ಮತ್ತೆ ಸುದ್ದಿಯಾದ ಶಿವಮೊಗ್ಗದ ಡಿಸಿಸಿ ಬ್ಯಾಂಕ್
ಶಿವಮೊಗ್ಗ, ಮೇ 24; ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಮತ್ತೆ ಸುದ್ದಿಯಲ್ಲಿದೆ. ಬ್ಯಾಂಕ್ನ ಮಾಜಿ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ನಿರ್ದೇಶಕ ಸ್ಥಾನ ರದ್ದು ಆದೇಶ ತೆರವಾಗಿದೆ. ಕಾಂಗ್ರೆಸ್ ನಾಯಕರಾದ ಅವರು ಮತ್ತೊಮ್ಮೆ ಬ್ಯಾಂಕ್ ನಿರ್ದೇಶಕರಾಗಬಹುದಾಗಿದೆ.
ನಿಬಂಧಕರ ನ್ಯಾಯಾಲಯ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ತೀರ್ಥಹಳ್ಳಿಯ ಕಾಂಗ್ರೆಸ್ನ ನಾಯಕ ಆರ್. ಎಂ. ಮಂಜುನಾಥ ಗೌಡ ನಿರ್ದೇಶಕ ಸ್ಥಾನ ರದ್ದುಗೊಳಿಸಿದ್ದ ಆದೇಶವನ್ನು ತೆರವುಗೊಳಿಸಿದೆ. ಈ ಮೂಲಕ ಬ್ಯಾಂಕ್ ಮತ್ತೆ ಸುದ್ದಿಯಾಗಿದೆ.

ಸಹಕಾರ ಇಲಾಖೆಯ ಜಂಟಿ ನಿಬಂಧಕರು 2020ರ ಅಕ್ಟೋಬರ್ನಲ್ಲಿ ಆರ್. ಎಂ. ಮಂಜುನಾಥ ಗೌಡರ ನಿರ್ದೇಶಕ ಸ್ಥಾನವನ್ನು ರದ್ದುಪಡಸಿ ಆದೇಶ ಹೊರಡಿಸಿದ್ದರು. ಈ ಆದೇಶವನ್ನು ನಿಬಂಧಕರ ನ್ಯಾಯಾಲಯ ತೆರವುಗೊಳಿಸಿದೆ. ಆರ್. ಎಂ. ಮಂಜುನಾಥ ಗೌಡರು ಮತ್ತೆ ಬ್ಯಾಂಕ್ ನಿರ್ದೇಶಕರಾಗಲು ಅವಕಾಶವಿದ್ದು, ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬಹುದಾಗಿದೆ.
ಕೋರ್ಟ್ ಆದೇಶ ಏನಾಗಿತ್ತು; ಶಿವಮೊಗ್ಗ ಡಿಸಿಸಿ ಬ್ಯಾಂಕ್ನ ಗಾಂಧಿ ಬಜಾರ್ ಶಾಖೆಯಲ್ಲಿ ನಡೆದ 62.77 ಕೋಟಿ ರೂ. ಮೊತ್ತದ ಚಿನ್ನ ಅಡಮಾನ ಸಾಲದ ಹಗರಣ ಭಾರೀ ಸುದ್ದಿಯಾಗಿತ್ತು. ಆಗ ಬ್ಯಾಂಕಿನ ನಿರ್ದೇಶಕರಾಗಿದ್ದ ಆರ್. ಎಂ. ಮಂಜುನಾಥ ಗೌಡರನ್ನು ಮೊದಲು ನಿರ್ದೇಶಕ ಸ್ಥಾನದಿಂದ ವಜಾಗೊಳಿಸಲಾಗಿತ್ತು.

