ರೌಡಿ ಶೀಟರ್ ಗೆ ಬಿಜೆಪಿ ಮಣೆ ಎಂದು ಕಾಂಗ್ರೆಸ್ ಕಿಡಿ: ಕೆಲವೇ ಗಂಟೆಗಳಲ್ಲಿ ಸೈಲೆಂಟ್ ಸುನೀಲ್ ಸದಸ್ಯತ್ವ ರದ್ದು ಪಡಿಸಿದ ಬಿಜೆಪಿ
ರೌಡಿಶೀಟರ್ ಸೈಲೆಂಟ್ ಸುನೀಲನ ಸದಸ್ಯತ್ವವನ್ನು ಕೆಲವೇ ಗಂಟೆಗಳಲ್ಲಿ ಬಿಜೆಪಿ ರದ್ದು ಮಾಡಿದೆ.
ಬೆಂಗಳೂರು, ಮಾರ್ಚ್ 18: ರಾಜ್ಯ ಚುನಾವಣೆ ಹೊತ್ತಲಿ ರಾಜಕೀಯಕ್ಕೆ ರೌಡಿ ಶೀಟರ್ ಗಳು ಎಂಟ್ರಿಯಾಗುತ್ತಿದ್ದಾರೆ ಎಂದು ಕಾಂಗ್ರೆಸ್ ಈಗಾಗಲೇ ಸಾಕಷ್ಟು ಬಾರೀ ಆರೋಪ ಮಾಡಿತ್ತು. ಆದರೆ ಈ ಆರೋಪವನ್ನ ಬಿಜೆಪಿ ತಳ್ಳಿ ಹಾಕಿತ್ತು.
ಸೈಲೆಂಟ್ ಸುನೀಲನ ಜೊತೆ ಬಿಜೆಪಿ ನಾಯಕರಾದ ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಉದಯ್ ಗರುಡಾಚಾರ್, ಬೆಂಗಳೂರು ಕೇಂದ್ರ ಹಾಗು ದಕ್ಷಿಣ ಕ್ಷೇತ್ರದ ಸಂಸದರಾದ ಪಿ.ಸಿ.ಮೋಹನ್ ಮತ್ತು ತೇಜಸ್ವಿ ಸೂರ್ಯ ಅವರು ಪೋಸ್ ಕೊಟ್ಟದ್ದರು. ಈ ಮೂವರು ನಾಯಕರು ಸೈಲೆಂಟ್ ಸುನೀಲನ ಜೊತೆಗೆ ವೇದಿಕೆ ಹಂಚಿಕೊಂಡು ಕೊಂಡಿರುವುದನ್ನ ಟೀಕಿಸಿ, ಕಾಂಗ್ರೆಸ್ ಸೈಲೆಂಟ್ ಸುಲೀಲ್ ನ ಫೋಟೋವನ್ನ ಹಂಚಿಕೊಂಡಿತ್ತು.

ಸೈಲೆಂಟ್ ಸುನೀಲ ಪಕ್ಷ ಸೇರುತ್ತಿರುವ ಬಗ್ಗೆ ಬಿಜೆಪಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ರೌಡಿ ಮೋರ್ಚಾ ತೆರೆಯುವುತ್ತಿದ್ದಾರೆ ಎಂಬಿತ್ಯಾದಿ ಟೀಕೆಗಳನ್ನು ಕಾಂಗ್ರೆಸ್ ಹಾಗೂ ಜೆಡಿಎಸ್ ಮಾಡಿದ್ದು, ಮಿಸ್ಡ್ಕಾಲ್ ಕೊಟ್ಟು ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದ ರೌಡಿಶೀಟರ್ ಸೈಲೆಂಟ್ ಸುನೀಲನ ಸದಸ್ಯತ್ವವನ್ನು ಕೆಲವೇ ಗಂಟೆಗಳಲ್ಲಿ ಬಿಜೆಪಿ ರದ್ದು ಮಾಡಲಾಗಿದೆ.
ರೌಡಿಶೀಟರ್ ಸೈಲೆಂಟ್ ಸುನೀಲ ಬಿಜೆಪಿ ಸದಸ್ಯತ್ವ ಪಡೆದು ಸಂಭ್ರಮಿಸುತ್ತಿದ್ದ ವಿಚಾರದ ಬೆಳಕಿಗೆ ಬರುತ್ತಿದ್ದಂತೆ, ಬಿಜೆಪಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದ್ದು, ಕೆಲವೇ ಗಂಟೆಗಳಲ್ಲಿ ಸದಸ್ಯತ್ವ ರದ್ದುಪಡಿಸಿದೆ.
ಪತ್ರಿಕಾ ಪ್ರಕಟಣೆ ಮೂಲಕ ಸೈಲೆಂಟ್ ಸುನೀಲ ಬಿಜೆಪಿ ಸದಸ್ಯತ್ವ ರದ್ದು
ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಸದಸ್ಯತಾ ಅಭಿಯಾನದ ಸಮಯದಲ್ಲಿ ಅಥವಾ ಮಿಸ್ ಕಾಲ್ ಮೂಲಕ ಸೈಲೆಂಟ್ ಸುನಿಲ್' ಎಂಬುವವರು ಬಿಜೆಪಿ ಸದಸ್ಯತ್ವ ಪಡೆದಿರಬಹುದು. ನಮ್ಮ ರಾಜ್ಯಾಧ್ಯಕ್ಷರು ಈ ಹಿಂದೆಯೇ ಈ ತರಹದ ಹಿನ್ನೆಲೆಯವರ ಪಕ್ಷ ಸೇರ್ಪಡೆ ಮಾಡಿಕೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದ್ದು, ಸೈಲೆಂಟ್ ಸುನಿಲ್ ಎಂಬುವವರ ಸದಸ್ಯತ್ವವನ್ನು ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ಮೂಲಕ ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷರಾದ ಶ್ರೀ ಮಂಜುನಾಥ್ ರವರು ತಿಳಿಯಪಡಿಸಿದ್ದಾರೆ.

