ಹೊಸ ಪಟ್ಟಿ ಪ್ರಕಾರ ಸಚಿವ ಸ್ಥಾನ ಪಡೆಯಲಿರುವ ಮೂವರು ಶಾಸಕರ ಯಾರು?
ಬೆಂಗಳೂರು, ಜೂನ್ 08: ಬುಧವಾರ ಜೂನ್ 12 ರಂದು ಸಚಿವ ಸಂಪುಟ ವಿಸ್ತರಣೆ ಪಕ್ಕಾ ಆಗಿದೆ. ಕುಮಾರಸ್ವಾಮಿ ಅವರೇ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ ಅಂದು ಪ್ರಮಾಣ ವಚನ ಸ್ವೀಕರಿಸುತ್ತಿರುವ ಶಾಸಕರು ಯಾರು ಎಂಬುದನ್ನು ಗೌಪ್ಯವಾಗಿಡಲಾಗಿದೆ.
ಆದರೆ ಅಧಿಕೃತ ಮೂಲಗಳ ಪ್ರಕಾರ, ಪಕ್ಷೇತರ ಶಾಸಕರಿಬ್ಬರು ಮತ್ತು ಕಾಂಗ್ರೆಸ್ನ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಅವರು ಬುಧವಾರದಂದು ಸಂಪುಟ ಸೇರಲಿದ್ದಾರೆ ಎನ್ನಲಾಗಿದೆ. ಈ ಮೂವರೂ ಸಚಿವ ಸ್ಥಾನ ಪಡೆಯುವುದು ಬಹುತೇಕ ಅಂತಿಮವಾಗಿದೆ.
ಅತೃಪ್ತರ ಗಲಾಟೆ ಮೇರೆ ಮೀರಿದ್ದರೂ ಸಹ ಕಾಂಗ್ರೆಸ್ ಪಕ್ಷ ದಿಟ್ಟ ಮತ್ತು ಚಾಣಾಕ್ಷ ನಿರ್ಧಾರವನ್ನು ತಳೆದಿದ್ದು, ಸಂಪುಟ ವಿಸ್ತರಣೆಯಲ್ಲಿ ಪಕ್ಷದ ಹಿತ ಹಾಗೂ ಸರ್ಕಾರದ ಹಿತ ಕಾಪಾಡುವ ದೃಷ್ಟಿಕೋನ ಎದ್ದು ಕಾಣುತ್ತಿದೆ.
ಜೆಡಿಎಸ್ ತನ್ನ ಬಳಿ ಉಳಿಸಿಕೊಂಡಿರುವ ಒಂದು ಸಚಿವ ಸ್ಥಾನವನ್ನು ಯಾರಿಗೆ ನೀಡಲಿದೆ ಎಂಬುದು ಇನ್ನೂ ಖಾತ್ರಿಯಾಗಿಲ್ಲ. ಆದರೆ ಅಲ್ಪಸಂಖ್ಯಾತರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಆರ್.ಶಂಕರ್ಗೆ ಮತ್ತೆ ಅವಕಾಶ
ಕೆಪಿಜೆಪಿ ಪಕ್ಷದಿಂದ ರಾಜ್ಯದ ಏಕೈಕ ಅಭ್ಯರ್ಥಿ ಆರ್.ಶಂಕರ್ ಅವರಿಗೆ ಮತ್ತೆ ಸಂಪುಟ ಸೇರುವ ಅದೃಷ್ಟ ಸಿಗುತ್ತಿದೆ. ಶಂಕರ್ ಅವರು ಈ ಮೊದಲು ಅರಣ್ಯ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಆ ನಂತರ ಅವರನ್ನು ಸಂಪುಟದಿಂದ ಕೈಬಿಡಲಾಗಿತ್ತು. ಆಗ ಅವರು ಬಿಜೆಪಿಗೆ ಬೆಂಬಲ ಸೂಚಿಸಿದರು ಈಗ ಮತ್ತೆ ಅವರನ್ನು ಸೆಳೆದುಕೊಳ್ಳಲಾಗಿದ್ದು ಅವರಿಗೆ ಸಚಿವ ಸ್ಥಾನ ದೊರಕುವುದು ಬಹುತೇಕ ಖಾತ್ರಿ ಆಗಿದೆ.