ಇದನ್ನು ಆರ್. ಎಂ. ಮಂಜುನಾಥ ಗೌಡ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು. ಆಗ ನಿರ್ದೇಶಕರ ವಜಾ ಆದೇಶಕ್ಕೆ ತಡೆ ನೀಡಲಾಗಿತ್ತು. ಆರ್. ಎಂ. ಮಂಜುನಾಥ ಗೌಡ ಅಧ್ಯಕ್ಷರಾಗಿ ಮುಂದುವರೆದಿದ್ದರು. ರಾಜ್ಯ ಸರ್ಕಾರ ಚಿತ್ರದುರ್ಗ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ಹಗರಣದ ವಿಚಾರಣೆಗೆ ಆದೇಶ ನೀಡಿತ್ತು.
ಈ ತನಿಖೆಯಲ್ಲಿ ಚಿನ್ನ ಅಡಮಾನ ಸಾಲ ಹಗರಣದ ಕುರಿತು ಮಾಹಿತಿ ಲಭ್ಯವಾ ಕಾರಣ ಆರ್. ಎಂ. ಮಂಜುನಾಥ ಗೌಡ ನಿರ್ದೇಶಕ ಸ್ಥಾನ ರದ್ದುಗೊಳಿಸಲಾಗಿತ್ತು. ಅಲ್ಲದೇ 5 ವರ್ಷಗಳ ಕಾಲ ಯಾವುದೇ ಸಹಕಾರ ಸಂಘದ ಸದಸ್ಯತ್ವ ಪಡೆಯದಂತೆ ಸೂಚನೆ ನೀಡಲಾಗಿತ್ತು.
ಸಿಬಿಐ ತನಿಖೆಗೆ ಒಪ್ಪಿಗೆ; ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಗರಣದ ಸಂಬಂಧ ಬ್ಯಾಂಕ್ ಅಧ್ಯಕ್ಷರಾಗಿದ್ದ ಆರ್. ಎಂ. ಮಂಜುನಾಥ ಗೌಡ ಮನೆ ಮೇಲೆ 2017ರಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆದಿತ್ತು. 2020ರಲ್ಲಿ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನಿಯಮಿತ ಕೊಟ್ಟ ಸಾಲದ ಬಗ್ಗೆಯೂ ಚರ್ಚೆ ನಡೆದಿತ್ತು. ಸಾಲದ ಹಗರಣದ ತನಿಖೆಯನ್ನು ಸಿಬಿಐಗೆ ನೀಡಲು ಸಹ ಒಪ್ಪಿಗೆ ನೀಡಲಾಗಿತ್ತು.
ಬಿಜೆಪಿ ನಾಯಕ, ತೀರ್ಥಹಳ್ಳಿ ಕ್ಷೇತ್ರದ ಶಾಸಕ ಆಗರ ಜ್ಞಾನೇಂದ್ರ ಡಿಸಿಸಿ ಬ್ಯಾಂಕ್ ಹಗರಣದ ವಿಚಾರವನ್ನು ತ್ರೈ ಮಾಸಿಕ ಸಭೆಯಲ್ಲಿ ಮಂಡಿಸಿದ್ದರು. ಸಭೆಯಲ್ಲಿ ಅಂತಿಮವಾಗಿ ಸಾಲ ಕೊಟ್ಟ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಲು ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಹಕಾರ ಸಚಿವರಾಗಿದ್ದ ಎಸ್. ಟಿ. ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿಯೂ ಡಿಸಿಸಿ ಬ್ಯಾಂಕ್ ಹಗರಣದ ವಿಚಾರ ಚರ್ಚೆಗೆ ಬಂದಿತ್ತು. ಆಗ ಅಧಿಕಾರಿಗಳು 13 ಜನ ನಿರ್ದೇಶಕರಲ್ಲಿ 8 ಮಂದಿಯಿಂದ ಅವ್ಯವಹಾರ ಆಗಿದೆ. ಅವರ ಸದಸ್ಯತ್ವ ರದ್ದು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದ್ದರು.
ಕಾಂಗ್ರೆಸ್ ಪಕ್ಷ ಸೇರ್ಪಡೆ; ಆರ್. ಎಂ. ಮಂಜುನಾಥ ಗೌಡ ಮೊದಲು ಕೆಜೆಪಿ ಪಕ್ಷದಲ್ಲಿದ್ದರು. ಬಳಿಕ ಅವರು ಜೆಡಿಎಸ್ ಸೇರಿದ್ದರು. ಶಿವಮೊಗ್ಗ ಜಿಲ್ಲಾ ಜೆಡಿಎಸ್ ಅಧ್ಯಕ್ಷರೂ ಆಗಿದ್ದರು. 2020ರಲ್ಲಿ ಅವರು ಕಾಂಗ್ರೆಸ್ ಸೇರಿದ್ದರು. ಈ ಬಾರಿಯ ಚುನಾವಣೆಯಲ್ಲಿ ಅವರು ತೀರ್ಥಹಳ್ಳಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.
ಆದರೆ ಚುನಾವಣೆಯಲ್ಲಿ ಪಕ್ಷ ಕಿಮ್ಮನೆ ರತ್ನಾಕರ್ಗೆ ಟಿಕೆಟ್ ನೀಡಿತ್ತು. ಆದರೆ ಆರ್. ಎಂ. ಮಂಜುನಾಥ ಗೌಡ ಕೆಪಿಸಿಸಿ ಅಧ್ಯಕ್ಷ, ಪಕ್ಷದ ಸೂಚನೆಯಂತೆ ಕಿಮ್ಮನೆ ರತ್ನಾಕರ್ ಜೊತೆ ಕೆಲಸ ಮಾಡಿದ್ದರು. ಚುನಾವಣೆಯಲ್ಲಿ ಕಿಮ್ಮನೆ ರತ್ನಾಕರ್ 72322 ಮತಗಳನ್ನು ಪಡೆದು ಬಿಜೆಪಿಯ ಆರಗ ಜ್ಞಾನೇಂದ್ರ ವಿರುದ್ಧ ಸೋಲು ಕಂಡಿದ್ದಾರೆ.












Click it and Unblock the Notifications