2024ರ ಚುನಾವಣೆಯಲ್ಲಿ ರಾಜ್ಯದ ಮತದಾರ ಮೋದಿಯವರನ್ನ ಗೆಲ್ಲಿಸಲು ಕಾಯುತ್ತಿದ್ದಾರೆ: ತೇಜಸ್ವಿ ಸೂರ್ಯ
ಬೆಂಗಳೂರು, ಆಗಸ್ಟ್ 31: 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರನ್ನ ಗೆಲ್ಲಿಸಲು ರಾಜ್ಯದ ಜನತೆ ಕಾಯುತ್ತಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ಹಾಗೂ ಸಂಸದ ತೇಜಸ್ವಿ ಸೂರ್ಯ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಹೇಳಿದರು.
ಈ ಸರ್ಕಾರದ ವೈಫಲ್ಯಗಳಿಂದ ಜನ ಬೇಸತ್ತಿದ್ದಾರೆ. ಕಾವೇರಿ ವಿಚಾರವಾಗಿ ಸರ್ಕಾರದ ಧೋರಣೆಯಿಂದ ಜನ ಬೇಸತ್ತಿದ್ದಾರೆ, ಎರಡು ಬಾರಿ ಕಾವೇರಿ ಅಥಾರಿಟಿ ಎದುರು ನಮಗೆ ಸೋಲಾಗಿದೆ ಬೆಂಗಳೂರಿನಲ್ಲಿ ಕುಡಿಯುವ ನೀರಿಗೂ ಸಂಕಷ್ಟ ಆಗಲಿದೆ. ನಮ್ಮ ಮಂಡ್ಯ ಭಾಗದಲ್ಲಿ ಒಂದು ಬೆಳೆಬೆಳೆಯಲು ಕಷ್ಟವಾಗಿದೆ. ರಾಜ್ಯದ ಜನತೆಗೆ ಈ ಗ್ಯಾರಂಟಿಗಳನ್ನ ಸುಳ್ಳು ಭರವಸೆಯನ್ನ ಕೊಟ್ಟು ಜನತೆಗೆ ಮೋಸ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿರು.

ಬಿಜೆಪಿ ನೇತೃತ್ವದ ಸ್ಥಿರ ಕೇಂದ್ರ ಸರಕಾರದಿಂದ ದೇಶದ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ. 2014 ಮತ್ತು 2019 ಚುನಾವಣೆಗಳು ದೇಶಕ್ಕೆ ಸ್ಥಿರ ಸರಕಾರವನ್ನು ನೀಡಿವೆ. 2009ರ ಚುನಾವಣೆಗೆ ಹೋಲಿಸಿದರೆ ಸುಮಾರು ಶೇ 12 ಯುವ ಮತದಾರರು ಹೆಚ್ಚುವರಿಯಾಗಿ ಮತದಾನ ಮಾಡಿದ್ದರು. ಅವರು ಬಿಜೆಪಿ, ಮೋದಿಜಿ ಅವರಿಗೆ ಮಾಡಿದ ಆಶೀರ್ವಾದದಿಂದ 34 ವರ್ಷದ ಬಳಿಕ ಪ್ರಥಮವಾಗಿ ಈ ದೇಶದಲ್ಲಿ ಸ್ಥಿರ, ಸದೃಢ ಸರಕಾರ ದೇಶದಲ್ಲಿ ಬಂತು ಎಂದು ಹೇಳಿದರು.
ಸ್ಥಿರ, ಸದೃಢ ಸರಕಾರದ ಫಲವಾಗಿ ಕಳೆದ 9 ವರ್ಷಗಳಲ್ಲಿ ದೇಶದಲ್ಲಿ ಎಲ್ಲ ಕ್ಷೇತ್ರಗಳಲ್ಲಿ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಾಗಿದೆ ಎಂದ ಅವರು, ಮುಂದಿನ ಕೆಲವು ತಿಂಗಳಿನಲ್ಲಿ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪರಿಷ್ಕರಿಸಲಿದ್ದು, ಅದಕ್ಕೆ ಬಿಜೆಪಿ ಸಹಕಾರ ಕೊಡಲಿದೆ ಎಂದರು.
