ರಾಮದಾಸ್ ಪರ ಒಲವು: ಬದಲಾದರೇ ಪ್ರೇಮಕುಮಾರಿ? ಆಕ್ರೋಶಕ್ಕೆ ಕಾರಣವೇನು?
ಮೈಸೂರು, ಫೆಬ್ರವರಿ 8: ಶಾಸಕ ರಾಮದಾಸ್ ಪ್ರೇಮ ಪ್ರಕರಣದಲ್ಲಿ ತೀವ್ರ ಸುದ್ದಿಯಾಗಿದ್ದ ಪ್ರೇಮ ಕುಮಾರಿ ಬದಲಾದರೇ? ರಾಮದಾಸ್ ವಿರುದ್ಧ ದೂರು ಸಲ್ಲಿಸಿದ್ದ ಪ್ರೇಮಕುಮಾರಿ ಅತ್ತ ಕಾನೂನು ಹೋರಾಟ ನಡೆಸುವುದರ ಜತೆಗೇ, ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ವಿಡಿಯೋ ಮಾಡಿ ವಾಗ್ದಾಳಿ ನಡೆಸಿರುವುದು ಈ ಪ್ರಕರಣದ ದಿಕ್ಕು ಬದಲಾಗಿದೆಯೇ ಎಂಬ ಅನುಮಾನ ಮೂಡಿಸುತ್ತಿದೆ.
ತಮ್ಮ ಕಾರಣವನ್ನು ನೆಪವಾಗಿಟ್ಟುಕೊಂಡು ರಾಮದಾಸ್ ಅವರಿಗೆ ಸಚಿವ ಸ್ಥಾನ ನೀಡುತ್ತಿಲ್ಲ. ಯಡಿಯೂರಪ್ಪ ಅವರೇ ತಮ್ಮ ಶಿಷ್ಯನ ಮೂಲಕ ರಾಮದಾಸ್ ಹಾಗೂ ತಮ್ಮನ್ನು ದೂರ ಮಾಡಿದ್ದಾರೆ. ಅವರೊಬ್ಬ ನಾಲಾಯಕ್ ಮುಖ್ಯಮಂತ್ರಿ ಎಂದು ಹರಿಹಾಯ್ದಿರುವ ಪ್ರೇಮಕುಮಾರಿ, ರಾಮದಾಸ್ ಅವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಇದು ಬಿಜೆಪಿ ಸರ್ಕಾರದ ವಿರುದ್ಧದ ಅಸಹನೆ, ಬೇಸರವನ್ನು ಹೊರಹಾಕಿರುವ ವಿಧಾನವೂ ಹೌದು.
ರಾಮದಾಸ್-ಪ್ರೇಮ ಕುಮಾರಿ ಪ್ರೇಮಪ್ರಕರಣಕ್ಕೆ ಸುಮಾರು ಏಳು ವರ್ಷಗಳ ಇತಿಹಾಸವಿದೆ. 2014ರಲ್ಲಿ ಪ್ರೇಮ ಕುಮಾರಿ ಎಂಬುವವರು ಮೈಸೂರಿನ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ರಾಮದಾಸ್ ವಿರುದ್ಧ ದೂರು ನೀಡಿದ್ದರು. 'ನನ್ನನ್ನು ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದರು. ಈಗ ಮದುವೆಯಾಗದೆ ವಂಚನೆ ಮಾಡುತ್ತಿದ್ದಾರೆ' ಎಂದು ಪ್ರೇಮ ಕುಮಾರಿ ಆರೋಪಿಸಿದ್ದರು. ಈ ಪ್ರಕರಣ ರಾಜ್ಯದಾದ್ಯಂತ ಸುದ್ದಿಯಾದಾಗ ರಾಮದಾಸ್ ಆತ್ಮಹತ್ಯೆಗೂ ಯತ್ನಿಸಿದ್ದರು.

