ಇಂದು ಕುಮಾರಸ್ವಾಮಿ-ಸಿದ್ದರಾಮಯ್ಯ ಭೇಟಿ, ರಮೇಶ್ ಜಾರಕಿಹೊಳಿ ಭವಿಷ್ಯ ನಿರ್ಧಾರ
Recommended Video

ಬೆಳಗಾವಿ, ಡಿಸೆಂಬರ್ 14: ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಮುಖ್ಯಮತ್ರಿ ಕುಮಾರಸ್ವಾಮಿ ಅವರು ಇಂದು ರಾತ್ರಿ ಭೇಟಿ ಆಗುತ್ತಿದ್ದು ಸಂಪುಟಕ್ಕೆ ಸಂಬಂಧಿಸಿದಂತೆ ಅತ್ಯಂತ ಮಹತ್ವದ ಮಾತುಕತೆ ನಡೆಸಲಿದ್ದಾರೆ.
ಸಂಪುಟದ ಅಶಸ್ತಿನ ಸಚಿವ ಎನಿಸಿಕೊಂಡಿರುವ ಹಾಗೂ ಕಾಂಗ್ರೆಸ್ಗೆ ಬಗ್ಗುಲ ಮುಳ್ಳಾಗಿ ಪರಿಣಮಿಸಿರುವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕಿತ್ತೊಗೆಯುವ ಬಗ್ಗೆ ಅವರು ಇಂದು ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರು ಐದು ದಿನದ ತಮ್ಮ ವಿದೇಶ ಪ್ರವಾಸವನ್ನು ಇದೇ ಕಾರಣಕ್ಕಾಗಿ ಮೊಟಕುಗೊಳಿಸಿ ವಾಪಸ್ ಬಂದಿದ್ದಾರೆ ಎನ್ನಲಾಗಿದೆ. ಇಂದು ಸಿದ್ದರಾಮಯ್ಯ ಅವರು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ.
ಅಧಿವೇಶನದ ಬಳಿಕ ಮಧ್ಯಾಹ್ನ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಆ ನಂತರ ಸಂಜೆ ವೇಳೆಗೆ ಖಾಸಗಿ ಹೊಟೆಲ್ ಒಂದರಲ್ಲಿ ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಾತುಕತೆ ನಡೆಸಲಿದ್ದಾರೆ.

ರಮೇಶ್ ಜಾರಕಿಹೊಳಿ ಮೇಲೆ ಅಶಿಸ್ತಿನ ಆರೋಪ
ಸಚಿವ ರಮೇಶ್ ಜಾರಕಿಹೊಳಿ ಅವರು ಸಂಪುಟ ಸಭೆಗೆ ಸತತ ಗೈರಾಗುತ್ತಿದ್ದಾರೆ. ಅಧಿವೇಶನದಲ್ಲಿಯೂ ಪಾಲ್ಗೊಳ್ಳುತ್ತಿಲ್ಲ. ಸರ್ಕಾರವನ್ನು ಉದ್ದೇಶಪೂರ್ವಕವಾಗಿ ಟೀಕಿಸುತ್ತಿದ್ದಾರೆ ಎಂಬುದು ಸರ್ಕಾರದ ಕಡೆಯ ದೂರುಗಳಾದರೆ, ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯದ ಭಾವ ಹುಟ್ಟುಹಾಕುತ್ತಿದ್ದಾರೆ. ಕೆಲವು ಶಾಸಕರ ಬಣ ಕಟ್ಟಿಕೊಂಡು ಒಳರಾಜಕೀಯ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಅತಂತ್ರ ಭಾವ ಹುಟ್ಟಿಸುತ್ತಿದ್ದಾರೆ ಎಂದು ಕಾಂಗ್ರೆಸ್ ದೂರುತ್ತಿದೆ.

ಸಿದ್ದರಾಮಯ್ಯ-ಎಚ್ಡಿಕೆ ಮಾತುಕತೆ
ಹಾಗಾಗಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಂಪುಟದಿಂದ ಕಿತ್ತೊಗೆಯು ಸಾಧ್ಯತೆ ದಟ್ಟವಾಗಿದ್ದು, ಇಂದು ಆ ಕುರಿತು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಮಾತುಕತೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅದರ ಜೊತೆಗೆ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿ ನೇಮಕದ ಬಗ್ಗೆಯೂ ಮಾತುಕತೆ ನಡೆಯಲಿದೆ.

ಅಶಸ್ತಿನ ಶಾಸಕರಿಗೆ ಎಚ್ಚರಿಕೆ
ಪಂಚ ರಾಜ್ಯ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿ, ಬಿಜೆಪಿ ಹಿನ್ನಡೆಯಲ್ಲಿರುವ ಕಾರಣ ಈ ಸಮಯದಲ್ಲಿ ಯಾವ ಶಾಸಕರೂ ಬಿಜೆಪಿ ಸೇರಲು ಉತ್ಸಾಹ ತೋರಲಾರರು ಎಂದು ಕಾಂಗ್ರೆಸ್ ಮುಂದಾಲೋಚನೆ ಮಾಡಿದೆ. ಹಾಗಾಗಿ ಈ ಸಮಯದ ಸದುಪಯೋಗ ಪಡಿಸಿಕೊಂಡು ಬಗ್ಗುಲ ಮುಳ್ಳಾಗಿರುವ ರಮೇಶ್ ಜಾರಕಿಹೊಳಿಯನ್ನು ಸಂಪುಟದಿಂದ ಕೈಬಿಡುವ ನಿರ್ಧಾರ ಮಾಡಲಿದ್ದಾರೆ. ಇದು ಅಶಿಸ್ತು ಪ್ರದರ್ಶಿಸುತ್ತಿರುವ ಇತರ ಶಾಸಕರಿಗೆ ತಕ್ಕ ಪಾಠವಾಗಲಿ ಎಂಬ ಆಶಯವೂ ಕಾಂಗ್ರೆಸ್ಗೆ ಇದೆ.

ರಮೇಶ್ ಜಾರಕಿಹೊಳಿ ಬಿಜೆಪಿ ಸಂಪರ್ಕದಲ್ಲಿದ್ದಾರೆ?
ರಮೇಶ್ ಜಾರಕಿಹೊಳಿ ಅವರು ಈಗಾಗಲೇ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. ಸತೀಶ್ ಜಾರಕಿಹೊಳಿ ಸಹ ಮೊನ್ನೆಯಷ್ಟೆ ಸುವರ್ಣಸೌಧದ ಆವರಣದಲ್ಲಿ ರಾಮುಲು ಜೊತೆ ಚರ್ಚೆ ನಡೆಸುತ್ತಿದ್ದರು. ರಮೇಶ್ ಅವರನ್ನು ಸಂಪುಟದಿಂದ ಕೈಬಿಟ್ಟರೆ ಪಕ್ಷದ ವಿರುದ್ಧ ಬಂಡಾಯ ಎದ್ದು ಬಿಜೆಪಿ ಸೇರುವ ಸಾಧ್ಯತೆ ಇದೆ. ಅವರ ಜೊತೆ ಶಾಸಕರಾದ ಸತೀಶ್ ಜಾರಕಿಹೊಳಿ, ತುಕಾರಾಂ ಇನ್ನೂ ಕೆಲವು ಶಾಸಕರು ಕಾಂಗ್ರೆಸ್ ವಿರುದ್ಧ ನಿಲ್ಲುವ ಸಾಧ್ಯತೆ ಇದೆ.












Click it and Unblock the Notifications