ಕುರುಬ ಜಾತಿಯನ್ನು ಎಸ್ಟಿಗೆ ಸೇರಿಸಲು ಮುಂದಾದ ರಾಜ್ಯ ಸರ್ಕಾರ
ಬೆಂಗಳೂರು, ಮೇ 11: ಕುರುಬ ಸಮುದಾಯವನ್ನು ಎಸ್ಟಿ (ಪರಿಶಿಷ್ಟ ಪಂಗಡ)ಕ್ಕೆ ಸೇರಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಿದೆ.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಲು ಕುಲಶಾಸ್ತ್ರೀಯ ಅಧ್ಯಯನವನ್ನು ಮಾಡಿ ವರದಿ ನೀಡುವಂತೆ ರಾಜ್ಯ ಸರ್ಕಾರವು ಬುಡಕಟ್ಟು ಸಂಶೋಧನಾ ಸಂಸ್ಥೆಗೆ ಸೂಚಿಸಿದೆ. ಅಧ್ಯಯನಕ್ಕಾಗಿ 40 ಲಕ್ಷ ರೂ. ಮಂಜೂರು ಮಾಡಲಾಗಿದೆ.
ಸಮಾಜ ಕಲ್ಯಾಣ ಇಲಾಖೆಯು ಹೀಗೊಂದು ಸೂಚನೆಯನ್ನು ಬುಡಕಟ್ಟು ಇಲಾಖೆಗೆ ನೀಡಿದ್ದು, ಕುರುಬ ಸಮುದಾಯವನ್ನು ಎಸ್ಟಿ ಗೆ ಸೇರಿಸಬೇಕೆಂದು ಹಲವು ಸಂಘ-ಸಂಸ್ಥೆಗಳು, ಮಠಗಳು ಒತ್ತಾಯ ಮಾಡಿದ್ದರಿಂದ ಸರ್ಕಾರ ಈ ನಿಟ್ಟಿನಲ್ಲಿ ಚಿಂತನೆ ನಡೆಸಿದೆ ಎಂದು ಹೇಳಿದೆ.

ಕುರುಬ ಸಮಾಜದ ಸಂಸ್ಕೃತಿ, ಆಚಾರ- ವಿಚಾರ, ಭಾಷೆ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗತಿ, ಭೌಗೋಳಿಕ ಅಂಶಗಳ ಕುರಿತಂತೆ ಕುಲಶಾಸ್ತ್ರೀಯ ಅಧ್ಯಯನವನ್ನು ರಾಜ್ಯದ ಜಿಲ್ಲೆಗಳಲ್ಲಿ ನಡೆಸಿ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.
ಪ್ರಸ್ತುತ ಕುರುಬ ಜನಾಂಗ ಹಿಂದುಳಿದ ವರ್ಗಗಳ (2ಎ) ಅಡಿಯಲ್ಲಿ ಬರುತ್ತಿದ್ದು, ಶೇ.15 ರಷ್ಟು ಮೀಸಲು ಲಭ್ಯವಾಗುತ್ತಿದೆ. ಎಸ್ಟಿಗೆ ಸೇರಿಸುವುದರಿಂದ ಕುರುಬ ಜನಾಂಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ಸಿಗಲಿದೆ.
ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸುವ ಈ ಪ್ರಸ್ತಾವನೆಯ ಹಿಂದೆ ಕುರುಬ ಸಮುದಾಯದ ನಾಯಕ ಸಿದ್ದರಾಮಯ್ಯ ಅವರ ಪಾತ್ರ ಮುಖ್ಯವಾಗಿದೆ. ರಾಜ್ಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಕುರುಬ ಸಮುದಾಯವಿದ್ದು, ಅವರ ಬೆಂಬಲದ ಲಾಭವನನ್ನು ಪಡೆಯಲು ಈ ನಿರ್ಣಯ ಸಹಾಯಕಾರಿಯಾಗಲಿದೆ.












Click it and Unblock the Notifications