ಬಿಜೆಪಿ ಸರ್ಕಾರದ ಹಗರಣಗಳ ತನಿಖೆಯ ಹಿಂದಿದೆ ಕಾಂಗ್ರೆಸ್ಸಿನ ಭಾರೀ ಲೆಕ್ಕಾಚಾರ?
ಚುನಾವಣೆಯನ್ನು ಗೆದ್ದಿರುವ ಕಾಂಗ್ರೆಸ್ಸಿಗೆ ಮುಂದಿನ ಟಾರ್ಗೆಟ್ 2023ರಲ್ಲಿ ನಡೆಯಬೇಕಿರುವ ಲೋಕಸಭಾ ಚುನಾವಣೆ. ಉಪ ಮುಖ್ಯಮಂತ್ರಿ ಜೊತೆಗೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ.ಶಿವಕುಮಾರ್ ಅವರು, ಸಿಎಂ ಹುದ್ದೆಗೆ ಇದ್ದ ಪೈಪೋಟಿಯ ವೇಳೆ ಈ ಬಗ್ಗೆ ಮುಂದಿನ ಗುರಿಯ ಬಗ್ಗೆ ಸ್ಪಷ್ಟವಾಗಿ ಹೇಳಿದ್ದರು. 2019ರ ಚುನಾವಣೆಯಲ್ಲಿ ಕಾಂಗ್ರೆಸ್ ಕೇವಲ ಒಂದು ಸ್ಥಾನವನ್ನು ಗೆಲ್ಲಲು ಶಕ್ತವಾಗಿತ್ತು.
ಈಗಾಗಲೇ ಬೊಮ್ಮಾಯಿ ಸರಕಾರದಲ್ಲಿ ಅನುಮೋದನೆ ಪಡೆದುಕೊಂಡಿರುವ ಕಾಮಗಾರಿಗಳಿಗೆ ಬ್ರೇಕ್ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣಗಳ ತನಿಖೆಗೆ ಮುಂದಾಗುವ ಸಾಧ್ಯತೆಯಿದೆ. ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿರುವ ಪ್ರಿಯಾಂಕ್ ಖರ್ಗೆಯವರು ಬಿಟ್ ಕಾಯಿನ್ ಹಗರಣವನ್ನು ತನಿಖೆ ನಡೆಸುವುದಾಗಿ ಹೇಳಿದ್ದಾರೆ.

ಗೆದ್ದ ಸಂಭ್ರಮದಲ್ಲಿರುವ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಉತ್ಸಾಹ ಮತ್ತು ಹುರುಪನ್ನು ಕಾಂಗ್ರೆಸ್ ಹೈಕಮಾಂಡ್ ಮುಂದುವರಿಸಿಕೊಂಡು ಹೋಗಲು ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಗಂಭೀರವಾಗಿ ಚರ್ಚಿಸುತ್ತಿದೆ. ಐದು ಗ್ಯಾರಂಟಿಯ ವಿಚಾರದಲ್ಲಿ ಬಿಜೆಪಿ ಮತ್ತು ಎಚ್.ಡಿ.ಕುಮಾರಸ್ವಾಮಿ ಈಗಾಗಲೇ ಕೌಂಟರ್ ನೀಡಲು ಆರಂಭಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಕೂಡಾ ಹಿಂದೆ ಬಿದ್ದಿಲ್ಲ.
ಹಿಂದಿನ ಸರ್ಕಾರದ ಹಗರಣಗಳನ್ನು ತನಿಖೆ ನಡೆಸಿದರೆ, ಒಂದು ಬಿಜೆಪಿಯನ್ನು ಕಟ್ಟಿಹಾಕಿದಂತಾಗುತ್ತದೆ. ಇನ್ನೊಂದು, ಮುಂಬರುವ ಲೋಕಸಭಾ ಚುನಾವಣೆಯ ದೃಷ್ಟಿಯಿಂದ ರಾಜಕೀಯ ಲಾಭವನ್ನೂ ಪಡೆಯಬಹುದಾಗಿದೆ ಎನ್ನುವುದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ (CLP Meeting)
ಕೈ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ನಲವತ್ತು ಪರ್ಸೆಂಟ್, ಪೇಸಿಎಂ ಮುಂತಾದ ಕಾಂಗ್ರೆಸ್ ನಡೆ
ಬಿಜೆಪಿ ಮತ್ತೆ ಅಧಿಕಾರಕ್ಕೆ ಬರದಂತೆ ತಡೆಯಲು ನಲವತ್ತು ಪರ್ಸೆಂಟ್, ಪೇಸಿಎಂ ಮುಂತಾದ ಕಾಂಗ್ರೆಸ್ ಅಭಿಯಾನಗಳು ಚುನಾವಣೆಯಲ್ಲಿ ಉತ್ತಮ ರೀತಿಯಲ್ಲಿ ವರ್ಕೌಟ್ ಆಗಿದ್ದವು. ಈ ಎರಡು ವಿಷಯಗಳು ಜನರ ಮನಸ್ಸು ಮುಟ್ಟುವಲ್ಲೂ ಯಶಸ್ವಿಯಾಗಿತ್ತು. ಇಂತಹ ವಿಚಾರಗಳನ್ನೇ ಮುಂದಿನ ಚುನಾವಣೆಯವರೆಗೆ ಜೀವಂತವಾಗಿರಿಸಿದರೆ ಜನರಿಗೂ ಕಾಂಗ್ರೆಸ್ ಬಗ್ಗೆ ಉತ್ತಮ ಅಭಿಪ್ರಾಯ ಬರುತ್ತದೆ. ಜೊತೆಗೆ, ಬಿಜೆಪಿಯನ್ನು ಹಿಮ್ಮೆಟ್ಟಿಸುವಲ್ಲಿ ಇದು ಒಂದು ಅಂಶವಾಗಬಹುದು ಎನ್ನುವ ಲೆಕ್ಕಾಚಾರವನ್ನು ಕಾಂಗ್ರೆಸ್ ಹಿರಿಯ ನಾಯಕರು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಕೇಂದ್ರದಲ್ಲಿ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ
ಕೇಂದ್ರದಲ್ಲಿ ಮತ್ತು ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟದ ಸರಕಾರ ಅಧಿಕಾರಕ್ಕೆ ಬರಲು ಕರ್ನಾಟಕದ ಕೊಡುಗೆ ಕೂಡಾ ಬಹಳ ಮುಖ್ಯವಾದದ್ದು. 28 ಕ್ಷೇತ್ರಗಳ ಪೈಕಿ ಬಿಜೆಪಿ 25ಸ್ಥಾನದಲ್ಲಿ ಗೆಲುವನ್ನು ಕಂಡಿತ್ತು. ದಕ್ಷಿಣ ಭಾರತದಿಂದ ಬಿಜೆಪಿಯ ಕೇಂದ್ರ ನಾಯಕರಿಗೆ ಇರುವ ಭರವಸೆ ಅಂದರೆ ಅದು ಕರ್ನಾಟಕ ಮಾತ್ರ. ಮೋದಿ ಜನಪ್ರಿಯತೆಯನ್ನು ಉಳಿಸಿಕೊಳ್ಳುವತ್ತ ಬಿಜೆಪಿ ಹೆಜ್ಜೆಯಿಟ್ಟರೆ, ಕಾಂಗ್ರೆಸ್ ಹಿಂದಿನ ಸರ್ಕಾರದ ಹಗರಣಗಳನ್ನು ಮುಂದಿನ ಚುನಾವಣೆಯ ವರೆಗೆ ಹಂತ ಹಂತವಾಗಿ ಮುನ್ನಲೆಗೆ ತರಲು ಯೋಜನೆ ರೂಪಿಸುತ್ತಿದೆ ಎನ್ನುವ ಸುದ್ದಿಯಿದೆ.

