ಉದ್ಯೋಗಿಗಳಿಗೆ ಪತ್ರ : ಸಿದ್ದಾರ್ಥ ಸಹಿ ಎಫ್ಎಸ್ಎಲ್ಗೆ ರವಾನೆ
ಬೆಂಗಳೂರು, ಆಗಸ್ಟ್ 06 : ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ ಸಾವಿನ ತನಿಖೆ ನಡೆಸುತ್ತಿರುವ ಪೊಲೀಸರು ಅವರ ಸಹಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಿದ್ದಾರೆ. ಸಿದ್ದಾರ್ಥ ಅವರು ಬರೆದಿದ್ದಾರೆ ಎನ್ನಲಾದ ಪತ್ರದಲ್ಲಿನ ಸಹಿ ಬಗ್ಗೆ ಭಾರಿ ಚರ್ಚೆ ನಡೆದಿತ್ತು.
ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಸಿದ್ದಾರ್ಥ ಸಹಿ ಇರುವ ಹಲವು ದಾಖಲಾತಿಗಳನ್ನು ಪೊಲೀಸರು ಪರೀಕ್ಷೆಗಾಗಿ ಕಳಿಸಿದ್ದಾರೆ. ಪ್ರಯೋಗಾಲಯದ ಕ್ಯೂಡಿಇ ವಿಭಾಗದ ಸಹಿಯ ಬಗ್ಗೆ ಪರೀಕ್ಷೆ ನಡೆಸಲಿದೆ.
ಜುಲೈ 27ರಂದು ವಿ. ಜಿ. ಸಿದ್ದಾರ್ಥ ಕಂಪನಿ ಉದ್ಯೋಗಿಗಳಿಗೆ ಬರೆದಿದ್ದಾರೆ ಎನ್ನಲಾದ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಆದರೆ, ಈ ಪತ್ರದಲ್ಲಿರುವ ಸಹಿ ಸಿದ್ದಾರ್ಥ ಅವರದ್ದು ಅಲ್ಲ ಎಂಬುವ ಅನುಮಾನ ಹುಟ್ಟಿಕೊಂಡಿತ್ತು.

ಕೆಫೆ ಕಾಫಿ ಡೇ ಆಡಳಿತ ಮಂಡಳಿ ಸಹ ಸಿದ್ದಾರ್ಥ ಸಹಿ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿತ್ತು. ಮತ್ತೊಂದು ಕಡೆ ಸಿದ್ದಾರ್ಥ ಕುರಿತು ತನಿಖೆ ನಡೆಸುತ್ತಿರುವ ಪೊಲೀಸರ 4 ತಂಡ ಸಿದ್ದಾರ್ಥ ಸಹಿ ಇರುವ ಹಲವು ದಾಖಲೆಗಳನ್ನು ವಶಕ್ಕೆ ಪಡೆದಿದೆ. ಅದನ್ನು ಎಫ್ಎಸ್ಎಲ್ಗೆ ರವಾನೆ ಮಾಡಿದೆ.
"ನಾನು ವಿಫಲನಾದೆ. ಒಬ್ಬ ಗೆಳೆಯ, ಒಬ್ಬ ಮಾಜಿ ಐಟಿ ಅಧಿಕಾರಿ ನನಗೆ ಒತ್ತಡ ಹೇರುತ್ತಿದ್ದಾರೆ. ವ್ಯವಹಾರ ಸಾಧ್ಯವಾಗದ ಸ್ಥಿತಿ ತಲುಪಿದ್ದೇನೆ" ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ಈ ಪತ್ರವನ್ನು ಸಿದ್ದಾರ್ಥ ಅವರೇ ಬರೆದಿದ್ದಾರೆಯೇ? ಎಂಬುದು ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಳಿಕ ತಿಳಿದುಬರಲಿದೆ.












Click it and Unblock the Notifications