'ಇಂಥ ಕೆಟ್ಟ ಮುಖ್ಯಮಂತ್ರಿಯನ್ನು ನಾನೆಂದು ಕಂಡಿಲ್ಲ'
ಬೆಂಗಳೂರು, ಆಗಸ್ಟ್ 11 : 'ಕುಮಾರಸ್ವಾಮಿ ಅವರ ಹಿಟ್ ಅಂಡ್ ರನ್ ರೀತಿಯ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ', 'ಇಂಥ ಕೆಟ್ಟ ಮುಖ್ಯಮಂತ್ರಿಯನ್ನು ನಾನೆಂದು ಕಂಡಿಲ್ಲ'. ಹೀಗೆ ಆರೋಪ ಪ್ರತ್ಯಾರೋಪಗಳೊಂದಿಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮಾತಿನ ಮಲ್ಲಯುದ್ಧಕ್ಕೆ ಇಳಿದಿದ್ದಾರೆ.
ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಕುಮಾರಸ್ವಾಮಿ ಅವರನ್ನು ಬಂಧಿಸಿದೆ ಎಂಬ ಸುದ್ದಿಗಳು ಈ ಮಾತಿನ ಮಲ್ಲಯುದ್ಧಕ್ಕೆ ಕಾರಣವಾಗಿವೆ. ಉಭಯ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ, ಸ್ಪಷ್ಟನೆಗಳನ್ನು ನೀಡುತ್ತಿದ್ದಾರೆ. [SIT ಯಿಂದ ಬಂಧನ, ಕುಮಾರಸ್ವಾಮಿ ಹೇಳುವುದೇನು?]
ಸೋಮವಾರ ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 'ಕುಮಾರಸ್ವಾಮಿ ಅವರನ್ನು ಎಸ್ಐಟಿ ವಿಚಾರಣೆ ನಡೆಸಿದ್ದಕ್ಕೂ, ನನಗೂ ಯಾವುದೇ ಸಂಬಂಧವಿಲ್ಲ. ಅವರ ವಿರುದ್ಧ ನನಗೆ ಯಾವ ವೈಯಕ್ತಿಕ ದ್ವೇಷವೂ ಇಲ್ಲ' ಎಂದು ಸ್ಪಷ್ಟಪಡಿಸಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, 'ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯ ಮಂತ್ರಿಗಳಾಗಿದ್ದಾಗ ನಾನು ದಾಖಲೆ ಬಿಡುಗಡೆ ಮಾಡಿ ಅವರ ವಿರುದ್ಧ ಹೋರಾಟ ಮಾಡಿದ್ದೇನೆ. ಆದರೆ, ಅವರು ಕಾನೂನು ಮೀರಿ ನನ್ನ ವಿರುದ್ಧ ಕೆಲಸ ಮಾಡಿಲ್ಲ. ಸಿದ್ದರಾಮಯ್ಯ ಸರ್ಕಾರ ಮಾತ್ರ ಅಧಿಕಾರಿಗಳ ಮೇಲೆ ಒತ್ತಾಯ ತಂದು, ನನ್ನನ್ನು ಬಂಧಿಸಲಾಗಿತ್ತು ಎಂಬ ಮಾಹಿತಿ ಹೊರಹಾಕಿದೆ' ಎಂದು ಆರೋಪಿಸಿದರು. ಚಿತ್ರಗಳಲ್ಲಿ ನೋಡಿ ಉಭಯ ನಾಯಕರ ಮಾತಿನ ಸಮರ....
ಎಚ್ಡಿಕೆ, ಸಿದ್ದರಾಮಯ್ಯ ನಡುವೆ ಮಾತಿನ ಮಲ್ಲಯುದ್ಧ
ರಾಜ್ಯದಲ್ಲಿ ನಡೆದ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಕುಮಾರಸ್ವಾಮಿ ಅವರನ್ನು ಬಂಧಿಸಿದೆ ಎಂಬ ಸುದ್ದಿಗಳು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಅವರ ನಡುವಿನ ಮಾತಿನ ಮಲ್ಲಯುದ್ಧಕ್ಕೆ ಕಾರಣವಾಗಿವೆ. ಉಭಯ ನಾಯಕರು ಆರೋಪ ಪ್ರತ್ಯಾರೋಪಗಳನ್ನು ಮಾಡುತ್ತಿದ್ದಾರೆ.
