ಬುದ್ಧಿ ಜೀವಿಗಳಿಗೆ ಪೇಜಾವರ ಸ್ವಾಮಿ ಬಹಿರಂಗ ಸವಾಲ್!
ಉಡುಪಿ, ಜ 18: ಐತಿಹಾಸಿಕ ಉಡುಪಿ ಪೇಜಾವರ ಅಧೋಕ್ಷಜ ಮಠದ ವಿಶ್ವೇಶತೀರ್ಥ ಶ್ರೀಗಳ 'ಪಂಚಮ ಪರ್ಯಾಯ' ದ ಧಾರ್ಮಿಕ ವಿದಿವಿಧಾನ ಮತ್ತು ಪರ್ಯಾಯ ದರ್ಬಾರ್ ಸೋಮವಾರ (ಜ18) ಇಲ್ಲಿ ಸಂಪನ್ನವಾಯಿತು.
ಸರ್ವಜ್ಞ ಪೀಠವನ್ನೇರಿದ ನಂತರ ಆನಂದತೀರ್ಥ ಮಂಟಪದಲ್ಲಿ ನಡೆದ ದರ್ಬಾರಿನಲ್ಲಿ ಅನುಗ್ರಹ ಸಂದೇಶ ನೀಡುತ್ತಾ ಮಾತನಾಡಿದ ಪೇಜಾವರ ಶ್ರೀಗಳು, ಯಾವುದೇ ಸಾಕ್ಷ್ಯಾಧಾರವಿಲ್ಲದೇ ಆಚಾರ್ಯ ಮಧ್ವರ ಬಗ್ಗೆ ಮಾತನಾಡಿದ ಕೆಲವರು ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. (ಪೇಜಾವರ ಶ್ರೀಗಳ ಪಂಚಮ ಪರ್ಯಾಯ ಹೈಲೆಟ್ಸ್)
ನಾವು ಎಷ್ಟು ಹೇಳಿದರೂ ಮತ್ತೆ ಮತ್ತೆ ಕೆಲವರು ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಲೇ ಬರುತ್ತಿದ್ದಾರೆ. ಮುಕ್ತಿ ಮಾರ್ಗದ ಬಗ್ಗೆ ಆಚಾರ್ಯ ಮಧ್ವರು ಜಾತಿಯ ವಿಚಾರವನ್ನು ಎಲ್ಲೂ ಎತ್ತಲಿಲ್ಲ. ಆದರೂ ಮಧ್ವಾಚಾರ್ಯರು ಹೇಳಿದ್ದಾರೆಂದು ಮಿಥ್ಯಾರೋಪ ಮಾಡುತ್ತಿದ್ದಾರೆ.
ಜಾತಿ, ಕುಲವನ್ನು ಆಧರಿಸಿ ಮನುಷ್ಯನಿಗೆ ಮೋಕ್ಷ ಸಿಗುತ್ತದೆ ಎಂದು ಮಧ್ವಾಚಾರ್ಯರು ಎಲ್ಲೂ ಉಲ್ಲೇಖಿಸಲಿಲ್ಲ, ಆದರೂ ಕೆಲವರು ವೃಥಾ ಆರೋಪ ಮಾಡುತ್ತಿದ್ದಾರೆ. ಬ್ರಾಹ್ಮಣರು, ದಲಿತರು ಎಲ್ಲರೂ ಮೋಕ್ಷಕ್ಕೆ ಅರ್ಹರಾಗಿದ್ದಾರೆ. ದಲಿತರು ಮೋಕ್ಷಕ್ಕೆ ಅರ್ಹರಲ್ಲ ಎಂದು ಮಧ್ವಾಚಾರ್ಯರು ಎಲ್ಲೂ ಹೇಳಿಲ್ಲ. (ಪರ್ಯಾಯ ಗ್ಯಾಲರಿ)
ನಾವು ಅಹಂಕಾರವನ್ನು ತೊರೆಯಬೇಕು. ಕೆಲವರು ಪೂರ್ವಗ್ರಹಪೀಡಿತರಾಗಿ ಮಧ್ವಾಚಾರ್ಯರ ಸಂದೇಶಗಳನ್ನು ಟೀಕಿಸುತ್ತಾರೆ. ಇಂತಹ ವಿಕೃತ ವಾದಗಳನ್ನು ಒಪ್ಪಲು ಸಾಧ್ಯವಿಲ್ಲ. ದೇವರ ಕುರಿತಾದ ಸಂಪೂರ್ಣ ತಿಳುವಳಿಕೆ ಮತ್ತು ಭಕ್ತಿ ಮೋಕ್ಷಕ್ಕೆ ಮಾರ್ಗ ಎಂದು ಪೇಜಾವರ ಶ್ರೀಗಳು ಪ್ರತಿಪಾದಿಸಿದರು.
