ಎಸ್ ಎಂ ಕೃಷ್ಣ ಮನೆಯಂಗಣದಲ್ಲಿ ಹಿರಿಯ ಕಾಂಗ್ರೆಸ್ಸಿಗರ ಅಪಸ್ವರ
ಒಂದೆಡೆ ದಿಗ್ವಿಜಯ್ ಸಿಂಗ್ ಪದಚ್ಯುತಿ, ಇನ್ನೊಂದೆಡೆ ಸಂಪುಟ ಸೇರುವ ಆಕಾಂಕ್ಷಿಗಳು, ಇವೆರಡರ ನಡುವೆ ಈಗ ದಲಿತ ಸಮುದಾಯದವರು ಮುಖ್ಯಮಂತ್ರಿಯಾಗಬೇಕು ಎನ್ನುವ ಹೊಸ ಕೂಗು ಕಾಂಗ್ರೆಸ್ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ಜಾತಿ ಜನಗಣತಿ ಸೋರಿಕೆಯಾಗದೇ ಇದ್ದಲ್ಲಿ ಹಿಂದಿನಿಂದಲೂ ಇದ್ದ 'ದಲಿತ ಮುಖ್ಯಮಂತ್ರಿ' ಎನ್ನುವ ಕೂಗು ಸದ್ದು ಮಾಡುತ್ತಿರಲಿಲ್ಲವೇನೋ? ಆದರೆ, ಹಿರಿಯ ಕಾಂಗ್ರೆಸ್ ಮುಖಂಡ ಕೆ ಎಚ್ ಮುನಿಯಪ್ಪ ದಲಿತರೊಬ್ಬರು ಮುಖ್ಯಮಂತ್ರಿಯಾಗಲು ಇದು ಸಕಾಲ ಎಂದು ಹೇಳಿರುವುದು, ಪಕ್ಷದೊಳಗೆ ಒಡಕು ಮೂಡಿಸಿದರೆ ಆಶ್ಚರ್ಯ ಪಡಬೇಕಾಗಿಲ್ಲ. (ಜನಗಣತಿ ವರದಿ, ಮೊದಲನೇ ಸ್ಥಾನದಲ್ಲಿ ದಲಿತರು)
ಸಿಎಂ ಕುರ್ಚಿಯ ಮೇಲೆ ಸದಾ ಒಂದು ಕಣ್ಣಿಟ್ಟಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕೂಡಾ ಮುನಿಯಪ್ಪ ಮಾತಿಗೆ ತಲೆದೂಗಿರುವುದು ವಿಶೇಷ. ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರನ್ನು ಭೇಟಿಯಾದ ನಂತರ ಮುನಿಯಪ್ಪ, ದಲಿತರು ಸಿಎಂ ಆಗಬೇಕು ಮತ್ತು ಕೆಪಿಸಿಸಿ ಸಾರಥ್ಯ ವಹಿಸಿಕೊಳ್ಳಲು ತಾನು ಸಿದ್ದ ಎಂದು ಹೇಳಿದ್ದಾರೆ.
ಇನ್ನೊಂದೆಡೆ ಮೈಸೂರಿನ ಮಾಜಿ ಸಂಸದ ಎಚ್ ವಿಶ್ವನಾಥ್, ಕೃಷ್ಣ ಅವರನ್ನು ಭೇಟಿಯಾಗಿ ದಿಗ್ವಿಜಯ್ ಸಿಂಗ್ ಕಾರ್ಯವೈಖರಿಯ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಜೊತೆಗೆ ಸಿದ್ದು ಸರಕಾರದ ವಿರುದ್ದವೂ ಬೇಸರ ವ್ಯಕ್ತ ಪಡಿಸಿದ್ದಾರೆ. ಸಮಾನ ಮನಸ್ಕ ಶಾಸಕರ ಬೇಡಿಕೆಯಲ್ಲಿ ದಿಗ್ವಿಜಯ್ ಹಠಾವೋ ಕೂಡಾ ಒಂದು ಡಿಮಾಂಡ್ ಆಗಿತ್ತು. (ಕರ್ನಾಟಕ ಕಾಂಗ್ರೆಸ್ನಲ್ಲಿ ಬಿರುಸಿನ ಚಟುವಟಿಕೆ)
ನಿಗಮ ಮಂಡಳಿ ಬೇಡಿಕೆಗೆ ಸಿಎಂ ಸ್ಪಂಧಿಸಿದ ನಂತರ, ಸಂಪುಟ ಪುನರಾಚನೆಯ ಕೂಗಿಗೆ ಸಮಾನ ಮನಸ್ಕರ ಬಣಕ್ಕೆ ಕೈಜೋಡಿಸುತ್ತಿರುವ ಶಾಸಕರ ಸಂಖ್ಯೆ ಕೂಡಾ ಹೆಚ್ಚುತ್ತಿದೆ.
ಇದೇ ವಿಚಾರವನ್ನು ಹೈಕಮಾಂಡ್ ತಲುಪಿಸಲು ಸಿದ್ದು ಉತ್ಸುಕರಾಗಿದ್ದರೂ ಏಪ್ರಿಲ್ 17ರ ವರೆಗೆ ಭೇಟಿಯಾಗಲು ಅವಕಾಶ ಸಿಗದ ಹಿನ್ನಲೆಯಲ್ಲಿ ಸಿದ್ದು ಬರಪೀಡಿತ ಜಿಲ್ಲೆಗೆ ಹೊರಟಿದ್ದಾರೆ. ಮುಂದೆ ಓದಿ..

