ಆರಾಧನೆಗೆ ಮಂತ್ರಾಲಯಕ್ಕೆ ಲಕ್ಷ ಭಕ್ತರ ನಿರೀಕ್ಷೆ, ಸಿದ್ಧತೆ ಪೂರ್ಣ
ಮಂತ್ರಾಲಯ, ಆಗಸ್ಟ್ 7: ರಾಘವೇಂದ್ರ ಸ್ವಾಮಿಗಳ 346ನೇ ಆರಾಧನೆ ಮಹೋತ್ಸವಕ್ಕೆ ಮಂತ್ರಾಲಯವು ಸಕಲ ರೀತಿಯಲ್ಲೂ ಸಜ್ಜುಗೊಂಡಿದೆ. ದೇವಸ್ಥಾನವೂ ಒಳಗೊಂಡಂತೆ ಮುಖ್ಯ ಬೀದಿಯ ಹಲವು ಕಟ್ಟಡಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ.
ಆಗಸ್ಟ್ ಎಂಟರಿಂದ ಹತ್ತನೇ ತಾರೀಕಿನವರೆಗೆ ಆರಾಧನೆ ನಡೆಯುತ್ತದೆ. ಈ ಮೂರೂ ದಿನ ರಾಯರ ಮಠದ ಪೀಠಾಧಿಪತಿಗಳಾದ ಸುಬುಧೇಂದ್ರ ತೀರ್ಥರು ವಿಶೇಷ ಪೂಜೆ ಸಲ್ಲಿಸಲಿದ್ದಾರೆ.

ದೇವಸ್ಥಾನಕ್ಕೆ ಇತ್ತೀಚೆಗಷ್ಟೇ ಸುಣ್ಣ ಬಣ್ಣ ಮಾಡಲಾಗಿದೆ. ಜತೆಗೆ ವಿದ್ಯುತ್ ವ್ಯವಸ್ಥೆ ಮಾಡಿರುವುದರಿಂದ ಝಗಮಗಿಸುತ್ತಿದೆ. ಚಿನ್ನ, ಬೆಳ್ಳಿ ಮತ್ತು ರತ್ನಗಳಿಂದ ಮಾಡಿದ ರಥವನ್ನು ಪುರೋಹಿತರು ಸ್ವಚ್ಛ ಮಾಡಿದ್ದು, ಮೆರವಣಿಗೆಗೆ ಸಿದ್ಧವಾಗಿದೆ.
ಆಂಧ್ರ, ತೆಲಂಗಾಣ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ಸೇರಿದಂತೆ ನಾನಾ ಕಡೆಯಿಂದ ಒಂದು ಲಕ್ಷ ಭಕ್ತರು ಭೇಟಿ ನೀಡುವ ಅಂದಾಜಿದ್ದು, ಅವರಿಗೆ ಅಗತ್ಯವಿರುವ ಅನುಕೂಲ ಮಾಡಿಕೊಡುವಂತೆ ಸುಬುಧೇಂದ್ರ ತೀರ್ಥರು ಸೂಚನೆ ನೀಡಿದ್ದಾರೆ.

ಕುಡಿಯುವ ನೀರು, ಮಹಿಳೆಯರಿಗೆ ಶೌಚಾಲಯ ವ್ಯವಸ್ಥೆ, ವಿಶ್ರಾಂತಿ ಕೊಠಡಿಗಳ ಅನುಕೂಲ ಮಾಡಲಾಗಿದೆ. ಮಳೆ ಕೊರತೆಯಿಂದ ನದಿಯಲ್ಲಿ ನೀರಿಲ್ಲ. ಆದ್ದರಿಂದ ಅಗತ್ಯ ಕಂಡುಬಂದಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಮಠದ ಆಡಳಿತಾಧಿಕಾರಿಗಳು ತಿಳಿಸಿದ್ದಾರೆ.
ಆರಾಧನೆ ಪ್ರಯುಕ್ತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಸುಬುಧೇಂದ್ರ ತೀರ್ಥರು ತಿಳಿಸಿದ್ದಾರೆ. ಐದು ಸಾವಿರ ಮಂದಿ ವೀಕ್ಷಿಸಲು ಅನುಕೂಲ ಮಾಡಲಾಗಿದೆ.

ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶೇಷ ಪೂಜೆ, ಭಜನೆ ಮತ್ತು ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.












Click it and Unblock the Notifications