ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆ ಮಹತ್ವದ ಹೆಜ್ಜೆ ಇಟ್ಟ ಕರ್ನಾಟಕ
ಬೆಂಗಳೂರು, ನವೆಂಬರ್ 13; ಕರ್ನಾಟಕ ರಾಜ್ಯದಲ್ಲಿ ಪ್ರಸ್ತುತ ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದ್ದರಿಂದ ಸರ್ಕಾರ ನವೀಕರಿಸಬಹುದಾದ ಇಂಧನ ಯೋಜನೆಗಳ ಪರಿಣಾಮಕಾರಿ ಅನುಷ್ಟಾನಕ್ಕೆ ಮುಂದಾಗಿದೆ. ಈ ಕುರಿತು ಮಹತ್ವದ ಹೆಜ್ಜೆಯನ್ನು ಇಟ್ಟಿದೆ.
ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ, (ವಿನೋದ್ ಕುಮಾರ್ ಡಿ. ಎಂ.) ಸರ್ಕಾರದ ಅಧೀನ ಕಾರ್ಯದರ್ಶಿ ಇಂಧನ ಇಲಾಖೆ ಈ ಕುರಿತು ಆದೇಶ ಹೊರಡಿಸಿದ್ದಾರೆ. ದಿನಾಂಕ 7/11/2023ರಂದು ಇಂಧನ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ಬಳಿಕ ಈ ಆದೇಶ ಹೊರಡಿಸಲಾಗಿದೆ. ಸರ್ಕಾರ ನವೀಕರಿಸಬಹುದಾದ ಇಂಧನ ಯೋಜನೆಗಳ ಪರಿಣಾಮಕಾರಿ ಅನುಷ್ಟಾನಕ್ಕಾಗಿ Implementation Committeeಯನ್ನು ರಚನೆ ಮಾಡಿದೆ. ಈ ಸಮಿತಿಗೆ ಅಧ್ಯಕ್ಷ, ಸದಸ್ಯರನ್ನು ನೇಮಕ ಮಾಡಿ ಜವಾಬ್ದಾರಿಗಳನ್ನು ಹಂಚಿಕೆ ಮಾಡಿದೆ.

ಆದೇಶದ ವಿವರಗಳು; ರಾಜ್ಯದಲ್ಲಿ ಪ್ರಸ್ತುತ ವಿದ್ಯುತ್ ಬೇಡಿಕೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಪ್ರಸ್ತುತ ಸ್ಥಾಪಿತ ಸಾಮರ್ಥ್ಯ 32,085ಮೆ.ವ್ಯಾ. ಆಗಿದೆ. ದಿನಾಂಕ 25/08/2023ರಂದು 16,950 ಮೆ.ವ್ಯಾ. ಗರಿಷ್ಟ ಬೇಡಿಕೆ ದಾಖಲಾಗಿದೆ. ರಾಜ್ಯದಲ್ಲಿ 1,55,074 ಮೆ.ವ್ಯಾ. ಸಾಮರ್ಥ್ಯದ ನವೀಕರಿಸಬಹುದಾದ ಇಂಧನ ಯೋಜನೆಗಳ ಸಂಭವನೀಯ ಸಾಮರ್ಥ್ಯವಿದ್ದು, ಈವರೆಗೆ 16,232 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳು ಅನುಷ್ಟಾನಗೊಂಡಿವೆ ಎಂದು ಆದೇಶ ಹೇಳಿದೆ.
ರಾಜ್ಯದಲ್ಲಿ ಹೆಚ್ಚುತ್ತಿರುವ ಬೇಡಿಕೆ ಮತ್ತು ಕೇಂದ್ರ ಸರ್ಕಾರವು ವರ್ಷ 2030ರೊಳಗೆ ನಿಗದಿಪಡಿಸಿರುವ 500 ಗಿ.ವ್ಯಾ. ಸಾಮರ್ಥ್ಯದ ಗುರಿಯನ್ನು ಸಾಧಿಸಲು ಹೆಚ್ಚು ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ಅನುಷ್ಟಾನಗೊಳಿಸುವುದು ಜರೂರಾಗಿದೆ. ಗ್ರಿಡ್ ಮೇಲಿನ ಹೊರೆ ತಗ್ಗಿಸಲು PM KUSUM Component-B ಯಡಿ 38,782 ಸಂಖ್ಯೆಯ ಜಾಲಮುಕ್ತ ಸೌರ ನೀರಾವರಿ ಪಂಪ್ಸೆಟ್ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಕೇಂದ್ರ ಸರ್ಕಾರದ Rooftop Phase-II ಯೋಜನೆಯಡಿ ರಾಜ್ಯಕ್ಕೆ 33ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳ ಹಂಚಿಕೆ ನೀಡಿದ್ದು, ಈವರೆಗೆ ಕೇವಲ 2.5ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳು ಮಾತ್ರ ಅನುಷ್ಟಾನಗೊಂಡಿವೆ ಎಂದು ತಿಳಿಸಿದೆ.
