ನನ್ನ ಸಾಧನೆಗಳ ಬಗ್ಗೆ ಚರ್ಚೆಗೆ ಬನ್ನಿ, ನಿಮ್ಮ ಮಾನ ನೀವೇ ಮಾರಿಕೊಳ್ಳಬೇಡಿ: ಬಿಜೆಪಿಗೆ ಸಿದ್ದರಾಮಯ್ಯ ಗುದ್ದು
ಬೆಂಗಳೂರು, ಜ. 10: ರಾಜ್ಯದಲ್ಲಿ ಎರಡು ದಿನಗಳಿಂದ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದ ವಿಷಯ ಸಿದ್ದು ನಿಜಕನಸುಗಳು ಪುಸ್ತಕ. ಈಗೇನೋ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ನಗರದ ಹೆಚ್ಚುವರಿ ಸಿವಿಲ್ ಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ರಾಜ್ಯ @BJP4Karnataka ನಾಯಕರೇ, ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸದಾ ಸಿದ್ಧ. ಸ್ಥಳ ಮತ್ತು ಸಮಯವನ್ನು ಬಿಜೆಪಿ ನಾಯಕರೇ ನಿಗದಿಗೊಳಿಸಿ ನನ್ನನ್ನು ಕರೆಯಲಿ. ಸುಖಾ ಸುಮ್ಮನೆ ಸುಳ್ಳು-ಪೊಳ್ಳು ಬರ್ಕೊಂಡು, ಪೋಟೋಶಾಪ್ ಮಾಡಿಕೊಂಡು ನಿಮ್ಮ ಮಾನ ನೀವೇ ಮಾರಿಕೊಳ್ಳಬೇಡಿ.
— Siddaramaiah (@siddaramaiah) January 10, 2023
1/6#ನನಸಾದ_ಕನಸು
ಸಿದ್ದು ನಿಜಕನಸುಗಳು ಪುಸ್ತಕ ಬಿಡುಗಡೆಗೆ ನಗರದ ಟೌನ್ ಹಾಲ್ನಲ್ಲಿ ಜನವರಿ ಒಂಬತ್ತರಂದು ನಡೆಯಬೇಕಿತ್ತು. ಕಾರ್ಯಕ್ರಮ ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಈಗ ಇದರ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಭಾರೀ ವಾಗ್ದಾಳಿ ನಡೆಸಿದ್ದಾರೆ.
"ಬಿಜೆಪಿ ನಾಯಕರೇ, ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸದಾ ಸಿದ್ಧ. ಸ್ಥಳ ಮತ್ತು ಸಮಯವನ್ನು ಬಿಜೆಪಿ ನಾಯಕರೇ ನಿಗದಿಗೊಳಿಸಿ ನನ್ನನ್ನು ಕರೆಯಲಿ. ಸುಖಾ ಸುಮ್ಮನೆ ಸುಳ್ಳು-ಪೊಳ್ಳು ಬರ್ಕೊಂಡು, ಪೋಟೋಶಾಪ್ ಮಾಡಿಕೊಂಡು ನಿಮ್ಮ ಮಾನ ನೀವೇ ಮಾರಿಕೊಳ್ಳಬೇಡಿ" ಎಂದಿದ್ದಾರೆ.

"ರಾಜಕೀಯವಾಗಿ ನನ್ನನ್ನಾಗಲಿ, ಕಾಂಗ್ರೆಸ್ ಪಕ್ಷವನ್ನಾಗಲಿ ಎದುರಿಸುವ ಧೈರ್ಯ ರಾಜ್ಯದ ಬಿಜೆಪಿ ನಾಯಕರಿಗಿಲ್ಲ. ಇದಕ್ಕಾಗಿ ನನ್ನ ವಿರುದ್ಧದ ಹೋರಾಟವನ್ನೂ ದುಡ್ಡಿಗಾಗಿ ಮಾರಿಕೊಂಡ ಬಾಡಿಗೆ ಬರಹಗಾರರಿಗೆ ಔಟ್ ಸೋರ್ಸ್ ಮಾಡಿದ್ದಾರೆ. ಶೇಮ್ ಆನ್ ಯು" ಎಂದು ಕಿಡಿಕಾರಿದ್ದಾರೆ.
"ಚರ್ಚೆ - ಸಂವಾದಗಳ ರಾಜಕೀಯದಲ್ಲಿ ನನಗೆ ನಂಬಿಕೆ ಇದೆ. ಇದಕ್ಕಾಗಿಯೇ ಇರುವುದು ವಿಧಾನಮಂಡಲ. ಅಲ್ಲಿ ಚರ್ಚೆ ನಡೆಸುವ ಧೈರ್ಯ ಇಲ್ಲದೆ ಅಧಿವೇಶನವನ್ನೇ ಮೊಟಕುಗೊಳಿಸುತ್ತೀರಿ. ಹೊರಗೆ ಬೀದಿಯಲ್ಲಿ ಬಾಡಿಗೆ ಬರಹಗಾರರನ್ನು ಕಟ್ಟಿಕೊಂಡು ನನ್ನ ಬಗ್ಗೆ ಕಟ್ಟು ಕತೆ ಹೆಣೆಯುತ್ತೀರಿ. ಇದೇನಾ ನಿಮ್ಮ ಸಂಸ್ಕೃತಿ..?" ಎಂದು ಪ್ರಶ್ನಿಸಿದ್ದಾರೆ.
"ನಮ್ಮ ಸರ್ಕಾರದ ವೈಫಲ್ಯಗಳ ಬಗ್ಗೆ ನೂರು ಪುಸ್ತಕಗಳನ್ನು ಪ್ರಕಟಿಸಿ, ಐ ಡೋಂಟ್ ಕೇರ್. ಅದನ್ನು ತಡೆಯಲೂ ಹೋಗುವುದಿಲ್ಲ. ಆದರೆ ನನ್ನ ಪೋಟೊವನ್ನು ವಿರೂಪಗೊಳಿಸಿ, ನಿಮ್ಮ ವಿಕೃತ ಕನಸುಗಳಿಗಾಗಿ ನನ್ನ ಸುಂದರ ಕನಸುಗಳನ್ನು ತಿರುಚಿ ಮಾರಾಟ ಮಾಡಲು ಬಿಡುವುದಿಲ್ಲ" ಎಂದು ಹೇಳಿದ್ದಾರೆ.
"ನಾನು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೇ, ಹಸಿವು, ಅನಕ್ಷರತೆ, ಅನಾರೋಗ್ಯ, ನಿರುದ್ಯೋಗ ಮುಕ್ತ ಕರ್ನಾಟಕ ನಿರ್ಮಾಣದ ಕನಸು ಕಂಡಿದ್ದೆ. ಪಕ್ಷದ ಪ್ರಣಾಳಿಕೆಯಲ್ಲಿನ 158 ಭರವಸೆಗಳನ್ನು ಈಡೇರಿಸಿ ಆ ಕನಸುಗಳನ್ನು ನನಸಾಗಿಸಿದ್ದೆ. ಅನುಮಾನ ಇದ್ದವರು ಚರ್ಚೆಗೆ ಬನ್ನಿ" ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
"ಸುಳ್ಳು, ಅನ್ಯಾಯ ಮತ್ತು ಅಧರ್ಮದ ನೆಲೆಗಟ್ಟಿನ ಮೇಲೆ ನಿಂತಿರುವ ಬಿಜೆಪಿಯ ನಾಯಕರಿಗೆ ಸತ್ಯ, ನ್ಯಾಯ ಮತ್ತು ನಿಜವಾದ ಧರ್ಮದ ಹಾದಿಯಲ್ಲಿ ನಡೆಯುವವರನ್ನು ಕಂಡರೆ ಭಯ. ಈ ಭಯದಿಂದಲೇ ರಾತ್ರಿ-ಹಗಲು ನನ್ನ ವಿರುದ್ಧ ಸುಳ್ಳು ಆರೋಪಗಳ ಸುರಿಮಳೆ ಸುರಿಸುತ್ತಿದ್ದಾರೆ" ಎಂದಿರುವ ಸಿದ್ದರಾಮಯ್ಯ, ನನಸಾದ ಕನಸು ಎಂದು ಹ್ಯಾಶ್ಟ್ಯಾಗ್ ಬಳಸಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.












Click it and Unblock the Notifications