ಹೈಕಮಾಂಡ್ ವಲಯದಲ್ಲಿ ಪ್ರಭಾವಿ 3 ರಾಜಕಾರಣಿಗಳು
ಹೈಕಮಾಂಡ್ ವಲಯದಲ್ಲಿ ಪ್ರಭಾವಿ ಸ್ಥಾನದಲ್ಲಿರುವ ರಾಜ್ಯದ ಮೂರು ರಾಜಕಾರಣಿಗಳಾದ ಎಸ್ ಎಂ ಕೃಷ್ಣ, ಖರ್ಗೆ ಮತ್ತು ಜಾಫರ್ ಷರೀಫ್ ಜೊತೆ ಮುಖ್ಯಮಂತ್ರಿಗಳ ಸಂಬಂಧ 'ಗಳಸ್ಯ ಕಂಠಸ್ಯ' ಅನ್ನೋ ರೀತಿಯಲ್ಲಿ ಇಲ್ಲ. ಇತ್ತೀಚಿನ ಚುನಾವಣೆಯಲ್ಲಿ ಪಕ್ಷದ ನಿರಾಶದಾಯಕ ಪ್ರದರ್ಶನದ ನಂತರ ಹೈಕಮಾಂಡ್ ಅಂಗಣದಲ್ಲಿ ಕೃಷ್ಣ ಮತ್ತು ಖರ್ಗೆ ಓಡಾಟ ತುಸು ಹೆಚ್ಚಾಗಿರುವುದು ಗಮನಿಸಬೇಕಾದ ಅಂಶ.

ದಲಿತರು ಮೊದಲನೇ ಸ್ಥಾನದಲ್ಲಿ
ಸೋರಿಕೆಯಾದ ಜನಗಣತಿಯಲ್ಲಿ ದಲಿತರು ಮೊದಲನೇ ಸ್ಥಾನದಲ್ಲಿದ್ದಾರೆ ಎನ್ನುವ ವರದಿ ಬಹಿರಂಗವಾಗುತ್ತಿದ್ದಂತೇ, ಶೋಷಿತ ವರ್ಗಗಳ ಸಂಖ್ಯೆ ಹೆಚ್ಚಿರುವಾಗ ದಲಿತ ಸಮುದಾಯದವರು ಮುಖ್ಯಮಂತ್ರಿಯಾಗಬೇಕು ಎಂದು ಮುನಿಯಪ್ಪ ಒತ್ತಾಯಿಸಿದ್ದಾರೆ. ಮುನಿಯಪ್ಪ ಮಾತಿಗೆ ಪರಮೇಶ್ವರ ಕೂಡಾ ತಲೆದೂಗಿಸಿದ್ದಾರೆ.

ಮುನಿಯಪ್ಪ ಹೇಳಿದ್ದು
ಕಾಂಗ್ರೆಸ್ ನಿಂದ ಹೊರತಾಗಿ ಬೇರೆ ಯಾವ ಪಕ್ಷವೂ ದಲಿತರನ್ನು ಸಿಎಂ ಹುದ್ದೆಗೆ ನೇಮಿಸುವುದಿಲ್ಲ, ಅದು ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ. ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರ ಮಟ್ಟದಲ್ಲಿ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆಂದು ಮುನಿಯಪ್ಪ ಹೇಳಿದ್ದಾರೆ. ದಲಿತರು ರಾಜ್ಯದಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ ಎನ್ನುವ ವರದಿಯನ್ನು ಕಾಂಗ್ರೆಸ್ ಪಕ್ಷದ, ಸಚಿವ ಆಂಜನೇಯ ಸತ್ಯಕ್ಕೆ ದೂರವಾದ ವರದಿ ಎಂದಿದ್ದಾರೆ.

ಧ್ವನಿಗೂಡಿಸಿದ ಪರಮೇಶ್ವರ್
ಒಂದು ರಾಜ್ಯ ಅಭಿವೃದ್ದಿ ಹೊಂದಬೇಕಾದರೆ ಶೋಷಿತ ವರ್ಗದ ಕೈಯಲ್ಲಿ ಅಧಿಕಾರವಿರಬೇಕು. ಆಗ ಮಾತ್ರ ಅಭಿವೃದ್ದಿಯ ಕನಸು ನನಸಾಗಲು ಸಾಧ್ಯ ಎಂದು ಪರೋಕ್ಷವಾಗಿ ಪರಮೇಶ್ವರ್, ಮುನಿಯಪ್ಪ ಹೇಳಿಕೆಗೆ ತನ್ನ ಸಹಮತ ವ್ಯಕ್ತ ಪಡಿಸಿದ್ದಾರೆ.

ದಿಗ್ವಿಜಯ್ ಸಿಂಗ್ ಹಠಾವೋ
ದಿಗ್ವಿಜಯ್ ಸಿಂಗ್ ಪಕ್ಷ ಮತ್ತು ಸರ್ಕಾರಕ್ಕೆ ಮಾರ್ಗದರ್ಶನ ಮಾಡಿ ಸರಿ ದಿಕ್ಕಿನಲ್ಲಿ ಕೊಂಡೊಯ್ಯುವ ಕೆಲಸವನ್ನು ಮಾಡುತ್ತಿಲ್ಲ. ಇವರ ಮಾರ್ಗದರ್ಶನದಲ್ಲಿ ಪಕ್ಷ ಬೆಳೆಯಲು ಸಾಧ್ಯವಿಲ್ಲ. ಸರ್ಕಾರದ ಮತ್ತು ಸಚಿವರ ಕಾರ್ಯವೈಖರಿಯ ಬಗ್ಗೆ ವಿಮರ್ಶಿಸುವ ಕೆಲಸ ದಿಗ್ವಿಜಯ್ ಸಿಂಗ್ ಅವರಿಂದ ಆಗುತ್ತಿಲ್ಲ. ಅವರನ್ನು ಮೊದಲು ಉಸ್ತುವಾರಿ ಜವಾಬ್ದಾರಿಯಿಂದ ಕೆಳಗಿಳಿಸಬೇಕು ಎಂದು ವಿಶ್ವನಾಥ್, ಕೃಷ್ಣ ಅವರನ್ನು ಭೇಟಿಯಾದ ನಂತರ ಹೇಳಿದ್ದಾರೆ.

ಸಮಾನ ಮನಸ್ಕರಿಗೆ ಮೂಲ ಕಾಂಗ್ರೆಸ್ಸಿಗರ ಬೆಂಬಲ
ಇನ್ನೊಂದೆಡೆ ಸಮಾನ ಮನಸ್ಕ ಶಾಸಕರಿಗೆ ಮೂಲ ಕಾಂಗ್ರೆಸಿಗರು ಬೆಂಬಲ ನೀಡುತ್ತಿದ್ದಾರೆ ಎನ್ನುವ ಮಾತಿದೆ, ನಾಯಕತ್ವ ಬದಲಾವಣೆಯ ಕೂಗೂ ಒಳಗೊಳಗಿನಿಂದ ಹೆಚ್ಚುತ್ತಿದೆ. ಆದರೆ, ಸದ್ಯ ಹೈಕಮಾಂಡ್ ಇದಕ್ಕೆ ಸೊಪ್ಪು ಹಾಕದೇ ಇರುವ ಹಿನ್ನಲೆಯಲ್ಲಿ ಎಲ್ಲಾ ಚಟುವಟಿಕೆಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಆದರೆ, ಸಂಪುಟ ಸೇರುವ ಆಕಾಂಕ್ಷಿಗಳ ಚಟುವಟಿಕೆ ಮಾತ್ರ ಜೋರಾಗಿದೆ.

ವಿಶ್ವನಾಥ್ ಹೇಳಿದ್ದು
ಕೃಷ್ಣ ಭೇಟಿಯ ನಂತರ, ಸಿದ್ದು ಸರಕಾರ ಲೋವೇಟೇಜ್ ಸರಕಾರ. ಸಮರ್ಥರಿಗೆ ಸಂಪುಟದಲ್ಲಿ ಸ್ಥಾನ ಸಿಗಬೇಕು, ಇದು ಪಕ್ಷದ ಮತ್ತು ಸರಕಾರದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ವಿಶ್ವನಾಥ್ ಹೇಳುವ ಮೂಲಕ ಸಮಾನ ಮನಸ್ಕ ತಂಡದ ನಡೆಯನ್ನು ವಿಶ್ವನಾಥ್ ಸಮರ್ಥಿಸಿಕೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಮುಖ್ಯಮಂತ್ರಿಗಳಿಗೆ ಮುಂದಿನ ದಿನಗಳಲ್ಲಿ ಯಾವ ರೀತಿ ಎಫೆಕ್ಟ್ ಆಗಲಿದೆ ಎನ್ನುವುದು ಕಾದು ನೋಡಬೇಕು.












Click it and Unblock the Notifications