ರಾಷ್ಟ್ರಪತಿಗಳ ಉಡುಪಿ ಭೇಟಿ: ಧರ್ಮಸಂಕಟದಲ್ಲಿ ಸಿಎಂ ಸಿದ್ದರಾಮಯ್ಯ
ಇದೇ ಭಾನುವಾರ (ಜೂ 18) ಉಡುಪಿ ಜಿಲ್ಲಾ ಪ್ರವಾಸದಲ್ಲಿರುವ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಜೊತೆ ಸಿದ್ದರಾಮಯ್ಯ ಇರುತ್ತಾರೋ ಅಥವಾ ಗೈರಾಗುತ್ತಾರೋ. ರಾಷ್ಟ್ರಪತಿಗಳು ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡುವ ಕಾರ್ಯಕ್ರಮ ನಿಗದಿಯಾಗಿದೆ. ರಾಷ್ಟ್ರಪತಿ
ದೇಶದ ಪ್ರಥಮ ಪ್ರಜೆ ಪ್ರಣಬ್ ಮುಖರ್ಜಿ ಇದೇ ಭಾನುವಾರ (ಜೂ 18) ಉಡುಪಿ ಜಿಲ್ಲಾ ಪ್ರವಾಸದಲ್ಲಿರುತ್ತಾರೆ. ಅಂದು ಶ್ರೀಕೃಷ್ಣಮಠ ಮತ್ತು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಿದ್ದಾರೆ.
ವಿಷಯ ಏನಪ್ಪಾ ಅಂದರೆ, ರಾಷ್ಟ್ರಪತಿ ಭೇಟಿಯ ವೇಳೆ ರಾಜ್ಯದ ಮುಖ್ಯಮಂತ್ರಿ, ಸ್ಥಳೀಯ ಜನಪ್ರನಿಧಿಗಳು ಇರಬೇಕಾಗಿರುವುದು ಶಿಷ್ಟಾಚಾರ. ಹಾಗಾಗಿ, ರಾಷ್ಟ್ರಪತಿ ಭೇಟಿಯ ವೇಳೆ ಸಿಎಂ ಸಿದ್ದರಾಮಯ್ಯ ಗೈರಾದರೆ ಪ್ರೊಟೋಕಾಲ್ ಉಲ್ಲಂಘಿಸಿದಂತೆ.
ಜೂ.18ರಂದು ಕೊಲ್ಲೂರಿಗೆ ರಾಷ್ಟ್ರಪತಿ ಭೇಟಿ
ನಾಡಿನ ವಿವಿಧ ದೇವಾಲಯಗಳಿಗೆ ಭೇಟಿ ನೀಡಿರುವ ಸಿದ್ದರಾಮಯ್ಯ, ಪುರಾಣ ಪ್ರಸಿದ್ದ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡದೇ ದಶಕಗಳೇ ಕಳೆದು ಹೋಗಿವೆ. ಸುತ್ತೂರು, ಸಿದ್ದಗಂಗಾ, ಕಾಗಿನೆಲೆ ಮುಂತಾದ ಮಠಗಳಿಗೆ ಭೇಟಿ ನೀಡಿದರೂ, ಉಡುಪಿ ಅಷ್ಠಮಠಕ್ಕೆ ಇದುವರೆಗೆ ಸಿಎಂ ಹೋಗಲೇ ಇಲ್ಲ.
ಮುಖ್ಯಮಂತ್ರಿಯಾದ ನಂತರ ಸುಮಾರು ಐದು ಬಾರಿ ಉಡುಪಿ ಜಿಲ್ಲಾ ಪ್ರವಾಸದಲ್ಲಿದ್ದರೂ ದೇವಾಲಯಕ್ಕೆ ಹೋಗದ ಸಿದ್ದರಾಮಯ್ಯ, ರಾಷ್ಟ್ರಪತಿಗಳ ಭೇಟಿಯ ವೇಳೆ ಯಾವ ನಿರ್ಧಾರಕ್ಕೆ ಬರಲಿದ್ದಾರೆ ಎನ್ನುವುದು ಕುತೂಹಲಕ್ಕೆ ಎಡೆಮಾಡಿ ಕೊಟ್ಟಿದೆ.
ಜಿಲ್ಲಾ ಶಾಸಕರು ಮತ್ತು ಸಚಿವ ಪ್ರಮೋದ್ ಮಧ್ವರಾಜ್ ಈ ಬಾರಿ, ಮುಖ್ಯಮಂತ್ರಿಗಳನ್ನು ಹೇಗಾದರೂ ಕೃಷ್ಣಮಠಕ್ಕೆ ಬರುವಂತೆ ಮಾಡಬೇಕು ಎನ್ನುವ ಪ್ರಯತ್ನದಲ್ಲಿದ್ದಾರೆ. ಸಿದ್ದರಾಮಯ್ಯ ಕೃಷ್ಣಮಠಕ್ಕೆ ಭೇಟಿ ನೀಡದೇ ಇರಲು ಕಾರಣವೇನು? ಮುಂದೆ ಓದಿ..
