Rain Alert: ಮಳೆ... ಮಳೆ... ಮುಂದಿನ ಕೆಲವೇ ಗಂಟೆಗಳಲ್ಲಿ ಮಳೆ ಅಬ್ಬರ ಶುರು!
ಮಳೆರಾಯ ಅಬ್ಬರಿಸುತ್ತಾ ಕನ್ನಡಿಗರ ಎದೆಯಲ್ಲಿ ಭಯ ಹುಟ್ಟಿಸಿದ್ದಾನೆ. ಅರೆರೆ.. ಮಳೆ ಬಂದ್ರೆ ಭಯ ಏಕೆ? ಅಂತಾ ಕೇಳಬೇಡಿ ಮತ್ತೆ. ಯಾಕಂದ್ರೆ ಅಕಾಲಿಕ ಮಳೆ ಕಾರಣಕ್ಕೆ ಹಲವು ರೀತಿ ಸಮಸ್ಯೆಗಳು ಇದೀಗ ಎದುರಾಗುತ್ತಿವೆ. ಮುಂಗಾರು ಮಳೆ ಕಾಲ ಮುಗಿದು, ಹಿಂಗಾರು ಮಳೆ ಸಮಯ ಕೂಡ ಅಂತ್ಯವಾಗಿದೆ ಎನ್ನುವಾಗಲೇ ಮಳೆ ಶುರುವಾಗಿದೆ. ಅದರಲ್ಲೂ ಚಳಿ ಶುರು ಆಗುವಾಗ ಕರ್ನಾಟಕ ರಾಜ್ಯದಲ್ಲಿ ಭಾರಿ ಮಳೆ ಬೀಳುತ್ತಿರುವುದು ಹಲವಾರು ಸಮಸ್ಯೆ ಇದೀಗ ಎದುರಾಗುವಂತೆ ಮಾಡಿದೆ. ಹೀಗಿದ್ದಾಗಲೇ ಮತ್ತೆ ಮಳೆ ಎಚ್ಚರಿಕೆ ನೀಡಲಾಗಿದೆ!
ಕಳೆದ ವರ್ಷ ಅಂದ್ರೆ 2023ರ ನವೆಂಬರ್ ವೇಳೆಗೆ ಜನರು ಮಳೆ ಯಾಕೆ ಬಂದಿಲ್ಲ?? ಅಂತಾ ಹಿಡಿಶಾಪ ಹಾಕುತ್ತಾ ವರುಣನ ವಿರುದ್ಧ ಗೊಣಗುತ್ತಿದ್ದರು. ಯಾಕಂದ್ರೆ 2023 ರಲ್ಲಿ ಮಳೆಯು ಕೈಕೊಟ್ಟು ಹೋಗಿದ್ದ ಕಾರಣಕ್ಕೆ ಜನರಿಗೆ ನಾನಾ ರೀತಿಯ ಸಮಸ್ಯೆ ಎದುರಾಗಿತ್ತು. ಹೀಗಾಗಿ ಜನರಿಗೆ ಕೂಡ ಚಿಂತೆ ಶುರುವಾಗಿತ್ತು. ಆದರೆ 2024ರ ಹೊತ್ತಿಗೆ ಅಂದ್ರೆ ಪ್ರಸಕ್ತ ವರ್ಷದಲ್ಲಿ ಮಳೆ ಯಾಕಪ್ಪಾ ಬೀಳುತ್ತಿದೆ? ಅಂತಾ ಜನ ಗೊಣಗುತ್ತಿದ್ದಾರೆ. ಹೀಗಿದ್ದರೂ ಮತ್ತೆ ಹಲವಾರು ಜಿಲ್ಲೆಗಳಿಗೆ ಭಾರಿ ಮಳೆಯ ಮುನ್ನೆಚ್ಚರಿಕೆ ಸಿಗುತ್ತಿದೆ.

ಮಳೆ.. ಮಳೆ.. ಮತ್ತೆ ಮಳೆ!
