ಕುಮಾರಸ್ವಾಮಿ ಸಾಚಾತನ ತೋರಲಿ: ಸಿಎಂ ಸಿದ್ದು
ಹುಬ್ಬಳ್ಳಿ, ಏ. 2: ಸಿದ್ದರಾಮಯ್ಯ ಸರಕಾರ ಅಕ್ರಮ ವ್ಯವಹಾರಗಳಲ್ಲಿ ತೊಡಗಿದೆ. ಅದರ ಬಗ್ಗೆ ನನ್ನಲ್ಲಿರುವ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಬೆದರಿಕೆಯೊಡ್ಡಿದ್ದ ಮಾಜಿ ಸಂಸದ ಎಚ್ ಡಿ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಅಕ್ರಮ ಗಣಿಗಾರಿಕೆ ನಡೆಸುತ್ತಿರುವವರಿಗೆ ನಮ್ಮ ಸರ್ಕಾರ ರಕ್ಷಣೆ ಕೊಡುತ್ತಿದೆ ಎಂದು ಆರೋಪಿಸುವ ಕುಮಾರಸ್ವಾಮಿ ಅದಕ್ಕೆ ಸಂಬಂಧಪಟ್ಟ ದಾಖಲೆಗಳಿದ್ದರೆ ತಕ್ಷಣವೇ ಬಿಡುಗಡೆ ಮಾಡಿ ಸಾಚಾತನ ತೋರಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ಕೊಟ್ಟಿದ್ದಾರೆ.
ಕುಮಾರಸ್ವಾಮಿ ಸಾಚಾತನ ತೋರಲಿ:
ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಕ್ರಮ ಗಣಿಗಾರಿಕೆ ಮಾಡುತ್ತಿರುವವರಿಗೆ ಸರ್ಕಾರ ರಕ್ಷಣೆ ಕೊಡುತ್ತಿದೆ. ಈ ಬಗ್ಗೆ ಸದ್ಯದಲ್ಲೇ ದಾಖಲೆಗಳನ್ನು ಬಿಡುಗಡೆ ಮಾಡುವುದಾಗಿ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ. ತಡವೇಕೆ ಇಂದೇ ಬಿಡುಗಡೆ ಮಾಡಲಿ ಎಂದು ಹೇಳಿದರು.

ನಮ್ಮದು ಶುದ್ಧ ಹಸ್ತ: ಸಿದ್ದರಾಮಯ್ಯ
ನಾನು ಅಧಿಕಾರಕ್ಕೆ ಬಂದು 10 ತಿಂಗಳು ಕಳೆಯುತ್ತಾ ಬಂದಿದೆ. ಯಾವುದೇ ಅಕ್ರಮ ಗಣಿಗಾರಿಕೆಗೆ ಅವಕಾಶ ಕೊಟ್ಟಿಲ್ಲ. ಯಾರಿಗೂ ರಕ್ಷಣೆ ನೀಡಿಲ್ಲ, ನಮ್ಮದು ಶುದ್ಧ ಹಸ್ತ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 20 ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಸಿದ್ಧರಾಮಯ್ಯಗೆ ನಾಲಿಗೆ ಮೇಲೆ ಹಿಡಿತವಿರಲಿ: ದೇವೇಗೌಡ
ಈ ಮಧ್ಯೆ ಬೆಂಗಳೂರಿನಲ್ಲಿ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು 'ಅಧಿಕಾರ ಇದೆ ಎಂಬ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಾಲಿಗೆ ಮೇಲೆ ಹಿಡಿತ ಇಟ್ಟುಕೊಂಡು ಮಾತನಾಡುವುದನ್ನು ಕಲಿಯಲಿ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನನ್ನ ಸಂಪಾದನೆ ಬಗ್ಗೆ ಸಿದ್ದು ಬಳಿ ದಾಖಲೆ ಇದೆಯೇ?
'ಮುಖ್ಯಮಂತ್ರಿ ಹಾಸನಕ್ಕೆ ಬಂದು ದೇವೇಗೌಡರು ಸಾವಿರಾರು ಕೋಟಿ ರೂ. ಅಕ್ರಮವಾಗಿ ಸಂಪಾದಿಸಿದ್ದಾರೆ. ಇದೆಲ್ಲಾ ಈರುಳ್ಳಿ, ಆಲೂಗಡ್ಡೆ ಬೆಳೆದು ಸಂಪಾದನೆ ಮಾಡಿದ್ದಾರೆಯೇ? ಎಂದು ಸಿದ್ರಾಮಯ್ಯ ಅಧಿಕಾರದ ಮದನಿಂದ ಮಾತನಾಡಿದ್ದಾರೆ. ನಾನು ಸಾವಿರ ಕೋಟಿ ರೂ. ಸಂಪಾದನೆ ಮಾಡಿರುವ ಬಗ್ಗೆ ಸಿದ್ಧರಾಮಯ್ಯನವರ ಬಳಿ ದಾಖಲೆ ಇದೆಯೇ?' ಎಂದು ಪ್ರಶ್ನಿಸಿದರು.

ಸಿಎಂ ಇಬ್ರಾಹಿಂ ಅವರನ್ನು ಕೇಳಿಕೊಂಡು ಮಾತನಾಡಲಿ
ಅಧಿಕಾರ ಎಂಬುದು ಯಾರಿಗೂ ಶಾಶ್ವತವಲ್ಲ. ಆದರೆ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ದೇವೇಗೌಡರು ಯಾರು? ಏನು? ಎಂಬುದು ಸಿದ್ಧರಾಮಯ್ಯನವರಿಗೆ ಗೊತ್ತಿಲ್ಲದೇ ಹೋದರೆ ಈಗ ಅವರ ಪಕ್ಕದಲ್ಲೇ ಇರುವ ಸಿಎಂ ಇಬ್ರಾಹಿಂ ಅವರನ್ನು ಕೇಳಿಕೊಂಡು ಮಾತನಾಡಲಿ ಎಂದೂ ಟಾಂಗ್ ನೀಡಿದರು.

ಜೆಡಿಎಸ್ ಪಕ್ಷವನ್ನು ಮುಗಿಸಲಿಕ್ಕೆ ಸಾಧ್ಯವಿಲ್ಲ
ನನ್ನ ಕುಟುಂಬದ ಕಷ್ಟಗಳನ್ನು ಬದಿಗಿಟ್ಟು ನಾನು ಪಕ್ಷವನ್ನು ಕಟ್ಟಿದ್ದೇನೆ. ಹಾಸನದಲ್ಲಿ ನನ್ನ ಹೆಂಡತಿ ಮೇಲೆ ಆಸಿಡ್ ದಾಳಿ ನಡೆಯಿತು. ಅಂತಹ ಕಷ್ಟದ ಸನ್ನಿವೇಶದಲ್ಲೂ ವೈಯಕ್ತಿಕ ನೋವನ್ನು ಮರೆತು ಪಕ್ಷ ಕಟ್ಟಿದ್ದೇನೆ. ಎಲ್ಲಿಯವರೆಗೆ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡುತ್ತಾರೋ ಅಲ್ಲಿವರೆಗೆ ಜೆಡಿಎಸ್ ಪಕ್ಷವನ್ನು ಮುಗಿಸಲಿಕ್ಕೆ ಸಾಧ್ಯವಿಲ್ಲ ಎಂದು ಗೌಡರು ಗುಡುಗಿದರು.












Click it and Unblock the Notifications