ಮಧ್ವಾಚಾರ್ಯರು ಹೇಳಿದ್ದಾರೆ ಎನ್ನುವುದಕ್ಕೆ ನಿಮ್ಮಲ್ಲಿ ದಾಖಲೆ ಇದ್ದಲ್ಲಿ ತೆಗೆದುಕೊಂಡು ಬನ್ನಿ ಎಂದು ಹಿಂದೊಮ್ಮೆ ಹೇಳಿದ್ದೆ, ಈ ಪರ್ಯಾಯ ದರ್ಬಾರಿನಲ್ಲೂ ಅದನ್ನೇ ಹೇಳುತ್ತಿದ್ದೇನೆ. ನಿಮ್ಮಲ್ಲಿ ಪುರಾವೆ ಇಲ್ಲದಿದ್ದರೆ ಮಧ್ವಾಚಾರ್ಯರ ಕ್ಷಮೆಯಾಚಿಸಿ ಎಂದು ಪರೋಕ್ಷವಾಗಿ ಬುದ್ದಿಜೀವಿಗಳಿಗೆ (ಹೆಸರು ಉಲ್ಲೇಖಿಸದೇ ಕೆ ಎಸ್ ಭಗವಾನ್) ಸವಾಲು ಹಾಕಿದರು.
ಪರ್ಯಾಯ ದರ್ಬಾರಿನಲ್ಲಿ ಅಡ್ವಾಣಿ, ಸಿ ಎಂ ಇಬ್ರಾಹಿಂ ಸಂಸ್ಕೃತ ಶ್ಲೋಕ, ಮುಂದೆ ಓದಿ..
ಪರ್ಯಾಯ ಮೆರವಣಿಗೆ ಸಂಪ್ರದಾಯ ಮುರಿಯದ ಶ್ರೀಗಳು
ಪೇಜಾವರ, ಕೃಷ್ಣಾಪುರ ಮತ್ತು ಪೇಜಾವರ ಕಿರಿಯ ಶ್ರೀಗಳು ಟ್ಯಾಬ್ಲೋದಲಿಟ್ಟ ಪಲ್ಲಕ್ಕಿಯಲ್ಲಿ ಕುಳಿತರೆ, ಈ ಬಾರಿಯೂ ಶಿರೂರು ಶ್ರೀಗಳು ಪಲ್ಲಕ್ಕಿಯಲ್ಲಿ ಗಣಪತಿಯನ್ನು ಇಟ್ಟು, ತಾನು ಸಿಂಹಾಸನದ ಮೇಲೆ ಕುಳಿತು ಮೆರವಣಿಗೆಯಲ್ಲಿ ಪಾಲ್ಗೊಂಡರು. ಆದರೆ ಸೋದೆ ಮತ್ತು ಅದಮಾರು ಶ್ರೀಗಳು ಮಾನವ ಹೊರುವ ಪಲ್ಲಕ್ಕಿಯನ್ನೇ ಏರಿ ಸಂಪ್ರದಾಯ ಮುರಿಯಲು ಬಯಸಲಿಲ್ಲ.
