ರಾಮಲಿಂಗಾ ರೆಡ್ಡಿ ಸಿಟ್ಟಿಗೆ ಕರಗಿದ ಕಾಂಗ್ರೆಸ್, ಸಚಿವ ಸ್ಥಾನ ಪಕ್ಕಾ
ಬೆಂಗಳೂರು, ಜೂನ್ 05: ಕಾಂಗ್ರೆಸ್ ಪಕ್ಷದ ವಿರುದ್ಧ ಸಿಡಿದೆದ್ದಿದ್ದ ಮಾಜಿ ಸಚಿವ ರಾಮಲಿಂಗಾ ರೆಡ್ಡಿಯ ಆಕ್ರೋಶಕ್ಕೆ ಕಾಂಗ್ರೆಸ್ ಮಣಿದಂತಿದೆ.
ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಕಾಂಗ್ರೆಸ್ ಒಪ್ಪಿಗೆ ಸೂಚಿಸಿದ್ದು, ಈ ಬಗ್ಗೆ ಸ್ವತಃ ಸಿದ್ದರಾಮಯ್ಯ ಅವರೇ ಸ್ಪಷ್ಟನೆ ನೀಡಿದ್ದಾರೆ.
ಸಿಡಿದೆದ್ದ ರಾಮಲಿಂಗಾ ರೆಡ್ಡಿ, ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ!
ರಾಮಲಿಂಗಾ ರೆಡ್ಡಿ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಿರುವ ಸಿದ್ದರಾಮಯ್ಯ ಅವರು, ರಾಮಲಿಂಗಾ ರೆಡ್ಡಿ ಅವರೊಂದಿಗೂ ದೂರವಾಣಿ ಮೂಲಕ ಮಾತನಾಡಿದ್ದಾರೆ.
ಕಾಂಗ್ರೆಸ್ ಪಕ್ಷದಲ್ಲಿ ಮೂಲ, ವಲಸೆ ಎಂಬ ಭೇದ ಇಲ್ಲ, ನಾವೆಲ್ಲರೂ ಒಟ್ಟಾಗಿದ್ದೇವೆ, ಜೊತೆಯಲ್ಲಿ ಸಾಗುತ್ತಿದ್ದೇವೆ ಎಂದ ಅವರು, ರೋಷನ್ ಬೇಗ್ ಮತ್ತು ವಿಶ್ವನಾಥ್ ಅವರ ಬಗ್ಗೆ ಮಾತನಾಡುವುದಿಲ್ಲ, ವಿಶ್ವನಾಥ್ ಅವರು ನಮ್ಮ ಪಕ್ಷದವರೇ ಅಲ್ಲ ಅವರ ಬಗ್ಗೆ ನಾನೇಕೆ ಮಾತನಾಡಲಿ ಎಂದು ಹೇಳಿದರು.
ಪೌರಾಡಳಿತ ಇಲಾಖೆ ರಾಮಲಿಂಗಾ ರೆಡ್ಡಿಗೆ
ಸಚಿವ ಎನ್.ಶಿವಳ್ಳಿ ಅವರ ಮರಣದಿಂದ ತೆರವಾಗಿರುವ ಸಚಿವ ಸ್ಥಾನವನ್ನು ರಾಮಲಿಂಗಾ ರೆಡ್ಡಿ ಅವರಿಗೆ ನೀಡುವುದು ಬಹುತೇಕ ಖಾತ್ರಿಯಾಗಿದೆ. ಶಿವಳ್ಳಿ ಅವರು ಪೌರಾಡಳಿತ ಖಾತೆಯನ್ನು ನಿಭಾಯಿಸುತ್ತಿದ್ದರು.
ಉನ್ನತ ಖಾತೆ ನಿಭಾಯಿಸಿದ್ದ ರಾಮಲಿಂಗಾ ರೆಡ್ಡಿ
ರಾಮಲಿಂಗಾ ರೆಡ್ಡಿ ಅವರು ಕಳೆದ ಅವಧಿಯಲ್ಲಿ ಬಹು ಮುಖ್ಯವಾದ ಸಚಿವ ಸ್ಥಾನವನ್ನು ನಿಭಾಯಿಸಿದ್ದರು. ಅವರು ಗೃಹ ಮಂತ್ರಿ ಸಹ ಆಗಿದ್ದರು. ಆದರೆ ಈ ಅವಧಿಯಲ್ಲಿ ಅವರನ್ನು ಪರಿಗಣಿಸಿರಲಿಲ್ಲ. ಇದರಿಂದ ಅಸಮಾಧಾನಗೊಂಡಿದ್ದ ಅವರು ಕಾಂಗ್ರೆಸ್ ಪಕ್ಷದ ವಿರುದ್ಧವೇ ಕಿಡಿಕಾರಿದ್ದರು.
ಇಳಿದು ಬಾ, ಇಳಿದು ಬಾ... ಸಿದ್ದರಾಮಯ್ಯಗೆ ಅಹಂಕಾರ ಇಳಿಯಿತೇ?: ರೋಷನ್ ಬೇಗ್
ಕೆಪಿಸಿಸಿ ಎದುರು ಪ್ರತಿಭಟಿಸಿದ್ದ ರಾಮಲಿಂಗಾ ರೆಡ್ಡಿ ಬೆಂಬಲಿಗರು
ರಾಮಲಿಂಗಾ ರೆಡ್ಡಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿ ಅವರ ಬೆಂಬಲಿಗರು ಕೆಪಿಸಿಸಿ ಕಚೇರಿ ಮುಂದೆ ಪ್ರತಿಭಟನೆಯನ್ನೂ ಮಾಡಿದ್ದರು. ಕೆಲವು ಅತೃಪ್ತ ಕಾಂಗ್ರೆಸ್ ಶಾಸಕರು ರಾಮಲಿಂಗಾ ರೆಡ್ಡಿ ಅವರಿಗೆ ಬೆಂಬಲವನ್ನೂ ಸೂಚಿಸಿದ್ದರು.
ಅಸಮಾಧಾನ ಹೋಗಲಾಡಿಸಲು ಸಂಪುಟ ವಿಸ್ತರಣೆ
ಸಂಪುಟ ವಿಸ್ತರಣೆ ಮಾಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಾಯಕರು ನಿಶ್ಚಯಿಸಿದ್ದು, ಈ ಸಂಪುಟ ವಿಸ್ತರಣೆಯು ಆಡಳಿತ ಕಾರಣಕ್ಕೆ ಅಲ್ಲದೆ ಅತೃಪ್ತರನ್ನು ಸಮಾಧಾನ ಪಡಿಸಿ ಅಧಿಕಾರ ಉಳಿಸಿಕೊಳ್ಳುತ್ತಿರುವುದಕ್ಕೆ ಮಾಡಲಾಗುತ್ತಿದೆ.