Government Employee: ನೌಕರರ ಹೆಚ್ಚುವರಿ ವೇತನ, ಜ್ಯೇಷ್ಠತಾ ಪಟ್ಟಿ
ಬೆಂಗಳೂರು, ಮೇ 01: ಕರ್ನಾಟಕ ಸರ್ಕಾರದ ಖಜಾನೆ ಇಲಾಖೆ ಜ್ಯೇಷ್ಠತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆ ಮಾಡುವ ಕುರಿತು ಸುತ್ತೋಲೆಯನ್ನು ಹೊರಡಿಸಿದೆ. ಸರ್ಕಾರದ ಅಧಿಕೃತ ಜ್ಞಾಪನಾ ಪತ್ರಗಳನ್ನು ಉಲ್ಲೇಖ ಮಾಡಿ, ಈ ಸುತ್ತೋಲೆ ಪ್ರಕಟಿಸಲಾಗಿದೆ.
ಟಿಪ್ಪಣಿ ಆಯುಕ್ತರಿಂದ ಅನುಮೋದಿಸಲ್ಪಟ್ಟಿದೆ ಎಂದು ಖಜಾನೆ ಆಯುಕ್ತರ ಪರವಾಗಿ, ಬೆಂಗಳೂರು ಈ ಸುತ್ತೋಲೆ ಹೊರಡಿಸಲಾಗಿದೆ. ಪ್ರತಿ ವರ್ಷ ಪ್ರಕಟಿಸಲಾಗುವ ಜ್ಯೇಷ್ಠತಾ ಪಟ್ಟಿಗೆ ಆಕ್ಷೇಪಣೆ ಸಲ್ಲಿಸುವ ಬಗ್ಗೆ ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖಿತ ಸರ್ಕಾರದ ಆದೇಶಗಳಲ್ಲಿನ ಮಾರ್ಗಸೂಚಿಯಂತೆ ಜ್ಯೇಷ್ಠತಾ ಪಟ್ಟಿಗಳನ್ನು ಪ್ರತಿ ವರ್ಷ ಪ್ರಕಟಿಸಲಾಗುತ್ತಿದ್ದು, ಅಧಿಕಾರಿ/ ನೌಕರರುಗಳಿಗೆ ಮುಂಬಡ್ತಿ ನೀಡುವ, ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡುವ, ವೇತನ ಸಮಾನಾಂತರಗೊಳಿಸುವ ಇತ್ಯಾದಿ ಸೇವಾ ಸೌಲಭ್ಯ ಮಂಜೂರು ಮಾಡಬೇಕಾದ ಸಂದರ್ಭಗಳಲ್ಲಿ ಸದರಿ ಜ್ಯೇಷ್ಠತಾ ಪಟ್ಟಿಗಳ ಪರಿಶೀಲನೆ ಅತ್ಯವಶ್ಯಕವಾಗಿರುತ್ತದೆ. ಹೀಗಾಗಿ ಪ್ರಕಟಿಸಲಾಗುವ ಪಟ್ಟಿಗೆ ಸಂಬಂಧಿಸಿದಂತೆ ಕ್ರಮ ವಹಿಸಲು ಸೂಚಿಸಿದೆ ಎಂದು ತಿಳಿಸಿದೆ.
ಯಾವ ಕ್ರಮಗಳು
* ಖಜಾನೆ ಇಲಾಖೆಯ ವಿವಿಧ ವೃಂದಗಳ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಗಳನ್ನು ಪ್ರತಿ ವರ್ಷಾರಂಭದಲ್ಲಿ ಪ್ರಕಟಿಸಲಾಗುತ್ತಿದ್ದು, ಸದರಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯಲ್ಲಿನ ವಿವರಗಳಿಂದ ಬಾದಿತರಾದ ಅಧಿಕಾರಿ/ ನೌಕರರು ಅವಶ್ಯ ದೃಢೀಕೃತ ದಾಖಲೆಗಳೊಂದಿಗೆ ನಿಗದಿತ ಸಮಯದಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಲಾಗುತ್ತಿದ್ದು, ಸ್ವೀಕೃತವಾದ ದಾಖಲೆಗಳ ಪರಿಶೀಲನೆಯ ನಂತರ ಜ್ಯೇಷ್ಠತಾ ಪಟ್ಟಿಯನ್ನು ಅಂತಿಮಗೊಳಿಸಲಾಗುತ್ತಿರುತ್ತದೆ.
* ಆದಾಗ್ಯೂ ಜ್ಯೇಷ್ಠತಾ ಪಟ್ಟಿಗಳನ್ನು ಅಂತಿಮಗೊಳಿಸಿದ ನಂತರದಲ್ಲಿ ಸುಮಾರು ವರ್ಷಗಳ ನಂತರ ಜ್ಯೇಷ್ಠತಾ ಕ್ರಮ ಸಂಖ್ಯೆಯಲ್ಲಿ ವ್ಯತ್ಯಾಸವಿದೆ, ಜಾತಿ ನಮೂದಾಗಿರುವುದಿಲ್ಲ, ಇಲಾಖಾ ಪರೀಕ್ಷೆಯ ಮಾಹಿತಿ ನಮೂದಾಗಿರುವುದಿಲ್ಲ. ಇತ್ಯಾದಿ ಆಕ್ಷೇಪಣೆಗಳನ್ನು ಪದೇ ಪದೇ ಸಲ್ಲಿಸುತ್ತಿರುವುದನ್ನು
ಗಮನಿಸಲಾಗಿದೆ.
