ಭೂಗಳ್ಳರ ವಿರುದ್ಧದ ಕಾಯ್ದೆಗೆ ರಾಷ್ಟ್ರಪತಿ ಒಪ್ಪಿಗೆ
ಬೆಂಗಳೂರು, ಅ. 17 : ಭೂಗಳ್ಳರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಾಗೂ ಒತ್ತುವರಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಲು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಪ್ಪಿಗೆ ನೀಡಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಟಿ.ಬಿ.ಜಯಚಂದ್ರ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಮಾತನಾಡಿದ ಸಚಿವ ಟಿ.ಬಿಜಯಚಂದ್ರ ಅವರು, ಭೂ ಕಬಳಿಕೆದಾರರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಹಾಗೂ ಈ ಸಂಬಂಧಿ ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ವಿಶೇಷ ನ್ಯಾಯಾಲಯ ಸ್ಥಾಪಿಸಲು ಅವಕಾಶ ನೀಡುವ 'ಭೂ ಕಬಳಿಕೆ ನಿಯಂತ್ರಣ ಕಾಯ್ದೆ'ಗೆ ರಾಷ್ಟ್ರಪತಿಗಳ ಒಪ್ಪಿಗೆ ಸಿಕ್ಕಿದೆ ಎಂದರು. [ಚರ್ಚ್ ದಾಳಿ ವರದಿ ತಿರಸ್ಕರಿಸಿದ ಸಚಿವ ಸಂಪುಟ]
ಈ ಕಾಯ್ದೆಗೆ ಒಪ್ಪಿಗೆ ನೀಡುವಂತೆ ತಾವು ನಡೆಸಿದ ಸತತ ಪ್ರಯತ್ನದ ನಂತರ ರಾಷ್ಟ್ರಪತಿ ಅವರು ಒಪ್ಪಿಗೆ ನೀಡಿದ್ದಾರೆ ಎಂಬ ಮಾಹಿತಿ ಅಧಿಕಾರಿಗಳಿಂದ ಬಂದಿದೆ. ಒಪ್ಪಿಗೆ ದೊರೆತ ಕಾಯ್ದೆ ಪ್ರತಿ ಒಂದೆರಡು ದಿನಗಳಲ್ಲಿ ದೊರೆಯಲಿದ್ದು, ಅನಂತರ ಈ ಬಗ್ಗೆ ಸಂಪೂರ್ಣ ವಿವರ ನೀಡಲಾಗುವುದು ಎಂದು ಹೇಳಿದರು. [ಭೂ ಒತ್ತುವರಿ ತೆರವಿಗೆ ಕ್ರಮ]

ಸಚಿವ ಸಂಪುಟ ಸಭೆಯ ನಿರ್ಣಯಗಳು
* 2014-15ರ ಬಜೆಟ್ನಲ್ಲಿ ಘೋಷಿಸಿದ್ದ ಅಪಘಾತಕ್ಕೆ ಒಳಗಾದವರಿಗೆ ತುರ್ತು ಚಿಕಿತ್ಸೆಗಾಗಿ 25 ಸಾವಿರ ರೂ.ವರೆಗೆ ಆರ್ಥಿಕ ನೆರವು ನೀಡುವ ಮುಖ್ಯಮಂತ್ರಿಯವರ ಸಾಂತ್ವನ ಯೋಜನೆಗೆ ಒಪ್ಪಿಗೆ ದೊರೆತಿದೆ. ಯೋಜನೆ ಅನುಷ್ಠಾನಕ್ಕಾಗಿ ಸುವರ್ಣ ಆರೋಗ್ಯ ಟ್ರಸ್ಟ್ಅನ್ನು ರಚಿಸಲಿದ್ದು, ಈ ಟ್ರಸ್ಟ್ ಯೋಜನೆ ವ್ಯಾಪ್ತಿಗೆ ಒಳಪಡುವ ಆಸ್ಪತ್ರೆಗಳನ್ನು ಗುರುತಿಸಲಿದೆ. ಈ ಯೋಜನೆಗಾಗಿ 5 ಕೋಟಿ ರೂ. ಮಂಜೂರು ಮಾಡಲಾಗಿದೆ.
