ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸ್ಸಿಗೆ ಶಾಮನೂರು ಶಿವಶಂಕರಪ್ಪ ವಿರೋಧ
ದಾವಣೆಗೆರೆ, ಮಾರ್ಚ್ 20: ಲಿಂಗಾಯತ ಪ್ರತ್ಯೇಕ ಧರ್ಮ ವರದಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿರುವುದು ಮತ್ತು ಕೇಂದ್ರಕ್ಕೆ ಶಿಫಾರಸ್ಸು ಮಾಡಿರುವವುದಕ್ಕೆ ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದು ಶಾಮನೂರು ಶಿವಶಂಕರಪ್ಪ ಅವರ ನೇತೃತ್ವದಲ್ಲಿ ಯಡಿಯೂರಪ್ಪ ಸೇರಿದಂತೆ ಅಖಿಲ ಭಾರತ ವೀರಶೈವ ಸಭಾದ ಮುಖ್ಯಸ್ಥರು ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ನಿನ್ನೆ ಈ ವಿಷಯವಾಗಿ ಸಾಕಷ್ಟು ಗೊಂದಲ ಇತ್ತು, ಸಂಪೂರ್ಣ ಮಾಹಿತಿ ಲಭ್ಯ ಇರಲಿಲ್ಲ ಹಾಗಾಗಿ ಸರ್ಕಾರದ ನಿರ್ಧಾರದ ಪರವಾಗಿ ಮಾತನಾಡಿದೆ, ಆದರೆ ಈಗ ರಾಜ್ಯ ಸರ್ಕಾರದ ಯೋಜನೆ ಅರಿವಿಗೆ ಬಂದಿದೆ, ಸಂಪುಟ ಸಭೆಯ ನಿರ್ಧಾರವನ್ನು ಅಖಿಲ ಭಾರತ ವೀರಶೈವ ಮಹಾಸಭಾವು ಖಂಡಿಸುತ್ತದೆ' ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರದ ಈ ನಿರ್ಣಯವನ್ನು ಅನ್ಯಾಯದ ಪರಮಾವಧಿ ಎಂದು ಬಣ್ಣಿಸಿದ ಅವರು, ವೀರಶೈವ ಎಂಬ ಧರ್ಮ ಅಸ್ಥಿತ್ವದಲ್ಲೇ ಇರಲಿಲ್ಲ ಎಂಬ ರೀತಿಯ ನಿರ್ಧಾರವನ್ನು ಸರ್ಕಾರ ತಳೆದಂತಿದೆ, ಆದರೆ ವೀರಶೈವ ಸಮುದಾಯವು ನೂರಾರು ವರ್ಷಗಳಷ್ಟು ಹಳೆಯದಾಗಿದ್ದು, ಈಗ ಸರ್ಕಾರವು ಅದನ್ನು ಒಡೆಯುವ ಹುನ್ನಾರ ಮಾಡಿದೆ ಎಂದರು.

ನಿನ್ನೆ ರಾಜ್ಯ ಸಂಪುಟ ಸಭೆಯ ತೀರ್ಮಾನಕ್ಕೆ ಸಹಮತ ಸೂಚಿಸಿದ್ದ ಶಾಮನೂರು ಶಿವಶಂಕರಪ್ಪ ಅವರು ಇಂದು ವಿರೋಧ ವ್ಯಕ್ತಪಡಿಸಿರುವುದು ಆಶ್ಚರ್ಯ ತಂದಿದೆ. ವೀರಶೈವ-ಲಿಂಗಾಯತ ಧರ್ಮಕ್ಕೆ ನಮ್ಮ ನಿರ್ಧಾರ ಅಚಲವಾಗಿದೆ ಎಂದಿರುವ ಅವರು ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.
ಅಖಿಲ ಭಾರತ ವೀರಶೈವ ಮಹಾಸಭಾದ ಮುಂದಿನ ನಡೆಯ ಬಗ್ಗೆ ಮಾರ್ಚ್ 23ರಂದು ಬೆಂಗಳೂರಿನಲ್ಲಿ ಸಭೆ ಒಂದನ್ನು ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.












Click it and Unblock the Notifications