ಅಪ್ರಬುದ್ಧ ಹೇಳಿಕೆಯಿಂದ ರಾಹುಲ್ ಗಾಂಧಿ ದೇಶದ ಮಾನ ತೆಗೆಯುತ್ತಿದ್ದಾರೆ: ಪ್ರಹ್ಲಾದ ಜೋಶಿ ಕಿಡಿ
ಹುಬ್ಬಳ್ಳಿ, ಸೆಪ್ಟೆಂಬರ್ 11: ವಿದೇಶದಲ್ಲಿ ರಾಹುಲ್ ಗಾಂಧಿ ಅಪ್ರಬುದ್ಧ ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ಭಾರತದ ಮಾನ ಹರಾಜು ಹಾಕುತ್ತಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕಿಡಿ ಕಾರಿದರು.
ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಕಾಂಗ್ರೆಸ್ ಎಂದೆಂದಿಗೂ ಮೀಸಲಾತಿ, ಸಾಮಾಜಿಕ ನ್ಯಾಯ ವಿರೋಧಿ. ನೆಹರು, ಇಂದಿರಾ, ರಾಜೀವ್ ಗಾಂಧಿ ಹೇಳಿಕೆ ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ. ಅಂಬೇಡ್ಕರ್ ಅವರಿಗೆ ಘೋರ ಅಪಮಾನ ಮಾಡಿದವರು ಕಾಂಗ್ರೆಸ್ ನವರು. ಜಗಜೀವನ ರಾಮ್ ರಿಗೆ ಕಾಂಗ್ರೆಸ್ ನಿಂದ ಅನ್ಯಾಯ, ದಲಿತರು ಮತ್ತು ಅಲ್ಪಸಂಖ್ಯಾತರನ್ನು ಕಾಂಗ್ರೆಸ್ ಕೇವಲ ಮತ ಬ್ಯಾಂಕ್ ಆಗಿ ನೋಡಿದೆ ಎಂದರು.

ರಾಹುಲ್ ಗಾಂಧಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕೈಯಲ್ಲಿ ಸಂವಿಧಾನ ಪುಸ್ತಕ ಹಿಡೀತಾರೆ. ಮನಸ್ಸಿನಲ್ಲಿ ಸಂವಿಧಾನ, ಮೀಸಲಾತಿ ವಿರೋಧಿ ನಿಲುವು ಇಟ್ಟುಕೊಂಡಿದ್ದಾರೆ. ವಿದೇಶದಲ್ಲಿ ನೀಡಿದ ಹೇಳಿಕೆಯೇ ಇದಕ್ಕೆ ಸಾಕ್ಷಿ. ಕಾಂಗ್ರೆಸ್ ನಾಯಕರು ಎಂದೆಂದಿಗೂ ಮೀಸಲಾತಿ ವಿರೋಧಿಗಳು. ರಾಹುಲ್ ಗಾಂಧಿ ಸಿಖ್ ರ ಪೇಟಾದ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿ ಸಿಖ್ ರನ್ನು ಅತ್ಯಂತ ಗೌರವದಿಂದ ಕಾಣುತ್ತಿದೆ. ವಿದೇಶ ದಲ್ಲಿ ಹೋಗಿ ಈ ರೀತಿ ಮಾತನಾಡೋದು ಸರಿಯಲ್ಲ. ಚುನಾವಣೆ ಬಗ್ಗೆಯೂ ರಾಹುಲ್ ಮಾತನಾಡಿದ್ದಾರೆ. ಕರ್ನಾಟಕ ಸೇರಿ ವಿರುದ್ಧ ರಾಜ್ಯಗಳಲ್ಲಿ ಕಾಂಗ್ರೆಸ್ ಗೆದ್ದಾಗ ಚುನಾವಣೆ ಆಯೋಗದ ಬಗ್ಗೆ ಏನು ಅನಿಸಲೇ ಇಲ್ಲ. ಇಷ್ಟು ಪಾರದರ್ಶಕವಾಗಿ ಎಲ್ಲಿಯೂ ಚುನಾವಣೆ ನಡೆಯಲ್ಲ. ರಾಜಕೀಯ ಟೀಕೆ ಮಾಡೋ ಭರದಲ್ಲಿ ಈ ರೀತಿಯ ಮಾತು ಸರಿಯಲ್ಲ ಎಂದು ಅವರು ಕಿಡಿ ಕಾರಿದರು.
ಇಡೀ ದೇಶವನ್ನು ಅಪಮಾನ ಮಾಡ್ತಿದ್ದಾರೆ. ದೇಶದ ಪ್ರತಿಷ್ಠೆಗೆ ಮಸಿ ಬಳಿಯುತ್ತಿದ್ದಾರೆ. ಅವರು ಏನೇ ಹೇಳಲಿ, ಮೀಸಲಾತಿ ಮತ್ತು ಸಾಮಾಜಿಕ ನ್ಯಾಯಕ್ಕೆ ಬಿಜೆಪಿ ಬದ್ಧ ರಾಹುಲ್ ಗಾಂಧಿ ಅಪ್ರಬುದ್ಧ ಹೇಳಿಕೆ ಖಂಡಿಸುತ್ತೇನೆ ಎಂದು ಹುಬ್ಬಳ್ಳಿಯಲ್ಲಿ ಪ್ರಹ್ಲಾದ್ ಜೋಶಿ ಆಕ್ರೋಶ ವ್ಯಕ್ತಪಡಿಸಿದರು.
ರಾಹುಲ್ ಗಾಂಧಿ ಇಂಗಿತಕ್ಕೆ ಬಿಜೆಪಿ ಆಕ್ರೋಶ
ಅಮೇರಿಕಾದ ವಾಷಿಂಗ್ಟನ್ ನಲ್ಲಿ ಭಾರತದಲ್ಲಿ ಹಿಂದುಳಿದ ಹಾಗೂ ದಲಿತರ ಮೀಸಲಾತಿ ರದ್ದು ಪಡಿಸುವ ಇಂಗಿತವನ್ನು ಲೋಕಸಭಾ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ವರಿಷ್ಠ ರಾಹುಲ್ ಅವರ ನಿಲುವನ್ನು ಖಂಡಿಸಿ ಭಾರತೀಯ ಜನತಾ ಪಕ್ಷದ ವತಿಯಿಂದ ನಗರದಲ್ಲಿಂದು ಬೃಹತ್ ಪ್ರಮಾಣದ ಪ್ರತಿಭಟನೆ ಮಾಡಿದರು .
ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಭಾರತ ದೇಶದಲ್ಲಿ ಜಾತಿ ಜನಗಣತಿ ನಡೆಸಬೇಕಾದ ಅನಿವಾರ್ಯತೆ ಪ್ರತಿಪಾದಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಭಾರತದಲ್ಲಿನ ಮೀಸಲಾತಿ ಸುಧಾರಣೆ ಕುರಿತಾಗಿಯೂ ಮಾತನಾಡಿದ್ಧು ಸರಿಯಲ್ಲ. ಕಾಂಗ್ರೆಸ್ ಯಾವ ತಳಹದಿಯ ಮೇಲೆ ಜಾತ್ಯಾತೀತ ಮನೋಭಾವ ಹೊಂದಿದೆ ಬಹಿರಂಗ ಪಡಿಸಬೇಕು ಎಂದು ಒತ್ತಾಯ ಮಾಡಲಾಯಿತು.
ಅಮೆರಿಕ ರಾಜಧಾನಿ ವಾಷಿಂಗ್ಟನ್ ಡಿಸಿ ನಗರದಲ್ಲಿ ಇರುವ ಜಾರ್ಜ್ ಟೌನ್ ವಿಶ್ವ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಜೊತೆ ಸಂವಾದ ನಡೆಸಿದ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತದಲ್ಲಿ ಮೀಸಲಾತಿ ತೆಗೆದು ಹಾಕುವ ಕುರಿತಾಗಿ ಚಿಂತನೆ ನಡೆಸಬಹುದು. ಆದರೆ, ಅದಕ್ಕೂ ಮುನ್ನ ಭಾರತ ದೇಶವು ನ್ಯಾಯಯುತ ಸ್ಥಳವಾಗಿ ಮಾರ್ಪಡಬೇಕು ಎನ್ನುವ ಅವರ ತಾವ ನಿಲುವು ಹಿಂದುಳಿದ ಹಾಗೂ ದಲಿತರ ಬಗ್ಗೆ ಅಭಿಪ್ರಾಯ ಇದೆ ಎಂಬುದನ್ನ ಸ್ಪಷ್ಟಪಡಿಸಬೇಕು ಎಂದರು.
ಒಬಿಸಿ, ದಲಿತ ಹಾಗೂ ಆದಿವಾಸಿಗಳು ಭಾರತ ದೇಶದಲ್ಲಿ ಶೇ.90ರಷ್ಟು ಇದ್ದಾರೆ. ಹೀಗಾಗಿ ಜಾತಿ ಜನ ಗಣತಿಯಂಥಾ ಸರಳ ಪ್ರಯತ್ನವನ್ನು ನಾವು ಮಾಡಲೇ ಬೇಕು. ಕೆಳ ಜಾತಿಯ, ಹಿಂದುಳಿದ ಜಾತಿಯ ಹಾಗೂ ದಲಿತ ಸಮುದಾಯದ ಜನರನ್ನು ಸಮಾಜದ ಮುಖ್ಯ ವಾಹಿನಿ ಜೊತೆ ಬೆರೆಸಬೇಕು. ಏಕೆಂದರೆ ಭಾರತದ ಪ್ರಮುಖ 200 ಉದ್ಯಮ ಸಂಸ್ಥೆಗಳಲ್ಲಿ ಭಾರತದ ಶೇ. 90ರಷ್ಟು ಜನಸಂಖ್ಯೆ ಹೊಂದಿರುವ ಸಮುದಾಯಗಳ ಯಾರೊಬ್ಬರೂ ಮಾಲೀಕರಾಗಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದು ಮಾಧ್ಯಮಗಳಲ್ಲಿ ಕೆಳ ವರ್ಗ, ಒಬಿಸಿ ಹಾಗೂ ದಲಿತ ಸಮುದಾಯದ ಭಾಗೀದಾರಿಕೆ ಶೂನ್ಯ ಎಂದು ರಾಹುಲ್ ಗಾಂಧಿ ಅವರ ಆಧಾರ ನೀಡಬೇಕು ಎಂದಿದ್ದಾರೆ.












Click it and Unblock the Notifications