* ಪ್ರತಿ ಬಾರಿ ಜ್ಯೇಷ್ಠತಾ ಪಟ್ಟಿ ಪ್ರಕಟವಾದಾಗ ನೀಡಲಾದ ಸೂಚನೆಗಳನ್ವಯ ಪರಿಶೀಲಿಸಿ ಆಕ್ಷೇಪಣೆಗಳಿದ್ದಲ್ಲಿ ಕೂಡಲೇ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿ ಸರಿಪಡಿಸಿಕೊಳ್ಳುವುದು ಪ್ರತಿಯೊಬ್ಬ ಅಧಿಕಾರಿ/ ನೌಕರರ ಜವಾಬ್ದಾರಿಯಾಗಿರುತ್ತದೆ. ಹೀಗೆ ಮಾಡದೇ ಒಂದು ವೃಂದದಲ್ಲಿ (ದ್ವಿ.ದ.ಸ/ ಪ್ರ.ದ.ಸ) ಇರುವ ವ್ಯತ್ಯಾಸಗಳಿಗೆ ಬಡ್ತಿ ಹೊಂದಿ ಮತ್ತೊಂದು ವೃಂದಕ್ಕೆ (ಮುಖ್ಯ ಲೆಕ್ಕಿಗರು / ಸ.ಖ.ಅ) ಬಂದ ನಂತರದಲ್ಲಿ ಆಕ್ಷೇಪಣೆ ಸಲ್ಲಿಸುತ್ತಿರುವುದು ಸರಿಯಾದ ಕ್ರಮವಲ್ಲ.
* ಪ್ರಸ್ತುತ ಮುಖ್ಯ ಲೆಕ್ಕಿಗರು ಹಾಗೂ ಪ್ರಥಮ ದರ್ಜೆ ಸಹಾಯಕರ ವೃಂದದಲ್ಲಿ 1998ನೇ ಸಾಲಿನಿಂದ ಹಾಗೂ ದ್ವಿತೀಯ ದರ್ಜೆ ಸಹಾಯಕರ ವೃಂದದಲ್ಲಿ 1991ನೇ ಸಾಲಿನಿಂದ ಖಜಾನೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿರುವ/ ನಿರ್ವಹಿಸುತ್ತಿರುವ ಸಿಬ್ಬಂದಿಗಳ ವಿವರದೊಂದಿಗೆ ದಿನಾಂಕ 01/01/2024ರಲ್ಲಿದ್ದಂತೆ ವಿವಿಧ ವೃಂದಗಳ ಜ್ಯೇಷ್ಠತಾ ಪಟ್ಟಿಗಳನ್ನು ಪ್ರಕಟಿಸಲಾಗಿದ್ದು, ಅಧಿಕಾರಿ/ ನೌಕರರಿಗೆ ಸಂಬಂಧಿಸಿದಂತೆ ಯಾವುದೇ ವೃಂದದಲ್ಲಿ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಆಕ್ಷೇಪಣೆಯನ್ನು ಸಮರ್ಥಿಸುವ ಪೂರಕ ದಾಖಲಾತಿಗಳೊಂದಿಗೆ ಕೂಡಲೇ ತಮ್ಮ ಕಚೇರಿ ಮುಖ್ಯಸ್ಥರ ಮೂಲಕ ಸಮುಚಿತ ಮಾರ್ಗದಲ್ಲಿ ಖಜಾನೆ ಆಯುಕ್ತರಿಗೆ ಸಲ್ಲಿಸುವುದು.
* ಇದು ಒಂದು ಬಾರಿಯ ಚಟುವಟಿಕೆಯಾಗಿದ್ದು, ಅವಧಿ ಮೀರಿದ ಹಾಗೂ ಪೂರಕ ದಾಖಲಾತಿಗಳಿಲ್ಲದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ.
* ಜಿಲ್ಲಾ ಖಜಾನೆಯ ಮುಖ್ಯಸ್ಥರು ತಮ್ಮ ವ್ಯಾಪ್ತಿಯ ಉಪಖಜಾನೆಗಳ/ ತಾಲ್ಲೂಕು ಪಂಚಾಯಿತಿ/ ಜಿಲ್ಲಾ ಪಂಚಾಯಿತಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ ನೌಕರರಿಂದ ಸಂಬಂಧಿತ ವೃಂದದ ಜ್ಯೇಷ್ಠತಾ ಪಟ್ಟಿಯ ವಿವರದ ಕುರಿತು ಅನುಬಂಧದಲ್ಲಿ ಲಗತ್ತಿಸಿರುವ ನಿಗದಿತ ನಮೂನೆಯಲ್ಲಿ ಸಹಿ ಪಡೆಯುವ ಮೂಲಕ ಸ್ವೀಕೃತಿ ಪಡೆಯುವುದು. ಈ ರೀತಿ ಪಡೆದ ಸ್ವೀಕೃತಿಯ ದೃಢೀಕೃತ ಪ್ರತಿಗಳನ್ನು ಜರೂರಾಗಿ ಆಯುಕ್ತಾಲಯಕ್ಕೆ ಸಲ್ಲಿಸುವುದು.
* ಅಧಿಕಾರಿ/ ಸಿಬ್ಬಂದಿಗಳಿಂದ ಪಡೆದ ಸದರಿ ಸ್ವೀಕೃತಿಯ ದೃಢೀಕೃತ ಪ್ರತಿಗಳನ್ನು ಆಯುಕ್ತಾಲಯದಲ್ಲಿ ನಿರ್ವಹಿಸಲಾಗುವುದು ಹಾಗು ಸ್ವೀಕೃತಿ ನೀಡಿದ ಅಧಿಕಾರಿ/ ನೌಕರರು ಮುಂದಿನ ದಿನಗಳಲ್ಲಿ ಸಲ್ಲಿಸಲಾಗುವ ಯಾವುದೇ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲವೆಂದು ಸುತ್ತೋಲೆ ತಿಳಿಸಿದೆ.












Click it and Unblock the Notifications