50 ಕೋಟಿ ಬಡಜನರ ಜನ್ಧನ್ ಬ್ಯಾಂಕ್ ಖಾತೆ ತೆರೆಯಲು ಮತದಾರರು ನೆರವಾಗಿದ್ದಾರೆ. 29 ಲಕ್ಷ ಡಿಬಿಟಿ ಹಣ ವರ್ಗಾವಣೆ ಆಗಿದೆ. 4.5 ಕೋಟಿ ಬಡಜನರಿಗೆ ಮನೆಗಳ ನಿರ್ಮಾಣವಾಗಿದೆ. ದೇಶದ ಹಳ್ಳಿಗಳಲ್ಲಿ ಸ್ವಚ್ಛ ಭಾರತ್ ಅಡಿಯಲ್ಲಿ 11 ಕೋಟಿ ಶೌಚಾಲಯ ನಿರ್ಮಾಣ ಮಾಡಿಸಲು ಮತದಾರರು ತಮ್ಮ ಮತದ ಮೂಲಕ ಅವಕಾಶ ಕೊಟ್ಟಿದ್ದಾರೆ. 23 ಕೋಟಿ ಬಡ ಕುಟುಂಬಗಳಿಗೆ ಆಯುಷ್ಮಾನ್ ವಿಮೆ ಲಭಿಸಿದೆ. 20 ಕೋಟಿ ಎಸ್ಸಿ, ಎಸ್ಟಿ, ಒಬಿಸಿ ಮಹಿಳೆಯರಿಗೆ ಮುದ್ರಾ ಯೋಜನೆಯಡಿ ಸಾಲ ಲಭಿಸಿದೆ ಎಂದು ತಿಳಿಸಿದರು..
ಒಂದು ಮತದ ಫಲವಾಗಿ ಭಾರತ ಚಂದ್ರಯಾನ ಮಾಡಿ ದೇಶದ, ವಿಶ್ವದ ದಕ್ಷಿಣ ಧ್ರುವಕ್ಕೆ ತೆರಳಿದ ಮೊದಲ ದೇಶ ಎಂಬ ಕೀರ್ತಿಯನ್ನು ತನ್ನದಾಗಿಸಿಕೊಂಡಿದೆ. ಪಾಕಿಸ್ತಾನದ ಒಳಗೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಮಾಡುವ ಶಕ್ತಿ ದೇಶಕ್ಕೆ ಸಿಕ್ಕಿದೆ. 500 ವರ್ಷಗಳಿಂದ ಜನರು ಕಾಯುತ್ತಿದ್ದ ಶ್ರೀರಾಮಮಂದಿರದ ನಿರ್ಮಾಣ ಆಗಿದೆ. ಆರ್ಟಿಕಲ್ 370 ಕಿತ್ತು ಹಾಕುವ ಮತ್ತು ಭಾರತ ಸಂವಿಧಾನವನ್ನು ಜಮ್ಮುಕಾಶ್ಮೀರಕ್ಕೆ ಅನುಷ್ಠಾನಕ್ಕೆ ತರುವ ಕೆಲಸ ಮಾಡಲಾಗಿದೆ ಎಂದು ತಿಳಿಸಿದರು.
ಈ ಅಭಿವೃದ್ಧಿಗೆ ದೇಶದ ಮತದಾರರು ಕಾರಣ. ಸದೃಢ ಸರಕಾರ ನೀಡಿದ ಮತದಾರರನ್ನು ಅಭಿನಂದಿಸುವುದಾಗಿ ತಿಳಿಸಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನರನ್ನು ಮತದಾನಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಅಭಿಯಾನ ನಡೆಯಲಿದೆ. ಅಭಿಯಾನದ ಯಶಸ್ಸಿಗೆ ತಂಡ ರಚಿಸಿದ್ದು, ಪಿ.ರಾಜೀವ್, ಅರವಿಂದ ಬೆಲ್ಲದ, ವಿವೇಕ್ ರೆಡ್ಡಿ, ಲೋಕೇಶ್ ಹಾಗೂ ನಾನು ರಾಜ್ಯ ಸಂಚಾಲನಾ ಸಮಿತಿಯಲ್ಲಿ ಇದ್ದೇವೆ. ಇದೇ ರೀತಿಯ ತಂಡಗಳನ್ನು ಜಿಲ್ಲೆ, ವಿಧಾನಸಭಾ ಕ್ಷೇತ್ರ ಮಟ್ಟದಲ್ಲಿ ರಚನೆಯಾಗಿವೆ ಎಂದರು.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಕೇಂದ್ರ ಸಚಿವ ನಾರಾಯಣಸ್ವಾಮಿ, ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ಕುಮಾರ್ ಸುರಾಣ, ಮಾಲೀಕಯ್ಯ ಗುತ್ತೇದಾರ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ಮಾಜಿ ಸಚಿವರಾದ ಬಿ.ಶ್ರೀರಾಮುಲು, ಡಾ.ಸಿ.ಎನ್.ಅಶ್ವತ್ಥನಾರಾಯಣ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.












Click it and Unblock the Notifications