135ಸ್ಥಾನವನ್ನು ಗೆದ್ದಿರುವ ಕಾಂಗ್ರೆಸ್
135ಸ್ಥಾನವನ್ನು ಗೆದ್ದಿರುವ ಕಾಂಗ್ರೆಸ್ ಇದೇ ಹುಮ್ಮಸ್ಸಿನಲ್ಲಿ ಲೋಕಸಭಾ ಚುನಾವಣೆಗೂ ಸಜ್ಜಾಗಲು ಕಟಿಬದ್ದವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಸಿಎಂ ಸಿದ್ದರಾಮಯ್ಯನವರಿಗೆ ಗುರುತರ ಜವಾಬ್ದಾರಿಯನ್ನು ಹೈಕಮಾಂಡ್ ಈಗಾಗಲೇ ನೀಡಿದೆ. ಹಾಗಾಗಿ, ಉತ್ತಮ ಆಡಳಿತ ನೀಡುವುದು ಒಂದು ಕಡೆಯಾದರೆ, ಬಿಜೆಪಿ ವಿರುದ್ದದ ಜನಾಭಿಪ್ರಾಯವನ್ನು ಕಾಯ್ದಿರಿಸಿಕೊಳ್ಳಲು ಕಾಂಗ್ರೆಸ್ ಗಂಭೀರ ಚಿಂತನೆ ನಡೆಸಿದೆ. ಈ ಅಭಿಪ್ರಾಯ ಶಾಸಕರಿಂದಲೂ ವ್ಯಕ್ತವಾಗಿದೆ.
ಕೊರೊನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಖರೀದಿ
ಕೊರೊನಾ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಖರೀದಿ, ಪಿಎಸ್ಐ, ಪ್ರಾಧ್ಯಾಪಕ ಹುದ್ದೆಗಳ ನೇಮಕಾತಿ, ಜಲ ಸಂಪನ್ಮೂಲ, ಕಾರ್ಮಿಕ , ಕೃಷಿ ಮುಂತಾದ ಇಲಾಖೆಗಳಲ್ಲಿ ನಡೆದಿದೆ ಎನ್ನಲಾಗುತ್ತಿರುವ ಹಗರಣಗಳನ್ನು ತನಿಖೆಗೆ ಒಪ್ಪಿಸಿದರೆ, ಜನ ಸಾಮಾನ್ಯರಿಗೂ ಕಾಂಗ್ರೆಸ್ಸಿನ ಮೇಲೆ ಉತ್ತಮ ಅಭಿಪ್ರಾಯ ಮೂಡುತ್ತದೆ ಎನ್ನುವ ಲೆಕ್ಕಾಚಾರ ಕಾಂಗ್ರೆಸ್ಸಿನದ್ದು. ಹಾಗಾಗಿ, ಬಿಜೆಪಿ ಸರ್ಕಾರದ ಎಲ್ಲಾ ಕಾಮಗಾರಿಗಳು ತನಿಖೆಗೆ ಒಳಪಡುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗುತ್ತಿದೆ.












Click it and Unblock the Notifications