ಕೃಷ್ಣಮಠದ ಕಾರ್ಯಕ್ರಮಕ್ಕೆ ಸಿದ್ದು ಗೈರು ಸಾಧ್ಯತೆ
ಒಂದು ಮೂಲಗಳ ಪ್ರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯ ಉಡುಪಿ ಕೃಷ್ಣಮಠದ ಕಾರ್ಯಕ್ರಮಕ್ಕೆ ಗೈರಾಗಿ, ಕೊಲ್ಲೂರು ದೇವಾಲಯದಲ್ಲಿ ರಾಷ್ಟ್ರಪತಿಗಳನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.
ಸಿದ್ದು ವಿರುದ್ದ ಪೇಜಾವರ ಶ್ರೀಗಳ ಆಕ್ರೋಶ
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಆರಂಭದಲ್ಲಿ ಕೃಷ್ಣಮಠವನ್ನು ಮುಜರಾಯಿ ವ್ಯಾಪ್ತಿಗೆ ತರುವ ಪ್ರಯತ್ನವನ್ನು ಮಾಡಿದ್ದರು. ಇದಕ್ಕೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಈ ಸಂದರ್ಭದಲ್ಲಿ ಅಷ್ಠಮಠದ ಯತಿಗಳು, ಅದರಲ್ಲೂ ಪ್ರಮುಖವಾಗಿ ಪೇಜಾವರ ಶ್ರೀಗಳು ಸಿದ್ದರಾಮಯ್ಯ ವಿರುದ್ದ ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದರು.
ಕೃಷ್ಣಮಠವನ್ನು ಸರಕಾರೀಕರಣ ಮಾಡುವ ಪ್ರಯತ್ನ
ಸಿಎಂ ಆಗುವ ಮೊದಲಿನಿಂದಲೂ ಸಿದ್ದರಾಮಯ್ಯ ಕೃಷ್ಣಮಠವನ್ನು ಸರಕಾರೀಕರಣ ಮಾಡಬೇಕು ಎಂದು ಹೋರಾಟ ಮಾಡಿಕೊಂಡು ಬರುತ್ತಿದ್ದರು. ಈ ವಿಚಾರದಲ್ಲಿ ಸ್ವಪಕ್ಷೀಯರಿಂದಲೇ ಟೀಕೆಗೊಳಗಾಗುತ್ತಿದ್ದ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ತಣ್ಣಗಾಗಿದ್ದರು.
ಕನಕಗೋಪುರ ವಿವಾದ
ರಥಬೀದಿ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಕನಕಗೋಪುರ ಪುನರ್ ನಿರ್ಮಾಣ ವಿಚಾರದಲ್ಲಿ ಉಂಟಾದ ಗೊಂದಲದ ವೇಳೆ, ಕುರುಬ ಸಮುದಾಯವನ್ನು ಪ್ರತಿನಿಧಿಸಿದ್ದ ಸಿದ್ದರಾಮಯ್ಯ, ಕೃಷ್ಣಮಠದ ವಿರುದ್ದ ಹೋರಾಟ ನಡೆಸಿದ್ದರು. ಅಂದಿನಿಂದ ಕೃಷ್ಣಮಠ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧ ಹಳಸುತ್ತಲೇ ಬಂದಿತ್ತು.
ಕುರುಬ ಸಮುದಾಯದ ಕೋಪ
ಕೃಷ್ಣಮಠಕ್ಕೆ ಭೇಟಿ ನೀಡಿದರೆ ಕುರುಬ ಸಮುದಾಯದ ಕೋಪ ಎದುರಿಸಬೇಕಾದೀತು ಎನ್ನುವ ಜಾತಿ ಸಮೀಕರಣ ಕೂಡಾ, ಸಿದ್ದರಾಮಯ್ಯ ಕೃಷ್ಣಮಠಕ್ಕೆ ಭೇಟಿ ನೀಡದಂತೆ ಮಾಡಿದೆ ಎನ್ನುವ ಮಾತೂ ಕೇಳಿಬರುತ್ತಿದೆ. ಈ ಹಿಂದೆ ಕೃಷ್ಣಮಠದ ಕೂಗಳತೆ ದೂರದಲ್ಲಿನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಭಾಗವಹಿಸಿದ್ದರೂ, ದೇವಾಲಯಕ್ಕೆ ಭೇಟಿ ನೀಡಿರಲಿಲ್ಲ.
ಸಿದ್ದು ಕರೆತರುವ ಪ್ರಯತ್ನದಲ್ಲಿ ಪ್ರಮೋದ್ ಮಧ್ವರಾಜ್
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್, ಮುಖ್ಯಮಂತ್ರಿಗಳನ್ನು ಉಡುಪಿ ದೇವಾಲಯಕ್ಕೆ ಕರೆತರುವ ಸರ್ವ ಪ್ರಯತ್ನದಲ್ಲಿದ್ದಾರೆ. ಈ ಹಿಂದೆ ಕಾಂಗ್ರೆಸ್ ನಲ್ಲಿ ಉನ್ನತ ಹುದ್ದೆಯಲ್ಲಿ, ಅದಕ್ಕಿಂತಲೂ ಹೆಚ್ಚಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಈ ಕಾರ್ಯಕ್ರಮಗಳಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಷ್ಟಾಚಾರ ಪಾಲಿಸುತ್ತಾರೋ, ಇಲ್ಲವೋ ಕಾದುನೋಡಬೇಕಿದೆ.