ಕೊರೊನಾ : ಮಸೀದಿಗಳಲ್ಲಿ ಪ್ರತಿದಿನ ಮತ್ತು ಶುಕ್ರವಾರದ ನಮಾಜ್ಗೆ ನಿಷೇಧ
ಬೆಂಗಳೂರು, ಮಾರ್ಚ್ 23 : ಕರ್ನಾಟಕದಲ್ಲಿ ಕೊರೊನಾ ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮಸೀದಿಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಪ್ರತಿದಿನ ಮತ್ತು ಶುಕ್ರವಾರದ ಪ್ರಾರ್ಥನೆಗೆ ನಿಷೇಧ ಹೇರಲಾಗಿದೆ.
ಸೋಮವಾರ ಅಲ್ಪ ಸಂಖ್ಯಾತ ಅಭಿವೃದ್ಧಿ ಮತ್ತು ವಕ್ತ್ ಬೋರ್ಡ್ ಕಾರ್ಯದರ್ಶಿ ಎ. ಬಿ. ಇಬ್ರಾಹಿಂ ಈ ಕುರಿತು ಆದೇಶ ಹೊರಡಿಸಿದ್ದಾರೆ. ಮಾರ್ಚ್ 31ರ ತನಕ ಮಸೀದಿಗಳಲ್ಲಿ ಪ್ರತಿದಿನದ ಪ್ರಾರ್ಥನೆ, ಶುಕ್ರವಾರದ ಪ್ರಾರ್ಥನೆಯನ್ನು ನಿಷೇಧಿಸಲಾಗಿದೆ.

ಸೌದಿ ಅರೇಬಿಯಾ ಸೇರಿದಂತೆ ಇತರ ಮುಸ್ಲಿಂ ರಾಷ್ಟ್ರಗಳು ಈಗಾಗಲೇ ಪ್ರಾರ್ಥನೆಗೆ ನಿಷೇಧ ಹೇರಿವೆ. ಇದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮಸೀದಿಗಳಲ್ಲಿ ಪ್ರಾರ್ಥನೆ ಸಲ್ಲಿಸುವುದುನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಶುಕ್ರವಾರದ ಪ್ರಾರ್ಥನೆಗೆ ನೂರಾರು ಜನರು ಮಸೀದಿಯಲ್ಲಿ ಸೇರುತ್ತಾರೆ. ಆಗ ಎಲ್ಲರೂ ಹತ್ತಿರದಲ್ಲಿರುತ್ತಾರೆ. ಎಸಿ, ಕೂಲರ್ಗಳು ಕಾರ್ಯ ನಿರ್ವಹಿಸುತ್ತಿರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಕೊರೊನಾ ಹಬ್ಬುವ ಸಾಧ್ಯತೆ ಹೆಚ್ಚಿರುವುದರಿಂದ ಪ್ರಾರ್ಥನೆಗೆ ನಿಷೇಧ ಹೇರಲಾಗಿದೆ.
ಕರ್ನಾಟಕದಲ್ಲಿ ಇದುವರೆಗೂ 27 ಕೋವಿಡ್-19 ಪ್ರಕರಣಗಳು ದಾಖಲಾಗಿವೆ. ಒಬ್ಬ ವ್ಯಕ್ತಿ ಮರಣ ಹೊಂದಿದ್ದಾನೆ. ಧಾರ್ಮಿಕ ಮುಖಂಡರ ಜೊತೆ ಮಾತುಕತೆ ನಡೆಸಿ, ಮಂಗಳೂರಿನ ಖಾಜಿಗಳ ಜೊತೆಗೂ ಮಾತುಕತೆ ನಡೆಸಿ ಮನೆಯಲ್ಲಿಯೇ ಪ್ರಾರ್ಥನೆ ಸಲ್ಲಿಸುವ ತೀರ್ಮಾನಕ್ಕೆ ಬರಲಾಗಿದೆ.
ಜನರ ಆರೋಗ್ಯದ ಹಿತದೃಷ್ಟಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ಪ್ರತಿದಿ, ಶುಕ್ರವಾರದ ನಮಾಜ್ಗಳನ್ನು ನಿಷೇಧಿಸಲಾಗಿದೆ. ಜಿಲ್ಲಾ ವಕ್ತ್ ಬೋರ್ಡ್ ಅಧಿಕಾರಿಗಳು ಈ ಆದೇಶ ಕಟ್ಟುನಿಟ್ಟಾಗಿ ಜಾರಿಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.












Click it and Unblock the Notifications