ಚಿತ್ರಗಳು : ಕೇಂದ್ರೀಯ ವಿವಿ ಘಟಿಕೋತ್ಸವದಲ್ಲಿ ಪ್ರಣಬ್ ಭಾಷಣ
ಕಲಬುರಗಿ, ಡಿಸೆಂಬರ್ 23 : 'ಸಂಸದರ ಆದರ್ಶ ಗ್ರಾಮ ಯೋಜನೆಯ ಮಾದರಿಯಲ್ಲಿ ದೇಶದಲ್ಲಿರುವ ಎಲ್ಲ 41 ಕೇಂದ್ರೀಯ ವಿಶ್ವವಿದ್ಯಾಲಯಗಳು ಕನಿಷ್ಟ 5 ಗ್ರಾಮಗಳನ್ನು ದತ್ತು ಪಡೆದು ಮಾದರಿ ಗ್ರಾಮಗಳನ್ನಾಗಿ ರೂಪಿಸಬೇಕೆಂದು' ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೆ ನೀಡಿದ್ದಾರೆ.
ಮಂಗಳವಾರ ಕಲಬುರಗಿಯ ಇ.ಎಸ್.ಐ.ಸಿ ಆಸ್ಪತ್ರೆಯ ಸಭಾಂಗಣದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಎರಡನೇ ಘಟಿಕೋತ್ಸವದಲ್ಲಿ ಪಾಲ್ಗೊಂಡು, ಘಟಿಕೋತ್ಸವ ಭಾಷಣ ಮಾಡಿದ ಪ್ರಣಬ್ ಮುಖರ್ಜಿ ಅವರು, 'ವಿಶ್ವವಿದ್ಯಾಲಯಗಳು ಸಂಪನ್ಮೂಲ ವ್ಯಕ್ತಿ ಮತ್ತು ತಜ್ಞರನ್ನು ಸಂಘಟಿಸುವ ಮೂಲಕ ದತ್ತು ಪಡೆಯುವ ಗ್ರಾಮಗಳ ಸಮಸ್ಯೆಗಳನ್ನು ಪರಿಹಾರ ಮಾಡಬೇಕು' ಎಂದು ಸಲಹೆ ನೀಡಿದರು. [ಕರ್ನಾಟಕದ ಸಂಸದರು ದತ್ತು ಪಡೆದ ಗ್ರಾಮಗಳು]
ಘಟಿಕೋತ್ಸವದಲ್ಲಿ 2011ರಿಂದ ಈವರೆಗೆ ಐಎಂಎ, ಐಎಂಎಸ್ಸಿ, ಬಿಬಿಎ, ಎಂಎ, ಎಂಎಸ್ಸಿ, ಎಂಎಸ್ಡಬ್ಲ್ಯೂ, ಎಂಕಾಂ, ಎಂಬಿಎ, ಎಂಸಿಎ ಮತ್ತು ಎಂಫಿಲ್ಗಳಲ್ಲಿ ಪದವಿ ಪಡೆದ ಒಟ್ಟು 744 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. [ಡಿ.22, 23ರಂದು ಪ್ರಣಬ್ ಕರ್ನಾಟಕ ಪ್ರವಾಸ]
ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ.ಮಹಶ್ವೇರಯ್ಯ, ಪೌರಾಡಳಿತ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಉಪಸ್ಥಿತರಿದ್ದರು. ರಾಷ್ಟ್ರಪತಿಗಳ ಭಾಷಣದ ಮುಖ್ಯಾಂಶಗಳು ಚಿತ್ರಗಳಲ್ಲಿ....

'ಗ್ರಾಮಗಳ ಸಮಸ್ಯೆ ಪರಿಹಾರ ಮಾಡಬೇಕು'
'ಭಾರತದಂತಹ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳು ಸದೃಢ ಶಿಕ್ಷಣದ ಆಧಾರದ ಮೇಲೆ ಬಡತನ ನಿರ್ಮೂಲನೆ, ಸಾಮಾಜಿಕ ಅಸ್ವಸ್ಥತೆ ಮತ್ತು ಅರ್ಥಿಕ ಸಂಕ್ಷೋಭೆಯನ್ನು ಹೊಡೆದೋಡಿಸಲು ಪ್ರಯತ್ನಿಸುತ್ತಿವೆ. ವಿವಿಗಳು ಗ್ರಾಮಗಳನ್ನು ದತ್ತು ಪಡೆಯುವ ಮೂಲಕ ಅಲ್ಲಿನ ಸಮಸ್ಯೆಗಳನ್ನು ಪರಿಹಾರ ಮಾಡಬೇಕು'.