ರಾಜಕೀಯದಲ್ಲಿಯೂ ಸೋಲಿನ ಹತಾಶೆ
ನ್ಯೂ ಕಾಂಗ್ರೆಸ್ ಎಂಬ ಪಕ್ಷ ಸೇರಿಕೊಂಡು ರಾಮದಾಸ್ ವಿರುದ್ಧ ಕೆ.ಆರ್ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಹೇಳಿ ಕೊನೆಯ ಕ್ಷಣದಲ್ಲಿ ಜಾರಿಕೊಂಡಿದ್ದರು. ಈ ವೇಳೆ ಅವರು ಮೈಸೂರಿನ ಆರೆಸ್ಸೆಸ್ ಕಚೇರಿಗೂ ಭೇಟಿ ನೀಡಿ ಬೆಂಬಲ ಯಾಚಿಸಿದ್ದರು. ಬಳಿಕ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 16 ಮತ ಪಡೆದು ಹೀನಾಯ ಸೋಲು ಕಂಡಿದ್ದರು.

ಸತ್ತರೂ ರಾಮದಾಸ್ ಬಿಡುವುದಿಲ್ಲ
ತಮ್ಮನ್ನು ಮದುವೆಯಾಗುವಂತೆ ಆಗ್ರಹಿಸಿ ಆಗಾಗ ರಾಮದಾಸ್ ವಿರುದ್ಧ ಪ್ರತಿಭಟನೆ ಮಾಡುತ್ತಿರುವ ಪ್ರೇಮಕುಮಾರಿ, ಅತ್ತ ಕಾನೂನು ಸಮರವನ್ನೂ ಮುಂದುವರಿಸಿದ್ದಾರೆ. ರಾಮದಾಸ್ ನಿವಾಸ, ಕಚೇರಿ ಎದುರು ಹಲವು ಬಾರಿ ಪ್ರತಿಭಟನೆ ನಡೆಸಿರುವ ಅವರು, ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ. ಅದು ಇತ್ಯರ್ಥವಾಗಲು ಸಮಯಬೇಕು. ಅಲ್ಲಿಯವರೆಗೂ ಕಾಯಲು ಸಾಧ್ಯವಿಲ್ಲ. ನಾನು ಕೀಳು ಜಾತಿಯವಳಲ್ಲ. ಅವರ ಜತೆಯೇ ಬದುಕಬೇಕು. ಅವರು ನನ್ನ ಗಂಡ. ನಾನು ಸತ್ತರೂ ರಾಮದಾಸ್ ಅವರನ್ನು ಬಿಡುವುದಿಲ್ಲ ಎಂದು ಹೇಳಿದ್ದರು.

ಒಮ್ಮೆ ಗಂಡ, ಮತ್ತೊಮ್ಮೆ ಬೈಗುಳ
ಒಮ್ಮೆ ವೇಲನ್ನು ಕುತ್ತಿಗೆಗೆ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಾಮದಾಸ್ ಕಚೇರಿಯ ಮುಂಭಾಗದಲ್ಲಿಯೇ ರಂಪಾಟ ನಡೆಸಿದ್ದರು. ರಾಮದಾಸ್ ಗ್ರಹಚಾರ ಬಿಡಿಸುತ್ತೇನೆ. ಮುಂದೆ ಇದೆ ಅವನಿಗೆ ಮಾರಿಹಬ್ಬ ಎಂದು 'ಅವರು' ಎಂಬ ಗೌರವದ ಮಾತುಗಳು ಏಕವಚನಕ್ಕೆ ಬದಲಾಗಿದ್ದಕ್ಕೆ ಅನೇಕ ಉದಾಹರಣೆಗಳಿವೆ. ಆದರೆ ಅವರು ಶನಿವಾರ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರುವ ವಿಡಿಯೋದಲ್ಲಿ ಒಂದು ಕ್ಷಣ ರಾಮದಾಸ್ ಅವರ ಪರವಾಗಿ ನಿಂತಂತೆ ಕಂಡರೂ, ಜೀವ ಇರುವವರೆಗೂ ಅವರನ್ನು ಬಿಡುವುದಿಲ್ಲ, ಹತ್ತು ಜನ್ಮ ಬಂದರೂ ಅವರನ್ನು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಮದುವೆಯೇ ಅಂತಿಮ ಗುರಿ
ರಾಮದಾಸ್ ವಿರುದ್ಧದ ಕಾನೂನು ಹೋರಾಟ ಮಾಡುತ್ತಿರುವ ಪ್ರೇಮ ಕುಮಾರಿ, ಅವರದ್ದು ಮುಖ್ಯ ಗುರಿ ರಾಮದಾಸ್ ಅವರನ್ನು ಮದುವೆಯಾಗುವುದು. ಅದಕ್ಕೆ ರಾಮದಾಸ್ ಒಪ್ಪುತ್ತಿಲ್ಲ. ಇತ್ತ ಅವರಿಗೆ ಸಹಾಯ ಮಾಡಬೇಕೆಂಬ ಮನವಿಗಳಿಗೆ ಬಿಜೆಪಿ ನಾಯಕರೂ ಕಿಮ್ಮತ್ತು ಕೊಡುತ್ತಿಲ್ಲ. ನ್ಯಾಯಾಲಯದ ವಿಚಾರಣೆ ಮುಗಿದು ತೀರ್ಪು ಬರುವುದಕ್ಕೆ ಎಷ್ಟು ವರ್ಷಗಳಾಗುತ್ತವೆಯೋ ಹೇಳಲಾಗದು.
ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಪ್ರೇಮ ಕುಮಾರಿ ಆಗಾಗ ಪ್ರತಿಭಟನೆಗಳು ಮಾಡುತ್ತಿದ್ದಾರೆ. ರಾಜಕೀಯಕ್ಕೂ ಕಾಲಿಟ್ಟಿದ್ದಾರೆ. ರಾಮದಾಸ್ ತಮ್ಮನ್ನು ಮದುವೆಯಾಗುತ್ತಾರೆ ಎಂಬ ನಂಬಿಕೆ ಅವರದು. ಅದಕ್ಕಾಗಿ ತಾಳಿ ಸಿದ್ಧ ಮಾಡಿಕೊಂಡಿರುವುದಾಗಿಯೂ ಹೇಳಿಕೊಂಡಿದ್ದಾರೆ. ರಾಮದಾಸ್ ಅವರನ್ನು ತಮ್ಮ ಗಂಡ ಎಂದೇ ಕರೆದುಕೊಳ್ಳುತ್ತಾರೆ.

ಅಪವಾದ ಬಂದಿದ್ದಕ್ಕೆ ಆಕ್ರೋಶ
ಬಿಜೆಪಿ ನಾಯಕರ ವಿರುದ್ಧ ಪ್ರೇಮಕುಮಾರಿ ಸಿಡಿದೇಳುತ್ತಿರುವುದು ಇದು ಹೊಸದೇನಲ್ಲ. ರಾಮದಾಸ್ ವಿರುದ್ಧ ವಾಗ್ದಾಳಿ ನಡೆಸುವ ಅವರು, ಇಂದು ಅವರ ಪರವಾಗಿ ಹೇಳಿಕೆ ನೀಡಿದ್ದಾರೆ. ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ಸಿಗದಿರಲು ಪ್ರೇಮಕುಮಾರಿ ಕಾರಣ ಎಂದು ಯಡಿಯೂರಪ್ಪ ಹೇಳಿದ್ದಾರೆ ಎನ್ನುವ ಆರೋಪ ಅವರದು. ಹೀಗಾಗಿ ಸಚಿವ ಸ್ಥಾನ ವಂಚನೆಗೆ ತಮ್ಮ ಮೇಲೆ ಅಪವಾದ ಬಂದಿರುವುದಕ್ಕೆ ಆಕ್ರೋಶ ಹೊರಹಾಕಿದ್ದಾರೆ. ವೀರಶೈವ ಹೆಣ್ಣುಮಗಳಿಗೆ ನ್ಯಾಯ ಕೊಡಿಸದವರು ಅಧಿಕಾರದಲ್ಲಿ ಇರಲು ನಾಲಾಯಕ್ ಎಂದು ಜಾತಿ ವಿಚಾರವನ್ನೂ ತಂದಿದ್ದಾರೆ. ಹಾಗೆಯೇ ತಮ್ಮ ಮತ್ತು ರಾಮದಾಸ್ ನಡುವಿನ ಸಂಬಂಧ ಒಡೆಯಲು ಯಡಿಯೂರಪ್ಪ ಅವರೇ ಕಾರಣ ಎಂದು ಸಹ ಆರೋಪಿಸಿದ್ದಾರೆ. ತಮ್ಮ ಶಿಷ್ಯನ ಮೂಲಕ ಸಂಸಾರ ಒಡೆಸಿದ್ದಾರೆ ಎನ್ನುವ ಅವರು ಆ 'ಶಿಷ್ಯ'ನ ಹೆಸರನ್ನು ಉಲ್ಲೇಖಿಸಿಲ್ಲ.

