್ ಜಾರಕಿಹೊಳಿ ಅವರು ಹೋದರೆ ತಪ್ಪೇನಿದೆ?. ಊಟಕ್ಕೆ ಬರೋದು, ಹೋಗುವುದು ಒಂದು ಸಂಪ್ರದಾಯ. ಯಾವುದೇ ನಾಯಕರ ಮದುವೆಗಳು ಇದ್ದಾಗ ಬೇರೆ ಪಕ್ಷದವರು ಹೋಗುವುದಿಲ್ಲವೇ?. ರಾಜಕೀಯ ಬೇರೆ, ಸಂಬಂಧ, ಪ್ರೀತಿ, ವಿಶ್ವಾಸಗಳೇ ಬೇರೆ. ಡಿನ್ನರ್ಗೆ ಕರೆದಾಗ ಹೋಗಬೇಕಾಗುತ್ತದೆ' ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಹೇಳಿದ್ದರು.

ಬೆಳಗಾವಿಯನ್ನು ಒಡೆದಿದ್ದಾರೆ
'ಡಿ.ಕೆ.ಶಿವಕುಮಾರ್ ಅವರು ಬೆಳಗಾವಿಯನ್ನು ಎರಡು ಭಾಗ ಮಾಡಿದ್ದಾರೆ. ಹಾಗಾಗಿಯೇ ಅವರು ಕರೆದಿದ್ದ ಔತಣಕೂಟದಲ್ಲಿ ರಮೇಶ್ ಜಾರಕಿಹೊಳಿ ಪಾಲ್ಗೊಳ್ಳಲಿಲ್ಲ. ಬಿಜೆಪಿ ನಾಯಕರು ಏರ್ಪಡಿಸಿದ್ದ ಔತಣಕೂಟಕ್ಕೆ ಬಂದಿದ್ದರು. ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ಗೆ ಎಣ್ಣೆ ಸೀಗೆಕಾಯಿ ಸಂಬಂಧ ಎನ್ನುವುದು ಎಲ್ಲರಿಗೂ ಗೊತ್ತಿದೆ' ಎಂದು ಆರ್.ಅಶೋಕ್ ಹೇಳಿದ್ದಾರೆ.

ಸಂಪುಟದಿಂದ ಔಟ್
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಜಯಮಾಲಾ ಅವರು ಸಹ ಬಿಜೆಪಿ ನಾಯಕರ ಔತಣ ಕೂಟದಲ್ಲಿ ಪಾಲ್ಗೊಂಡಿದ್ದರು. ಈಗ ಅವರನ್ನು ಸಂಪುಟದಿಂದ ಕೈಬಿಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ.












Click it and Unblock the Notifications