* ಬೆಂಗಳೂರಿನ ಮೈಲಸಂದ್ರದಲ್ಲಿ ಡಾ. ವಿಷ್ಣುವರ್ಧನ್ ಸ್ಮಾರಕ ನಿರ್ಮಾಣ ಮಾಡಲು 11 ಕೋಟಿ ರೂ. ನೆರವು, ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಸಮೀಪದ ಆಳ್ವೆಕೋಡಿ ಬಳಿ ಮೀನುಗಾರಿಕೆ ಇಳಿದಾಣ ಕೇಂದ್ರ ಸ್ಥಾಪನೆಗೆ 5 ಕೋಟಿ ರೂ. ಮಂಜೂರು.
* ಕನ್ನಡ ಪರೀಕ್ಷೆ ತೆಗೆದುಕೊಂಡು ತೇರ್ಗಡೆಯಾದ ರಾಜ್ಯ ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಒಂದು ಹೆಚ್ಚುವರಿ ಬಡ್ತಿಯನ್ನು ನೀಡಲು ತೀರ್ಮಾನ. ಅನುದಾನಿತ ಪಾಲಿಟೆಕ್ನಿಕ್ ವೇತನ ಪರಿಷ್ಕಾರ ಹಾಗೂ ಸೀಟು ಹಂಚಿಕೆಯು 2012ನೇ ಸಾಲಿನಲ್ಲಿ ಇದ್ದಂತೆ ಮುಂದುವರೆಸಬೇಕು ಎಂಬ ಆದೇಶ ಪಾಲನೆಗೆ ತೀರ್ಮಾನ.
* ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲೂ ಕಡತ ಯಜ್ಞ ನಡೆಸಲು ತೀರ್ಮಾನ. ಈ ಬಗೆಗಿನ ರೂಪರೇಷೆ ಸಿದ್ದಪಡಿಸಲು ಮುಖ್ಯ ಕಾರ್ಯದರ್ಶಿಯವರಿಗೆ ಸೂಚನೆ.
* ಆರ್ಟ್ ಆಫ್ ಲೀವಿಂಗ್ನ ಶ್ರೀ ರವಿಶಂಕರ್ ಗುರೂಜಿ ಅವರಿಗೆ ಸೇರಿದ ರವಿಶಂಕರ್ ವಿದ್ಯಾಟ್ರಸ್ಟ್ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳಿಗೆ ವಾಣಿಜ್ಯ ಹಾಗೂ ಶೈಕ್ಷಣಿಕ ಉದ್ದೇಶದ ಬಳಕೆಗಾಗಿ ಸುಮಾರು 250 ಎಕರೆಗೂ ಹೆಚ್ಚು ಕೃಷಿ ಜಮೀನಿನ ಭೂ ಪರಿವರ್ತನೆಗೆ ಸಂಪುಟ ಒಪ್ಪಿಗೆ ನೀಡಿದೆ.
* ನಿವೃತ್ತ ಐಎಎಸ್ ಅಧಿಕಾರಿ ಪಿ.ಎನ್. ಶ್ರೀನಿವಾಸಾಚಾರಿ ಅವರನ್ನು ರಾಜ್ಯ ಚುನಾವಣಾಧಿಕಾರಿಯಾಗಿ ನೇಮಕ ಮಾಡಲು ಸಂಪುಟ ಒಪ್ಪಿಗೆ ನೀಡಿದ್ದು, ಈ ಕುರಿತ ಆದೇಶ ಶೀಘ್ರದಲ್ಲೇ ಹೊರಬೀಳಲಿದೆ.












Click it and Unblock the Notifications