ಮೋದಿ ಯಾರೂ ಅಲ್ಲ.. ಯಾವುದೇ ಗೂಂಡಾಗಳ ಮಾತನ್ನು ನಾನು ಕೇಳುವುದಿಲ್ಲ: ರಾಯಚೂರು ಬಿಜೆಪಿ ಶಾಸಕನ ಆಡಿಯೋ ವೈರಲ್
ರಾಯಚೂರು, ಮಾ 31: ರಾಯಚೂರು ಜಿಲ್ಲೆಯ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಶುಕ್ರವಾರ ರಾಜ್ಯಾದ್ಯಂತ ವೈರಲ್ ಆಗಿದೆ.
ವೈರಲ್ ಆಗಿರುವ ಆಡಿಯೋ ಕ್ಲಿಪ್ನಲ್ಲಿ, ಪ್ರಧಾನಿ ಸೇರಿದಂತೆ ಯಾರೂ ತಮ್ಮನ್ನು ಪ್ರಶ್ನಿಸಲು ಸಾಧ್ಯವಿಲ್ಲ. ನಾನು ಯಾವುದೇ ಗೂಂಡಾಗಳ ಮಾತನ್ನು ಕೇಳುವುದಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.

'ಮೋದಿ ಯಾರೂ ಇಲ್ಲ.. ನಾನೊಬ್ಬನೇ ಶಿವರಾಜ್ ಪಾಟೀಲ್.. ಯಾರ ಮಾತನ್ನೂ ನಾನು ಕೇಳುವುದಿಲ್ಲ.. ಮೋದಿಯ ಬಲಗೈ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.. ನನ್ನದು ಏಕಾಂಗಿ ಸೈನ್ಯ. ನನಗೆ ಬಲ- ಎಡ ಎಂಬುದೇ ಇಲ್ಲ. ನಾನೇ ಮೋದಿ, ನಾನೇ ಟ್ರಂಪ್, ಅವರು ನನ್ನನ್ನು ಆಟವಾಡಿಸಲು ಸಾಧ್ಯವಿಲ್ಲ,' ಎಂದು ಶಾಸಕರ ಶಿವರಾಜ್ ಪಾಟೀಲ್ ಹೇಳಿದ್ದಾರೆ. ಇದು ಮೂರು ನಿಮಿಷಗಳ ಆಡಿಯೋ ಕ್ಲಿಪ್ ಆಗಿದೆ.
' ಚುನಾವಣೆಯಲ್ಲಿ ಸೋತರೂ, ಗೆದ್ದರೂ ಪರವಾಗಿಲ್ಲ. ಜಗತ್ತಿನಲ್ಲಿ ಚಿಂತೆಯಿಲ್ಲದ ವ್ಯಕ್ತಿ ಇದ್ದರೆ ಅದು ಶಿವರಾಜ್ ಪಾಟೀಲ್. ನಾನು ದೇವರಿದ್ದಂತೆ, ನನ್ನ ಹುಡುಗರಿಗೆ ಪ್ರತಿ ದಿನ ನನ್ನ ಪಾದ ಮುಟ್ಟಿ ಆಶೀರ್ವಾದ ಪಡೆಯುವಂತೆ ಹೇಳಿದ್ದೇನೆ' ಎಂದು ಮಾತನಾಡಿದ್ದಾರೆ.
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೂ ಮುನ್ನ ನಡೆದ ಈ ಬೆಳವಣಿಗೆ ರಾಜ್ಯದ ಆಡಳಿತ ಪಕ್ಷವಾದ ಬಿಜೆಪಿಗೆ ಮುಜುಗರ ತಂದಿದೆ. ಈ ಆಡಿಯೋ ಕ್ಲಿಪ್ ಈಗಾಗಲೇ ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ. ಈ ಆಡಿಯೋ ಕ್ಲಿಪ್ ಬಗ್ಗೆ ಪಾಟೀಲ್ ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.
ಡಾ. ಎಸ್ ಶಿವರಾಜ್ ಪಾಟೀಲ್ ಅವರು 2013 ರಲ್ಲಿ ಕರ್ನಾಟಕ ವಿಧಾನಸಭೆಗೆ ಶಾಸಕರಾಗಿ ಆಯ್ಕೆಯಾದರು. ಅವರು ರಾಯಚೂರು ನಗರದ ಶಾಸಕರಾಗಿದ್ದಾರೆ. ಕಳೆದ ಭಾರಿಯ ಚುನಾವಣೆಯಲ್ಲಿಯೂ ರಾಯಚೂರು ನಗರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
2013 ರಲ್ಲಿ ಅವರು ಜಾತ್ಯತೀತ ಜನತಾದಳದಿಂದ ರಾಜಕೀಯವನ್ನು ಆರಂಭಿಸಿದರು. 2013ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೈಯದ್ ಯಾಸಿನ್ ವಿರುದ್ಧ 7871 ಮತಗಳ ಅಂತರದಿಂದ ಜಯಭೇರಿ ಬಾರಿಸಿದರು. 2018 ರಲ್ಲಿ ಅವರು ಭಾರತೀಯ ಜನತಾ ಪಕ್ಷಕ್ಕೆ ಸೇರಿದರು. 2018 ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸೈಯದ್ ಯಾಸಿನ್ ವಿರುದ್ಧ 10,991 ಮತಗಳ ಅಂತರದಿಂದ ಗೆದ್ದರು.
ಕರ್ನಾಟಕ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ ಬುಧವಾರ ಪ್ರಕಟಿಸಿದೆ. 224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಗೆ ಮೇ 10 ರಂದು ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.
ಈ ಬಾರಿ, ಆಡಳಿತಾರೂಢ ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ನಡುವೆ ನಿಕಟ ಸ್ಪರ್ಧೆಯಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ಹೇಳಿವೆ. ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಗೊಳಿಸಲು ಸಿದ್ದತೆ ನಡೆಸಿದೆ.
ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಪಕ್ಷದ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್ ಅವರ ಹೆಸರುಗಳಿವೆ. ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಮತ್ತು ಶಿವಕುಮಾರ್ ಕನಕಪುರದಿಂದ ಸ್ಪರ್ಧಿಸಲಿದ್ದಾರೆ.












Click it and Unblock the Notifications