ಗುಲ್ಬರ್ಗದಲ್ಲಿ ಭೀಕರ ಅಪಘಾತ, 13 ಸಾವು
ಗುಲ್ಬರ್ಗ, ಜೂನ್ 2 : ಆಳಂದ ತಾಲೂಕಿನ ಕೋರಹಳ್ಳಿ ಕ್ರಾಸ್ ಬಳಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 13 ಮಂದಿ ಮೃತಪಟ್ಟಿದ್ದು, 14 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತರೆಲ್ಲರೂ ಮಹಾರಾಷ್ಟ್ರ ಮೂಲದವರಾಗಿದ್ದು ಬಂದೇನವಾಜ್ ದರ್ಗಾಕ್ಕೆ ಆಗಮಿಸುತ್ತಿದ್ದರು ಎಂದು ತಿಳಿದುಬಂದಿದೆ.
ಸೋಮವಾರ ಮುಂಜಾನೆ 4.30ರ ಸುಮಾರಿಗೆ ಮ್ಯಾಕ್ಸಿಕ್ಯಾಬ್ ಮತ್ತು ಕೆಎಸ್ಆರ್ ಟಿಸಿ ಬಸ್ಸಿನ ನಡುವೆ ಈ ಅಪಘಾತ ಸಂಭವಿಸಿದೆ. ಅಪಘಾತದಿಂದಾಗಿ ಮ್ಯಾಕ್ಸಿಕ್ಯಾಬ್ ನಲ್ಲಿದ್ದ 11 ಜನರು ಸ್ಥಳದಲ್ಲೇ ಸಾವನ್ನಪ್ಪಿದರೆ, ಉಳಿದ ಇಬ್ಬರು ಗುಲ್ಬರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಹೇಳಿದ್ದಾರೆ.

ಅಪಘಾತದಲ್ಲಿ 14 ಜನರು ಗಾಯಗೊಂಡಿದ್ದು, ಅವರಲ್ಲಿ 6 ಜನರ ಸ್ಥಿತಿ ಚಿಂತಾಜನಕವಾಗಿದೆ. ಮೃತರೆಲ್ಲರೂ ಸೊಲ್ಲಾಪುರದ ಅಗಲಕೋಟೆ ಕಡವಾಳ ಗ್ರಾಮದವರಾಗಿದ್ದು, ಬಂದೇ ನವಾಜ್ ದರ್ಗಾಕ್ಕೆ ಆಗಮಿಸುತ್ತಿದ್ದರು ಎಂದು ತಿಳಿದುಬಂದಿದೆ. ಮೃತರ ಗುರುತು ಇನ್ನೂ ಪತ್ತೆಯಾಗಿಲ್ಲ. [ಪಿಟಿಐ ಚಿತ್ರ]
ದರ್ಗಾಕ್ಕೆ ಆಗಮಿಸುತ್ತಿದ್ದರು : ಕಡಿವಾಳ ಗ್ರಾಮದ ಇಡೀ ಕುಟುಂಬ ಬಂದೇ ನವಾಜ್ ದರ್ಗಾಕ್ಕೆ ಭೇಟಿ ನೀಡಲು ಭಾನುವಾರ ರಾತ್ರಿ ಮ್ಯಾಕ್ಸಿಕ್ಯಾಬ್ ಬಾಡಿಗೆಗೆ ಪಡೆದು ಹೊರಟಿದ್ದರು. ಮುಂಜಾನೆ ವೇಳೆಗೆ ಕೆಎಸ್ಆರ್ ಟಿಸಿ ಬಸ್ ಮತ್ತು ಮ್ಯಾಕ್ಸಿ ಕ್ಯಾಬ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 13 ಜನರು ಸಾವನ್ನಪ್ಪಿದ್ದಾರೆ.
ವೇಗವಾಗಿ ಚಲಿಸುತ್ತಿದ್ದ ಮ್ಯಾಕ್ಸಿಕ್ಯಾಬ್ ಬಸ್ಸಿಗೆ ಡಿಕ್ಕಿ ಹೊಡೆದ ನಂತರ ಪಲ್ಟಿ ಹೊಡೆದಿದ್ದರಿಂದ ಸಾವಿನ ಸಂಖ್ಯೆ ಹೆಚ್ಚಾಗಿದೆ. ಮಾರ್ಗದಲ್ಲಿ ವಾಹನ ಸಂಚಾರವೂ ವಿರಳವಾಗಿದ್ದ ಕಾರಣ ಮ್ಯಾಕ್ಸಿಕ್ಯಾಬ್ ನಲ್ಲಿ ಸಿಲುಕಿಕೊಂಡವರನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಪಘಾತದ ದೃಶ್ಯ ಕಂಡು ಬೆಚ್ಚಿಬಿದಿದ್ದರು.
ಮ್ಯಾಕ್ಸಿಕ್ಯಾಬ್ ಗೆ ಡಿಕ್ಕಿ ಹೊಡೆದ ಬಸ್ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ್ದಾಗಿದ್ದು, ಸಂಡೂರಿನಿಂದ ದಿಡಗಾಗೆ ಹೋಗುತ್ತಿತ್ತು. ಬಸ್ಸಿನಲ್ಲಿಯೂ ಬೆರಳೆಣಿಕೆಯಷ್ಟು ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ. ಬಸ್ಸಿನ ಚಾಲಕ ಕೂಡ ಸೀಟಿನಡಿ ಸಿಲುಕಿಕೊಂಡಿದ್ದ, ಅವರನ್ನು ರಕ್ಷಿಸಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೃತದೇಹಗಳನ್ನು ಗುಲ್ಬರ್ಗಾ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆಳಂದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈಶಾನ್ಯ ವಲಯ ಐಜಿಪಿ ಸೇರಿದತೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications