ರವಿ ಬೆಳಗೆರೆ ಬಂಧನ : ವಿಜು ಬಡಿಗೇರ್ಗಾಗಿ ಪೊಲೀಸರ ತೀವ್ರ ಶೋಧ
ಬೆಂಗಳೂರು, ಡಿಸೆಂಬರ್. 10 : ಹಾಯ್ ಬೆಂಗಳೂರು ಪತ್ರಿಕೆಯ ಪ್ರಧಾನ ಸಂಪಾದಕ ರವಿ ಬೆಳಗೆರೆ ವಿಚಾರಣೆಯನ್ನು ಸಿಸಿಬಿ ಪೊಲೀಸರು ಮುಂದುವರೆಸಿದ್ದಾರೆ. ಸುಪಾರಿ ನೀಡಿದ ಪ್ರಕರಣದ 3ನೇ ಆರೋಪಿ ವಿಜು ಬಡಿಗೇರ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ರವಿ ಬೆಳಗೆರೆಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಾಲ್ಕು ದಿನಗಳ ಕಾಲ ಅವರನ್ನು ಸಿಸಿಬಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.

ಬೆಂಗಳೂರಿನ ಸಿಸಿಬಿ ಕಚೇರಿಯಲ್ಲಿ ಪೊಲೀಸರು ರವಿ ಬೆಳಗೆರೆ ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಪ್ರಕರಣದ 3ನೇ ಆರೋಪಿ ವಿಜು ಬಡಿಗೇರ್ಗಾಗಿ ಹುಡುಕಾಟ ತೀವ್ರಗೊಳಿಸಿದ್ದಾರೆ. ಶಶಿಧರ್ ಮುಂಡೇವಾಡಿ ಬಂಧನದ ಬಳಿಕ ವಿಜು ತಲೆಮರೆಸಿಕೊಂಡಿದ್ದಾನೆ.
ಆಗಸ್ಟ್ 28ರಂದು ವಿಜು ಬಡಿಗೇರ್ ಜೊತೆ ನಾನು ಹಾಯ್ ಬೆಂಗಳೂರು ಕಚೇರಿಗೆ ಬಂದಿದ್ದೆ. 1 ಗನ್, 4 ಜೀವಂತ ಗುಂಡು, ಚಾಕುವನ್ನು ರವಿ ಬೆಳಗೆರೆ ಅವರು ನನಗೆ ಕೊಟ್ಟಿದ್ದರು ಎಂದು ಶಶಿಧರ್ ಹೇಳಿದ್ದಾನೆ. ಆದ್ದರಿಂದ, ಮುಂದಿನ ವಿಚಾರಣೆಗೆ ವಿಜು ಬಡೀಗೇರ್ ಬಂಧನ ಅತ್ಯಗತ್ಯವಾಗಿದೆ.
ಕಸ್ಟಡಿ ಅಂತ್ಯ : ರವಿ ಬೆಳಗೆರೆ ಅವರ ಪೊಲೀಸ್ ಕಸ್ಟಡಿಯ ಅವಧಿ ಸೋಮವಾರಕ್ಕೆ ಅಂತ್ಯವಾಗಲಿದೆ. ಪೊಲೀಸರು ನಾಳೆ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಹೆಚ್ಚಿನ ವಿಚಾರಣೆಗಾಗಿ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ.
ಜಾಮೀನು ಅರ್ಜಿ : ರವಿ ಬೆಳಗೆರೆ ಪರ ವಕೀಲ ದಿವಾಕರ್ ಅವರು ಸೆಷನ್ಸ್ ನ್ಯಾಯಾಲಯಕ್ಕೆ ಸೋಮವಾರ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ. ರವಿ ಬೆಳಗೆರೆ ಅವರು ವಿಚಾರಣೆಗೆ ಸ್ಪಂದಿಸುತ್ತಿಲ್ಲ, ಆದ್ದರಿಂದ, ಅವರನ್ನ ನಮ್ಮ ವಶಕ್ಕೆ ನೀಡಿ ಎಂದು ಪೊಲೀಸರು ಪುನಃ ಮನವಿ ಮಾಡುವ ಸಾಧ್ಯತೆ ಇದೆ.












Click it and Unblock the Notifications