'ಎಚ್ಡಿಕೆ ವಿರುದ್ಧ ವೈಯಕ್ತಿಕ ದ್ವೇಷವಿಲ್ಲ'
'ತಮ್ಮನ್ನು ಜೈಲಿಗೆ ಕಳುಹಿಸಲು ಸಿದ್ದರಾಮಯ್ಯ ಸಂಚು ರೂಪಿಸಿದ್ದಾರೆ' ಎಂಬ ಕುಮಾರಸ್ವಾಮಿ ಅವರ ಆರೋಪಕ್ಕೆ ಸಿದ್ದರಾಮಯ್ಯ ಅವರು ಉತ್ತರ ನೀಡಿದ್ದು, 'ಕುಮಾರಸ್ವಾಮಿ ಅವರನ್ನು ವಿಶೇಷ ತನಿಖಾ ತಂಡ ವಿಚಾರಣೆ ನಡೆಸಿರುವುದಕ್ಕೂ ನನಗೂ ಸಂಬಂಧವಿಲ್ಲ. ಅವರ ವಿರುದ್ಧ ನನಗೆ ಯಾವ ವೈಯಕ್ತಿಕ ದ್ವೇಷವೂ ಇಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.
'ಎಸ್ಐಟಿಯಲ್ಲಿ ಸರ್ಕಾರ ಮಧ್ಯಪ್ರವೇಶಿಸುವುದಿಲ್ಲ'
'ಎಸ್ಐಟಿಯಲ್ಲಿ ನಾನಾಗಲೀ, ಸಚಿವರಾಗಲೀ ಮಧ್ಯಪ್ರವೇಶಿಸುವುದಿಲ್ಲ, ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರು ನೀಡಿದ ವರದಿಯ ಆಧಾರ ಮೇಲೆ ಎಸ್ಐಟಿ ರಚನೆ ಮಾಡಲಾಗಿದೆ. ಅವರು ಕುಮಾರಸ್ವಾಮಿ ಅವರನ್ನು ವಿಚಾರಣೆ ನಡೆಸಿದ್ದಾರೆ' ಎಂದು ಸಿದ್ದರಾಮಯ್ಯ ಹೇಳಿದರು.
'ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಡಿ'
'ತಮ್ಮ ವಿರುದ್ಧ ಕುಮಾರಸ್ವಾಮಿ ಅವರು ಮಾಡುತ್ತಿರುವ ಆರೋಪಗಳು ಅರ್ಧಹೀನವಾದವು. ಹಿಟ್ ಅಂಡ್ ರನ್ ರೀತಿಯ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ' ಎಂದು ಸಿದ್ದರಾಮಯ್ಯ ಅವರು ಲೇವಡಿ ಮಾಡಿದ್ದಾರೆ.
'ಇಂತಹ ಕೆಟ್ಟ ಮುಖ್ಯಮಂತ್ರಿಯನ್ನು ನಾನು ನೋಡಿಲ್ಲ'
ಸಿದ್ದರಾಮಯ್ಯ ಆರೋಪಗಳಿಗೆ ತಿರುಗೇಟು ಕೊಟ್ಟಿರುವ ಕುಮಾರಸ್ವಾಮಿ ಅವರು, 'ಇಂತಹ ಕೆಟ್ಟ ಮುಖ್ಯಮಂತ್ರಿಯನ್ನು ನಾನೆಂದೂ ನೋಡಿಲ್ಲ. ಅಧಿಕಾರಿಗಳ ಮೇಲೆ ಒತ್ತಡ ತಂದು ಸರ್ಕಾರ ನನ್ನನ್ನು ಬಂಧಿಸಲಾಗಿತ್ತು ಎಂಬ ಮಾಹಿತಿ ಹೊರಹಾಕಿದೆ' ಎಂದು ಕುಮಾರಸ್ವಾಮಿ ದೂರಿದರು.
ಎಸ್ಐಟಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿದೆಯೇ?
'ಎಸ್ಐಟಿ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿದೆಯೇ?, ನನ್ನನ್ನು ತನಿಖೆಗೆ ಏಕೆ ಕರೆಸಲಾಯಿತು?, ಬಂಧಿಸಲು ನಾನು ಕಾನೂನು ಬಾಹಿರವಾದ ಕೆಲಸ ಮಾಡಿದ್ದೇನೆಯೇ?' ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
'ಯಡಿಯೂರಪ್ಪ ಕಾನೂನು ಮೀರಿ ಕೆಲಸ ಮಾಡಿಲ್ಲ'
'ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ನಾನು ಹಲವಾರು ದಾಖಲೆ ಬಿಡುಗಡೆ ಮಾಡಿ ಅವರ ವಿರುದ್ಧ ಹೋರಾಟ ಮಾಡಿದ್ದೇನೆ. ಆದರೆ, ಅವರು ಕಾನೂನು ಮೀರಿ ನನ್ನ ವಿರುದ್ಧ ಕೆಲಸ ಮಾಡಲಿಲ್ಲ. ಆದರೆ, ಈ ಸರ್ಕಾರ ಮಾತ್ರ ಅಧಿಕಾರಿಗಳ ಮೂಲಕ ಸುಳ್ಳು ಸುದ್ದಿ ಹಬ್ಬಿಸುತ್ತಿದೆ' ಎಂದು ಕುಮಾರಸ್ವಾಮಿ ದೂರಿದರು.