'ಸಂಶೋಧನೆಗಳು ನಡೆಯಬೇಕು'
'ದೇಶದಲ್ಲಿ ನವೀಕರಿಸಬಹುದಾದ ಇಂಧನ, ಹವಾಮಾನ ಬದಲಾವಣೆ, ಕುಡಿಯುವ ನೀರು, ನೈರ್ಮಲ್ಯ ಮತ್ತು ನಗರೀಕರಣದಂತಹ ವಿವಿಧ ಸವಾಲುಗಳಿಗೆ ಸಂಶೋಧನಾಧಾರಿತ ಸೂಕ್ತ ಪರಿಹಾರ ಕಂಡುಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ವಿಶ್ವವಿದ್ಯಾಲಯಗಳು ಪದವಿ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿ ಸೃಜನಶೀಲ ಅನ್ವೇಷಣೆ, ಸಂಶೋಧನೆ ಮತ್ತು ಉನ್ನತ ತಂತ್ರಜ್ಞಾನ ಕೈಗೊಳ್ಳಲು ಭದ್ರ ಬುನಾದಿಯ ವಾತಾವರಣ ಸೃಷ್ಟಿಸಬೇಕು'.

'ಸಾಮಾಜಿಕ ಪರಿವರ್ತನೆಯ ವಾಹಕ'
'ಕೇಂದ್ರೀಯ ವಿಶ್ವವಿದ್ಯಾಲಯಗಳು ಜ್ಞಾನ, ನಾವೀನ್ಯತೆ, ಪರಿಸರ ಸಂರಕ್ಷಣೆ ಮತ್ತು ಕೌಶಲ್ಯಾಭಿವೃದ್ಧಿಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಮೂಲಕ ತಮ್ಮ ಪ್ರದೇಶದಲ್ಲಿ ಸಾಮಾಜಿಕ ಪರಿವರ್ತನೆಯ ವಾಹಕವಾಗಿ ಹೊರಹೊಮ್ಮಬೇಕು. ಸ್ಥಳೀಯ ಯುವ ಜನತೆಯಲ್ಲಿ ಉದ್ಯೋಗ ವೃದ್ಧಿಸುವತ್ತ ಗಮನ ಹರಿಸಬೇಕು'.

'ಗುಣಮಟ್ಟದ ಶಿಕ್ಷಣ ಪೂರೈಸುವ ಸವಾಲು'
'2016ನೇ ಸಾಲಿನಲ್ಲಿ ದೇಶದ 40 ಕೋಟಿ ವಿದ್ಯಾರ್ಥಿಗಳು ವಿವಿಧ ಹಂತದ ಶಿಕ್ಷಣ ಪಡೆಯುವ ಸಾಧ್ಯತೆಯಿದ್ದು, ನಮ್ಮ ಶೈಕ್ಷಣಿಕ ವ್ಯವಸ್ಥೆಯು ಪ್ರವೇಶ, ಶಕ್ತಿ ಮತ್ತು ಗುಣಮಟ್ಟದ ಶಿಕ್ಷಣ ಪೂರೈಸುವ ಸವಾಲು ಹೊಂದಿದೆ. ದೇಶದ 30 ಕೋಟಿ ಯುವಕರಿಗೆ 2022ರ ವೇಳೆಗೆ ಕೌಶಲ್ಯ ತರಬೇತಿ ನೀಡುವ ಯೋಜನೆ ರೂಪಿಸಬೇಕಿದೆ. ಔಪಚಾರಿಕ ಮತ್ತು ವೃತ್ತಿಪರ ಶಿಕ್ಷಣದಲ್ಲಿ ಮೊಬೈಲ್ ಫೋನ್ ತಂತ್ರಜ್ಞಾನ ಸಹಕಾರಿಯಾಗಿದೆ'.

'ಉನ್ನತ ಸ್ಥಾನ ಪಡೆದಿಲ್ಲ'
ದೇಶದಲ್ಲಿ 16 ಐಐಐಟಿ, 13 ಐಐಟಿ, 41 ಕೇಂದ್ರೀಯ ವಿಶ್ವವಿದ್ಯಾಲಯಗಳು ಸೇರಿದಂತೆ ಅನೇಕ ಉನ್ನತ ಶಿಕ್ಷಣ ಸಂಸ್ಥೆಗಳಿದ್ದರೂ ವಿಶ್ವದ ಅಗ್ರ 200 ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಭಾರತದ ಎರಡು ವಿಶ್ವವಿದ್ಯಾಲಯಗಳು ಇದೀಗ 200 ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದು, ಮುಂದೆ ಈ ಪಟ್ಟಿಯಲ್ಲಿ ಅನೇಕ ಸಂಸ್ಥೆಗಳು ಸೇರ್ಪಡೆಯಾಗುವ ವಿಶ್ವಾಸವಿದೆ'.

ಯಾರು-ಯಾರು ಪಾಲ್ಗೊಂಡಿದ್ದರು?
ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ.ಮಹಶ್ವೇರಯ್ಯ, ಪೌರಾಡಳಿತ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಖಮರುಲ್ ಇಸ್ಲಾಂ, ಲೋಕಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಘಟಿಕೋತ್ಸವದಲ್ಲಿ ಪಾಲ್ಗೊಂಡಿದ್ದರು.











Click it and Unblock the Notifications