ಎ ಮಂಜು
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರಾಜ್ಯ ಪಶುಸಂಗೋಪನಾ ಸಚಿವ ಎ ಮಂಜು, ಪೇಜಾವರ ಮಠದ ಆಡಳಿತವಿರುವ ನೀಲಾವರ ಗೋಶಾಲೆಗೆ ಸರಕಾರದ ವತಿಯಿಂದ 34 ಲಕ್ಷ ರೂಪಾಯಿ ದೇಣಿಗೆಯನ್ನು ನೀಡಿದರು.
ಚಂದ್ರಬಾಬು ನಾಯ್ಡು
ಉಡುಪಿಯ ಪರ್ಯಾಯ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಕ್ಕೆ ಸಮಿತಿಗೆ ನಾನು ಆಭಾರಿಯಾಗಿದ್ದೇನೆ. ಅದರಲ್ಲೂ ಪರ್ಯಾಯ ಶ್ರೀಗಳ ಪಂಚಮ ಪರ್ಯಾಯಕ್ಕೆ ನಾನು ಸಾಕ್ಷಿಯಾಗಿದ್ದು ನನ್ನ ಪುಣ್ಯ. ಶ್ರೀಗಳ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ಹೇಳಿದರು. ತಿರುಪತಿ ದೇವಾಲಯದಿಂದ ಬಂದಿದ್ದ ಅರ್ಚಕರು ಪರ್ಯಾಯ ವೇದಿಕೆಯಲ್ಲಿ ಪೇಜಾವರ ಶ್ರೀಗಳಿಗೆ ಸನ್ಮಾನ ಮಾಡಿದರು.
ಎಲ್ ಕೆ ಅಡ್ವಾಣಿ
ಹಿರಿಯ ಮುಖಂಡ ಅಡ್ವಾಣಿ ಮಾತನಾಡುತ್ತಾ, ನನ್ನ ಮತ್ತು ಶ್ರೀಗಳ ನಡುವೆ ಎಮರ್ಜೆನ್ಸಿ ಕಾಲದಿಂದಲೂ ಉತ್ತಮ ಸಂಬಂಧವಿದೆ. ಉಡುಪಿ ನನ್ನ ಅತ್ಯಂತ ಪ್ರೀತಿಯ ನಗರ, ನಮ್ಮ ಪಕ್ಷ ದಕ್ಷಿಣಭಾರತದಲ್ಲಿ ಖಾತೆ ತೆರೆದಿದ್ದೂ ಉಡುಪಿಯಲ್ಲೇ, ಶ್ರೀಗಳ ಪರ್ಯಾಯ ಯಶಸ್ವಿಯಾಗಲಿ, ಅವರು ತಮ್ಮ ಆರನೇ ಪರ್ಯಾಯವನ್ನೂ ನೆರವೇರಿಸುವಂತಾಗಲಿ ಎಂದು ಅಡ್ವಾಣಿ ಹೇಳಿದರು.
ಯಡಿಯೂರಪ್ಪ
ಶ್ರೀಗಳ ಐದನೇ ಪರ್ಯಾಯದಲ್ಲಿ ನಾನು ಭಾಗಿಯಾಗಿದ್ದು ನನ್ನ ಪೂರ್ವ ಜನ್ಮದ ಪುಣ್ಯದ ಫಲ. ಈ ಸಂದರ್ಭದಲ್ಲಿ ದಿವಂಗತ ವಿ ಎಸ್ ಆಚಾರ್ಯ ಅವರನ್ನು ನೆನಪಿಸಿಕೊಳ್ಳಲೇ ಬೇಕು. ಅವರು ಮತ್ತು ಶ್ರೀಗಳ ಅನುಗ್ರಹದಿಂದ ನನ್ನ ಅವಧಿಯಲ್ಲಿ ಉಡುಪಿ ರಸ್ತೆಗಳು ಉತ್ತಮವಾದವು ಎಂದು ಶಿವಮೊಗ್ಗ ಸಂಸದ ಯಡಿಯೂರಪ್ಪ ಪರ್ಯಾಯ ಸಭೆಯಲ್ಲಿ ಹೇಳಿದರು.
ಸಿ ಎಂ ಇಬ್ರಾಹಿಂ
ಪೇಜಾವರ ಶ್ರೀಗಳ ಮನವಿಯಂತೆ ಭಾಷಣ ಮಾಡಿದ ಸಿ ಎಂ ಇಬ್ರಾಹಿಂ, ಮಧ್ಯೆ ಮಧ್ಯೆ ಸಂಸ್ಕೃತ ಶ್ಲೋಕಗಳನ್ನು ಉಲ್ಲೇಖಿಸಿ, ಪೇಜಾವರ ಶ್ರೀಗಳ ಕಾರ್ಯಶೈಲಿಯನ್ನು ಕೊಂಡಾಡಿದರು. ನಾಡಿನಲ್ಲಿ ಇಬ್ಬರು ನಡೆದಾಡುವ ದೇವರುಗಳಿದ್ದಾರೆ ಒಂದು ಸಿದ್ದಗಂಗಾ ಶ್ರೀಗಳು ಇನ್ನೊಂದು ಪೇಜಾವರ ಶ್ರೀಗಳೆಂದು ಇಬ್ರಾಹಿಂ ಪೇಜಾವರ ಶ್ರೀಗಳನ್ನು ಹೊಗಳಿದರು.
ಉಮಾಭಾರತಿ
ನಿನ್ನೆಯಿಂದ ಗುರುಗಳ ಕಾರ್ಯ ಒತ್ತಡವನ್ನು ನೋಡಿದ್ದೇನೆ. ನಿನ್ನೆ ನಿದ್ದೆ ಮತ್ತು ಊಟ ಮಾಡಿಲ್ಲ, ನನಗೆ ಅವರ ಆರೋಗ್ಯದ ಬಗ್ಗೆ ಚಿಂತೆ. ನನಗೆ ಅವರು ಗುರುಗಳಾಗಿ ಸಿಕ್ಕಿದ್ದು ನನ್ನ ಭಾಗ್ಯ. ಅವರು ನನ್ನ ತಂದೆ ತಾಯಿಗಿಂತ ಮಿಗಿಲಾದವರು ಎಂದು ಕೇಂದ್ರ ಸಚಿವೆ ಉಮಾಭಾರತಿ ಹೇಳಿದರು.
ಕಾರ್ಯಕ್ರಮದಲ್ಲಿದ್ದ ಗಣ್ಯರು
ಯು ಟಿ ಖಾದರ್, ಮನೋಹರ್ ತಹಸೀಲ್ದಾರ್, ಪನ್ನೀರ್ ಸೆಲ್ವಂ, ವೀರೇಂದ್ರ ಹೆಗ್ಗಡೆ, ಆಂಜನೇಯ, ಎಚ್ ಕೆ ಪಾಟೀಲ್, ಆರ್ ವಿ ದೇಶಪಾಂಡೆ, ಅಭಯಚಂದ್ರ ಜೈನ್, ವಿನಯ್ ಕುಮಾರ್ ಸೊರಕೆ, ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಅನಂತಕುಮಾರ್ ದಂಪತಿ, ಸದಾನಂದ ಗೌಡ, ಯಡಿಯೂರಪ್ಪ, ಸಿ ಟಿ ರವಿ, ಈಶ್ವರಪ್ಪ, ಪ್ರಲ್ಹಾದ್ ಜೋಶಿ, ಡಿ ಎಚ್ ಶಂಕರಮೂರ್ತಿ, ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ ಮುಂತಾದವರು ವೇದಿಕೆಯಲ್ಲಿ ಹಾಜರಾಗಿದ್ದರು.