ರಾಜ್ಯದಲ್ಲಿ ಈಗಾಗಲೇ PM KUSUM Component-C ಯಡಿ ಹಂತ-1 ರಲ್ಲಿ 3,37,331 ಪಂಪ್ಸೆಟ್ಗಳನ್ನು ಫೀಡರ್ವಾರು ಸೌರೀಕರಣ ಮಾಡಲು 1,300 ಮೆ.ವ್ಯಾ. ಸಾಮರ್ಥ್ಯದ ಯೋಜನೆಗಳ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ ಮತ್ತು ಹಂತ-2 ರಲ್ಲಿ 1,192 ಮೆ.ವ್ಯಾ. ಸಾಮರ್ಥ್ಯದ 4,29,588 ಪಂಪ್ಸೆಟ್ ಒಳಗೊಂಡಂತೆ ಫೀಡರ್ವಾರು ಸೌರೀಕರಣ ಯೋಜನೆಯು ಕೈಗೆತ್ತಿಕೊಳ್ಳಬೇಕಾಗಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನಲ್ಲಿ ಈಗಾಗಲೇ ಇರುವ 2050 ಮೆ.ವ್ಯಾ. ಸಾಮರ್ಥ್ಯದ ಸೌರ ಪಾರ್ಕ್ಗೆ ಹೆಚ್ಚುವರಿಯಾಗಿ 300 ಮೆ.ವ್ಯಾ. ಸಾಮರ್ಥ್ಯದ ಸೌರ ಪಾರ್ಕ್ ಸ್ಥಾಪಿಸಲು ಮತ್ತು ಹೊಸದಾಗಿ 2500 ಮೆ.ವ್ಯಾ. ಸಾಮರ್ಥ್ಯದ ಸೌರ ಪಾರ್ಕ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಣೆ ನೀಡಿದೆ.
ಕಲ್ಬುರ್ಗಿ ಜಿಲ್ಲೆಯಲ್ಲಿ 100 ಮೆ.ವ್ಯಾ. ಸಾಮರ್ಥ್ಯ ಸೌರ ಯೋಜನೆ ಮತ್ತು ಬೀದರ್ ಜಿಲ್ಲೆಯಲ್ಲಿ 500 ಮೆ.ವ್ಯಾ. ಸಾಮರ್ಥ್ಯದ ಸೌರ ಪಾರ್ಕ್ ಯೋಜನೆಗಳನ್ನು ಅನುಷ್ಟಾನಗೊಳಿಸಲಾಗುತ್ತಿದೆ. ಪಾವಗಡ ತಾಲ್ಲೂಕಿನಲ್ಲಿ 2.4 ಮೆ.ವ್ಯಾ./ 4.5 ಮೆ.ವ್ಯಾ.ಹ ಸಾಮರ್ಥ್ಯದ ಬ್ಯಾಟರಿ ಶೇಖರಣೆ ಯೋಜನೆ (BESS)ಯನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಂಡಿದ್ದು, Peak Hour ಬೇಡಿಕೆ ಹಾಗೂ ಗ್ರಿಡ್ ಮೇಲಿನ ಹೊರೆಯನ್ನು ಸರಿದೂಗಿಸಲು ಹೆಚ್ಚಿನ ಸಾಮರ್ಥ್ಯದ (MW Scale) ಬ್ಯಾಟರಿ ಶೇಖರಣೆ ಯೋಜನೆಯನ್ನು ಅನುಷ್ಟಾನಗೊಳಿಸುವುದೂ ಸಹ ಅವಶ್ಯವಾಗಿದೆ.
ಇದಲ್ಲದೇ, Pumped Hydro Storage (PSP)ನಡಿ ಶರಾವತಿ-2000ಮೆ.ವ್ಯಾ. ಸಾಮರ್ಥ್ಯದ ಯೋಜನೆಯನ್ನು ಅನುಷ್ಟಾನಗೊಳಿಸಲಾಗುತ್ತಿದೆ ಮತ್ತು PCKL ವತಿಯಿಂದ ಖಾಸಗಿ ಹೂಡಿಕೆಯಲ್ಲಿ 1000 ಮೆ.ವ್ಯಾ. ಸಾಮರ್ಥ್ಯದ ವಿದ್ಯುತ್ನ್ನು Electricity Act, Section 63 ಅಡಿಯಲ್ಲಿ ಖರೀದಿ ಮಾಡುವ ಪ್ರಸ್ತಾವನೆ ಚಾಲ್ತಿಯಲ್ಲಿದೆ. ಅಲ್ಲದೇ, 7,830 ಮೆ.ವ್ಯಾ. ಸಾಮರ್ಥ್ಯದ PSP ಗಳನ್ನು ಅಭಿವೃದ್ಧಿಪಡಿಸಲು ವಿವಿಧ ಖಾಸಗಿ ಬಂಡವಾಳದಾರರು ಪ್ರಸ್ತಾವನೆ ಸಲ್ಲಿಸಿರುತ್ತಾರೆ. ಕೇಂದ್ರ ಸರ್ಕಾರದ Green Hydrogen Missionಗೆ ಪೂರಕವಾಗಿ ರಾಜ್ಯದಲ್ಲಿಯೂ ಗ್ರೀನ್ ಹೈಡೋಜನ್ ನೀತಿಯನ್ನು ರಚಿಸಲು ಕ್ರಮ ಕೈಗೊಂಡಿದ್ದು, Green Hydrogen/Green Ammonia ಯೋಜನೆಗಳ ಅನುಷ್ಟಾನವೂ ಸಹ ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಬೇಕಾಗಿದೆ.
PSP ಮತ್ತು Green Hydrogen/ Green Ammonia ಯೋಜನೆಗಳಿಗೂ ವಿದ್ಯುತ್ನ ಅವಶ್ಯಕತೆ ಇರುವುದರಿಂದ, ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಟಾನಗೊಳಿಸುವುದು ಅತ್ಯವಶ್ಯಕವಾಗಿದೆ. ಎಲ್ಲಾ ಯೋಜನೆಗಳನ್ನು ನಿಗದಿತ ಅವಧಿಯಲ್ಲಿ ಅನುಷ್ಟಾನಗೊಳಿಸಿ, ರಾಜ್ಯದ ವಿದ್ಯುತ್ ಬೇಡಿಕೆಯನ್ನು ಸಮರ್ಥವಾಗಿ ನಿಭಾಯಿಸುವುದು ಅತೀ ಮುಖ್ಯವಾಗಿದೆ.
ಈ ಹಿನ್ನಲೆಯಲ್ಲಿ, ಸದರಿ ಯೋಜನೆಗಳ ಯಶಸ್ವಿ ಅನುಷ್ಟಾನಕ್ಕಾಗಿ ಜಿ. ವಿ. ಬಲರಾಂ, ವ್ಯವಸ್ಥಾಪಕ ನಿರ್ದೇಶಕರು (ನಿವೃತ್ತ), ಕ್ರೆಡಲ್ ಇವರ ಅಧ್ಯಕ್ಷತೆಯಲ್ಲಿ Implementation Committee ರಚಿಸುವಂತೆ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಸರ್ಕಾರದಿಂದ ಈ ಕೆಳಕಂಡಂತೆ ಸಮಿತಿ ರಚಿಸಿ ಆದೇಶಿಸಿದೆ.
ರಾಜ್ಯದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಮತ್ತು ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ PM KUSUM Component-B, PM KUSUM Component-C, ಸೌರ ಪಾರ್ಕ್, ನವೀಕರಿಸಬಹುದಾದ ಇಂಧನ ಪಾರ್ಕ್(RE Park), PSP ಯೋಜನೆಗಳು, Green Hydrogen/Green Ammonia ಯೋಜನೆಗಳು, BESS ಯೋಜನೆಗಳು ಮತ್ತು ಸೌರ ಮೇಲ್ದಾವಣಿ ಯೋಜನೆಗಳ ಯಶಸ್ವಿ ಅನುಷ್ಟಾನಕ್ಕಾಗಿ ಕೆಳಕಂಡ ಸಮಿತಿ ರಚಿಸಲಾಗಿದೆ.
ಜಿ. ವಿ. ಬಲರಾಂ, ವ್ಯವಸ್ಥಾಪಕ ನಿರ್ದೇಶಕರು(ನಿವೃತ್ತ), ಕ್ರೆಡಲ್ ಅಧ್ಯಕ್ಷರು. ವ್ಯವಸ್ಥಾಪಕ ನಿರ್ದೇಶಕರು, ಕ್ರೆಡಲ್ ಸದಸ್ಯರು, ನಿರ್ದೇಶಕರು (ಪ್ರಸರಣ), ಕೆಪಿಟಿಸಿಎಲ್ ಸದಸ್ಯರು. ನಿರ್ದೇಶಕರು (ತಾಂತ್ರಿಕ), ಬೆಸ್ಕಾಂ ಸದಸ್ಯರು. ನಿರ್ದೇಶಕರು (ತಾಂತ್ರಿಕ), ಇಂಧನ ಇಲಾಖೆ ಸದಸ್ಯರು. ಸಮಿತಿ ರಚಿಸಿ ಆದೇಶ ಹೊರಡಿಸಿದ 7 ದಿನಗಳೊಳಗೆ ಮೊದಲನೇ ಸಭೆ ನಡೆಸುವುದು. ಸಮಿತಿಗೆ ಅವಶ್ಯವಿರುವ ಹೆಚ್ಚುವರಿ ಸದಸ್ಯರನ್ನು ನೇಮಿಸಿಕೊಳ್ಳಲು ಅಧಿಕಾರ ನೀಡಲಾಗಿದೆ. ಪ್ರಸ್ತಾವನೆಯಲ್ಲಿ ವಿವರಿಸಿರುವ ಚಾಲ್ತಿಯಲ್ಲಿರುವ ಮತ್ತು ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಎಲ್ಲಾ ಯೋಜನೆಗಳನ್ನು ತ್ವರಿತಗತಿಯಲ್ಲಿ ಅನುಷ್ಟಾನಗೊಳಿಸಲು ಸಂಬಂಧಪಟ್ಟ ಸಂಸ್ಥೆಗಳಿಗೆ/ ಅಭಿವೃದ್ಧಿದಾರರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ನೀಡುವುದು.











Click it and Unblock the Notifications