ಯಡಿಯೂರಪ್ಪ ವಿರುದ್ಧ ಆಕ್ರೋಶ
ಪ್ರೇಮಕುಮಾರಿ ಬಿಡುಗಡೆ ಮಾಡಿರುವ 9.21 ನಿಮಿಷಗಳ ವಿಡಿಯೋದಲ್ಲಿ ರಾಮದಾಸ್ ಮತ್ತು ತಮ್ಮ ಸಂಬಂಧಕ್ಕಿಂತಲೂ ಹೆಚ್ಚಾಗಿ ಯಡಿಯೂರಪ್ಪ ಹಾಗೂ ಅವರ ಸರ್ಕಾರದ ವಿರುದ್ಧದ ವಾಗ್ದಾಳಿಯನ್ನೇ ಹೆಚ್ಚು ನಡೆಸಿದ್ದಾರೆ. ಗಂಡ ರಾಮದಾಸ್ ಕಾರಣದಿಂದ ಬಿಜೆಪಿಯನ್ನು ಬೆಂಬಲಿಸಿದ್ದೇನೆ. ಪ್ರಕರಣವೇ ಬೇರೆ, ಪಕ್ಷದ ಸಿದ್ಧಾಂತಗಳೇ ಬೇರೆ. ಆದರೆ ನನ್ನ ಹಾಗೂ ರಾಮದಾಸ್ ಅವರನ್ನು ಒಂದುಗೂಡಿಸುವ ವಿಚಾರದಲ್ಲಿ ಯಡಿಯೂರಪ್ಪ ಮತ್ತು ಪಕ್ಷ ಯಾವುದೇ ಬೆಂಬಲ ನೀಡಲಿಲ್ಲ. ಈಗ ರಾಮದಾಸ್ ಅವರಿಗೆ ನನ್ನ ಕಾರಣ ಮುಂದಿಟ್ಟುಕೊಂಡು ಸಚಿವ ಸ್ಥಾನವನ್ನೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರೇಮಕುಮಾರಿ ಆಕ್ರೊಶಕ್ಕೆ ಕಾರಣವೇನು?
ಪ್ರೇಮಕುಮಾರಿ ಅವರ ಮಾತುಗಳನ್ನು ಕೇಳಿದಾಗ, ಅವರು ರಾಮದಾಸ್ ಅವರ ಮೇಲಿನ ಒಲವಿನ ಕಾರಣಕ್ಕಾಗಿ ಅವರಿಗೆ ಸಚಿವ ಸ್ಥಾನ ತಪ್ಪಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದೆನಿಸುವುದಿಲ್ಲ. ರಾಮದಾಸ್ ಅವರಿಗೆ ಸಚಿವ ಸ್ಥಾನ ತಪ್ಪಲು ಪ್ರೇಮ ಕುಮಾರಿ ಅವರೇ ಕಾರಣ ಎಂದು ಬಿಜೆಪಿ ವಲಯದಲ್ಲಿ ಮಾತುಗಳು ಕೇಳಿಬರುತ್ತಿರುವುದು ಅವರನ್ನು ಕೆರಳಿಸಿದೆ. ವಿನಾಕಾರಣ ತಮ್ಮ ಮೇಲೆ ಈ ಆರೋಪ ಬಂದಿರುವುದನ್ನು ಅವರಿಗೆ ಸಹಿಸಲು ಸಾಧ್ಯವಾಗಿಲ್ಲ. ಹೀಗಾಗಿಯೇ ಯಡಿಯೂರಪ್ಪ ವಿರುದ್ದ ನೇರಾನೇರ ವಾಗ್ದಾಳಿ ನಡೆಸಿದ್ದಾರೆ ಎಂದು ಹೇಳಲಾಗಿದೆ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications