Health Service: ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆಯೇ ದೊಡ್ಡ ಸವಾಲು: ಮಾಜಿ ಸಿಎಂ
ಹುಬ್ಬಳ್ಳಿ, ಸೆಪ್ಟಂಬರ್ 30: ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವುದು ಈ ದೇಶದ ಮುಂದಿರುವ ದೊಡ್ಡ ಸವಾಲು, ವೈದ್ಯರು ಎಲ್ಲರೂ ಸೇರಿ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಇಲ್ಲಿನ ಬಾಲಾಜಿ ಆಸ್ಪತ್ರೆಯಲ್ಲಿ ನಾರಾಯಣ ಹೃದಯಾಲಯ ಬೆಂಗಳೂರು ಇವರ ಸಹಯೋಗದೊಂದಿಗೆ ಹೃದಯ ಖಾಯಿಲೆ ಚಿಕಿತ್ಸಾ ಸೇವೆಗಳನ್ನು ಉದ್ಘಾಟಿಸಿ ಮಾತನಾಡಿದರು. ಬಾಲಾಜಿ ಆಸ್ಪತ್ರೆಯ ಡಾ. ಕ್ರಾಂತಿ ಕಿರಣ್ ಅವರು ಬಡವರಿಗೆ ಕಷ್ಟ ಬಂದಾಗ ಎಕ್ಸಿಡೆಂಟ್ ಆದಾಗ ಹಿಂದೆ ಮುಂದೆ ನೋಡದೇ ಚಿಕಿತ್ಸೆ ನೀಡುತ್ತಿದ್ದಾರೆ. ಅದರಿಂದ ಅವರು ಎಷ್ಟು ಹಣ ಗಳಿಸಿದ್ದಾರೊ ಗೊತ್ತಿಲ್ಲ. ಸಾಕಷ್ಟು ಪುಣ್ಯ ಗಳಿಸಿದ್ದಾರೆ.

ನಾನು ತತ್ವಜ್ಞಾನ ಮತ್ತು ಅರ್ಥಶಾಸ್ತ್ರದ ವಿದ್ಯಾರ್ಥಿ, ಅವೆರಡೂ ತದ್ವಿರುದ್ದ ತತ್ವಜ್ಞಾನ ಪಾಪ ಪುಣ್ಯದ ಲೆಕ್ಕ ಹೇಳುತ್ತದೆ. ಅರ್ಥಶಾಸ್ತ್ರದಲ್ಲಿ ಲಾಭ ನಷ್ಟ ಇರುತ್ತದೆ. ತತ್ವಜ್ಞಾನದಲ್ಲಿ ಲಾಭ ನಷ್ಟ, ಅರ್ಥಶಾಸ್ತ್ರದಲ್ಲಿ ಪಾಪ ಪುಣ್ಯದ ನೋಡಬೇಕು. ವೈದ್ಯರಿಗೆ ಮಾನವೀಯತೆ ಬಹಳ ಮುಖ್ಯ ಡಾ. ಕ್ರಾಂತಿಕಿರಣ ಮಾನವೀಯತೆಗೆ ಉತ್ತಮ ಉದಾಹರಣೆ, ಡಾ. ಕ್ರಾಂತಿಕಿರಣ ಅವರ ಕೈಯಲ್ಲಿ ನಾಡಿ ಮಿಡಿತ ಇತ್ತು. ಇನ್ನು ಮುಂದೆ ನಮ್ಮ ಹೃದಯದ ಮಿಡಿತವೂ ಅವರ ಕೈಯಲ್ಲಿ ಇರುತ್ತದೆ ಎಂದು ಹೇಳಿದರು.
ಈ ಭಾಗದ ಜನರಿಗೆ ಉತ್ತಮ ಸೇವೆ ಸಿಗಲಿ
ನಾರಾಯಣ ಹೃದಯಾಲಯದ ಡಾ. ದೇವಿ ಶೆಟ್ಟಿ ಯಶಸ್ವಿನಿ ಯೋಜನೆ ಕೊಟ್ಟವರು. ಎರಡೂ ಆಸ್ಪತ್ರೆಗಳು ಉತ್ತರ ಕರ್ನಾಟಕ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಕೊಡುತ್ತವೆ ಎನ್ನುವ ವಿಶ್ವಾಸ ಇದೆ. ನಾರಾಯಣ ಹೃದಯಾಲಯ ಧಾರವಾಡದ ಎಸ್ ಡಿಎಂ ನಲ್ಲಿ ದೊಡ್ಡ ಮಟ್ಟದ ಹೃದಯ ಶಸ್ತ್ರಚಿಕಿತ್ಸಾ ಘಟಕ ಹೊಂದಿರುವುದರಿಂದ ಎರಡೂ ಸೇರಿ ಉತ್ತಮ ಸೇವೆ ಸಿಗುವ ವಿಶ್ವಾಸ ಇದೆ. ಡಾ. ಕ್ರಾಂತಿಕಿರಣ ಅವರಿಂದ ಇನ್ನಷ್ಟು ವೈದ್ಯಕೀಯ ಸೇವೆ ಸಿಗುವಂತಾಗಲಿ. ಬಹಲಷ್ಟು ಕಡೆ ಎಲ್ಲ ಸೌಕರ್ಯಗಳಿರುತ್ತವೆ ಆದರೆ, ತಜ್ಞ ವೈದ್ಯರು ಇರುವುದಿಲ್ಲ. ಇಲ್ಲಿ ತಜ್ಞ ವೈದ್ಯರೂ ಮತ್ತು ಮೂಲ ಸೌಕರ್ಯ ಎರಡೂ ಇದೆ. ಇವರಿಂದ ಬಡವರಿಗೆ ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ವೈದ್ಯಕಿಯ ಸೇವೆ ದೊರೆಯುವಂತಾಗಲಿ ಎಂದು ತಿಳಿಸಿದರು.
ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವುದು ಈ ದೇಶದ ಮುಂದಿರುವ ದೊಡ್ಡ ಸವಾಲು, ವೈದ್ಯರು ಎಲ್ಲರೂ ಸೇರಿ ಈ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಬೇಕು. ಒಂದೆಡರು ಪ್ರಯೋಗಗಳನ್ನು ಮಾಡಿ ನೋಡಬೇಕು.
ಅಮೇರಿಕಾ ವೈದ್ಯಕೀಯ ಕ್ಷೇತ್ರದಲ್ಲಿ ಮುಳುಗುತ್ತಿದೆ. ಅಲ್ಲಿ ವಿಮಾ ಆಧಾರಿತ ವೈದ್ಯಕೀಯ ಸೇವೆ ಇದೆ. ಅಲ್ಲಿನ ಆರ್ಥಿಕ ಪರಿಸ್ಥಿತಿ ಬೇರೆ, ಇಲ್ಲಿನ ಆರ್ಥಿಕ ಪರಿಸ್ಥಿತಿ ಬೇರೆ, ಇಲ್ಲಿ ಬೇರೆ ಬೇರೆ ವರ್ಗದ ಜನರು ಇದ್ದಾರೆ. ಡಾ. ಕ್ರಾಂತಿಕಿರಣ್ ಅವರು ಕೆಲವು ವೈದ್ಯಕೀಯ ಶಿಬಿರಗಳನ್ನು ಮಾಡಬೇಕು ಎಂದು ಸಲಹೆ ನೀಡಿದರು.












Click it and Unblock the Notifications