ಪಕ್ಷೇತರ ಶಾಸಕ ನಾಗೇಶ್ಗೆ ಅವಕಾಶ
ಅದೃಷ್ಟದಿಂದ ಶಾಸಕರಾದ ಎಚ್.ನಾಗೇಶ್ ಅವರಿಗೆ ಈಗ ಮತ್ತೆ ಅದೃಷ್ಟ ಒದಗಿ ಬಂದಿದೆ. ಮುಳಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯ ನಾಮಪತ್ರ ರದ್ದಾಗಿ, ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ನಾಗೇಶ್ ಅವರಿಗೆ ಕಾಂಗ್ರೆಸ್ ಬೆಂಬಲ ನೀಡಿತು. ಹಾಗಾಗಿ ಅವರು ಆರಿಸಿ ಬಂದರು. ಈಗ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತಿದೆ. ಇವರೂ ಸಹ ಕೆಲವು ತಿಂಗಳ ಹಿಂದೆ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಆ ನಂತರ ಮತ್ತೆ ಕಾಂಗ್ರೆಸ್ಗೆ ಬೆಂಬಲ ಸೂಚಿಸಿದರು.

ರಾಮಲಿಂಗಾ ರೆಡ್ಡಿ ಹಿರಿತನಕ್ಕೆ ಮಣೆ
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಗೃಹ ಖಾತೆ ಸೇರಿ ಉನ್ನತ ಇಲಾಖೆಗಳನ್ನು ನಿಭಾಯಿಸಿದ್ದ ಹಿರಿಯ ಕಾಂಗ್ರೆಸ್ಸಿಗ ರಾಮಲಿಂಗಾ ರೆಡ್ಡಿ ಅವರಿಗೆ ಕಾಂಗ್ರೆಸ್ ಸಚಿವ ಸ್ಥಾನ ನೀಡುತ್ತಿದೆ. ರಾಮಲಿಂಗಾ ರೆಡ್ಡಿ ಅವರು ಇತ್ತೀಚೆಗಷ್ಟೆ ಕಾಂಗ್ರೆಸ್ ಮುಖಂಡರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು, ಕೆಪಿಸಿಸಿ ಕಚೇರಿ ಎದುರು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದರು. ಇದೆಲ್ಲಾ ಆದ ನಂತರವಷ್ಟೆ ಅವರಿಗೆ ಸಚಿವ ಸ್ಥಾನ ದೊರೆತಿದೆ.

ಪಕ್ಷೇತರರ ಮೇಲೆ ಪ್ರೀತಿ ಏಕೆ?
ಪಕ್ಷೇತರರಿಗೆ ಪಕ್ಷಾಂತರ ಬಹಳ ಸಲೀಸು. ಅವರಿಗೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುವುದಿಲ್ಲ. 105 ಕ್ಷೇತ್ರಗಳನ್ನು ಗೆದ್ದಿರುವ ಬಿಜೆಪಿಗೆ ಬಹುಮತ ಗಳಿಸಿಕೊಳ್ಳಲು ಹೆಚ್ಚೇನು ಸಂಖ್ಯೆ ಬೇಕಿಲ್ಲ. ಪಕ್ಷೇತರರು ಬಿಜೆಪಿಗೆ ಮೊದಲ ಬಲಿ ಆಗುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್ ಪಕ್ಷದ ಶಾಸಕರಾದರೆ ರಾಜೀನಾಮೆ ನೀಡಿ ನಂತರ ಚುನಾವಣೆ ಎದುರಿಸಬೇಕಾಗುತ್ತದೆ. ಹಾಗಾಗಿ ಪಕ್ಷೇತರರನ್ನು ಉಳಿಸಿಕೊಳ್ಳುವ ದೃಷ್ಟಿಯಿಂದ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ.












Click it and Unblock the Notifications