ಅಂದಹಾಗೆ ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ & ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಇಂದು ಮಳೆ ಬರಲಿದೆ. ಹಾಗೇ ಮತ್ತೊಂದು ಕಡೆ ಸಕ್ಕರೆ ನಾಡು ಮಂಡ್ಯ, ಕೋಲಾರ ಸೇರಿ ಕನ್ನಡ ನಾಡಿನ ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಇಂದು ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ. ಇದರ ಜೊತೆಗೆ ಚಿಕ್ಕಬಳ್ಳಾಪುರ, ತುಮಕೂರು ಮತ್ತು ರಾಮನಗರ ಜಿಲ್ಲೆಗಳಲ್ಲೂ ಹಗುರ ಮಳೆ ಬೀಳುವ ಮುನ್ನೆಚ್ಚರಿಕೆ ನೀಡಲಾಗಿದೆ.
ಮಳೆ ಅಬ್ಬರ ಶೀಘ್ರದಲ್ಲೇ ನಿಂತು ಹೋಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಯಾಕಂದ್ರೆ, ಈಗ ಮನ್ನಾರ್ ಕೊಲ್ಲಿ & ಶ್ರೀಲಂಕಾ ಕರಾವಳಿ ಮೇಲೆ ಚಂಡಮಾರುತ ಚಲನೆ ಕಂಡುಬರ್ತಿದ್ದು, ಕೊಮೊರಿನ್ ಪ್ರದೇಶದಿಂದ ನೈಋತ್ಯ ಬಂಗಾಳ ಕೊಲ್ಲಿಯವರೆಗೆ ತೊಟ್ಟಿಯಾಗಿ ಕಂಡುಬರುತ್ತದೆ ಎಂದು ವಿವರಿಸಲಾಗಿದೆ. ಹೀಗಾಗಿ ಮತ್ತಷ್ಟು ಮಳೆ ಬೀಳುವ ವಾತಾವರಣ ಎದುರಾಗುತ್ತಿದೆ. ಹೀಗಾಗಿ ಅಕಾಲಿಕ ಮಳೆಯ ಭಯದಲ್ಲಿ ಜನರು ಕೂಡ ನಲುಗುವ ವಾತಾವರಣ ನಿರ್ಮಾಣ ಆಗುತ್ತಿದೆ.
ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ...
ಮಳೆ ಇಲ್ಲದೆ ಸೊರಗಿದ್ದ ಕರ್ನಾಟಕದ ಜನರಿಗೆ ಮಳೆರಾಯ ಕಳೆದ 6 ತಿಂಗಳಿಂದ ಭಾರಿ ದೊಡ್ಡ ಕೊಡುಗೆ ನೀಡಿದ್ದಾನೆ. ಅದರಲ್ಲೂ ಭರ್ಜರಿ ಮಳೆಗೆ, ಕರ್ನಾಟಕದ ಪ್ರತಿಯೊಂದು ಜಿಲ್ಲೆ ಕೂಡ ತಂಪಾಗಿದೆ. ಹೀಗಿದ್ದಾಗ ಹಿಂಗಾರು ಮಳೆ ಮೋಡಗಳು ಕರ್ನಾಟಕದ ಕಡೆಗೆ ಓಡೋಡಿ ಬರುತ್ತಿದ್ದು ಕರ್ನಾಟಕದಲ್ಲಿ ಮತ್ತಷ್ಟು ಭಾರಿ ಮಳೆ ಸುರಿಯುವ ಮುನ್ಸೂಚನೆ ಇದೆ. ಆದರೆ, ಈಗಾಗಲೇ ಬೆಳೆ ಕೈಗೆ ಬರುವ ನಿರೀಕ್ಷೆಯಲ್ಲಿ ಖುಷಿಯಾಗಿರುವ ರೈತರಿಗೆ, ಮಳೆ ಎಂಟ್ರಿ ಆಗಿದ್ದು ಭಯ ಹುಟ್ಟಿಸಿದೆ. ಯಾಕಂದ್ರೆ ಕೈಗೆ ಬಂದ ತುತ್ತು ಬಾಯಿಗೆ ಬಂದಿಲ್ಲ ಎನ್ನುವಂತಹ ಸ್ಥಿತಿ ನಿರ್ಮಾಣ ಆಗುತ್ತಿದೆ.












Click it and Unblock the Notifications