ಸೈಲೆಂಟ್ ಸುನಿಲ್ ಮತ್ತು ಪಕ್ಷಕ್ಕೆ ಸಂಬಂಧವಿಲ್ಲ: ಅಶ್ವತ್ಥನಾರಾಯಣ್
ಸೈಲೆಂಟ್ ಸುನಿಲ್ ಮತ್ತು ಬಿಜೆಪಿಗೆ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥನಾರಾಯಣ್ ಅವರು ತಿಳಿಸಿದ್ದಾರೆ. ಸೈಲೆಂಟ್ ಸುನಿಲ್, ಬಿಜೆಪಿ ಸದಸ್ಯತ್ವ ಪಡೆದಿದ್ದರೆ ಅದನ್ನು ರದ್ದು ಮಾಡಲಾಗಿದ್ದು, ಅವರು ಪಾರ್ಟಿ ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದರೆ, ಅದಕ್ಕೂ ನಮಗೂ ಸಂಬಂಧವಿಲ್ಲ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ ಸೈಲೆಂಟ್ ಸುನಿಲ್ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ ಎಂದು ತಿಳಿಸಿದ್ದರು. ಸೈಲೆಂಟ್ ಸುನಿಲ್ ನನ್ನು ಯಾವುದೇ ಕಾರಣಕ್ಕೆ ಪಕ್ಷಕ್ಕೆ ಸೇರಿಸುವುದಿಲ್ಲ. ಪಕ್ಷದ ಪ್ರಮುಖರು ಮುಂದಿನ ದಿನಗಳಲ್ಲಿ ಇಂಥ ಘಟನೆಗಳು ಆಗದಂತೆ ನೋಡಿಕೊಳ್ಳಬೇಕು. ಎಲ್ಲ ವಿಚಾರಗಳನ್ನು ಪಕ್ಷದ ಗಮನಕ್ಕೆ ತರಬೇಕು ಎಂದು ಅವರು ಸೂಚಿಸಿದ್ದಾರೆ.
ಬಿಜೆಪಿ, ವ್ಯಕ್ತಿಗಳ ನಿರ್ಮಾಣದ ಮೂಲಕ ದೇಶ ನಿರ್ಮಾಣದ ಕಾರ್ಯ ಮಾಡುತ್ತಿದೆ. ಉಗ್ರಗಾಮಿಗಳು, ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ ಕೊಡುವವರು ಮತ್ತು ಅಪರಾಧ ಹಿನ್ನೆಲೆ ಉಳ್ಳವರನ್ನು ಪಕ್ಷ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ನಳಿನ್ಕುಮಾರ್ ಕಟೀಲ್ ಹೇಳಿದ್ರೂ ಆದರೆ, ಇದೀಗ ಬಿಜೆಪಿ ನಾಯಕರ ಜೊತೆಗೆ ಸೈಲೆಂಟ್ ಸುನೀಲ್ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಬಿಜೆಪಿ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.












Click it and Unblock the Notifications