ಪರಿಕ್ಕರ್ ಯು ಟರ್ನ್, ಮಹಾದಾಯಿ ವಿವಾದದಲ್ಲಿ ಮಾತುಕತೆ ಸಾಧ್ಯವಿಲ್ಲ
Recommended Video
ಪಣಜಿ, ಜನವರಿ 11: ಮಹಾದಾಯಿ ವಿವಾದದಲ್ಲಿ ಮಾತುಕತೆಗೆ ಸಿದ್ಧ ಎಂಬ ಸಂದೇಶ ನೀಡಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಯು ಟರ್ನ್ ಹೊಡೆದಿದ್ದಾರೆ. ಕರ್ನಾಟಕ ಜತೆಗಿನ ನೀರಾವರಿ ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮಹಾದಾಯಿ ಜಲವಿವಾದ ನ್ಯಾಯಮಂಡಳಿಯಲ್ಲೇ ಹೋರಾಟ ಮಾಡುವುದಾಗಿ ಅವರು ಹೇಳಿದ್ದಾರೆ.
ಕಳೆದ ಡಿಸೆಂಬರ್ ನಲ್ಲಿ ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರಿಗೆ ಪತ್ರ ಬರೆದು ಹೊಸ ನಿರೀಕ್ಷೆ ಮೂಡಿಸಿದ್ದ ಪರಿಕ್ಕರ್ ಇದೀಗ ಮಾಧ್ಯಮಗಳನ್ನು ದೂಷಿಸಿದ್ದಾರೆ. ಸಮಸ್ಯೆಯೇ ಇಲ್ಲದ ಜಾಗದದಲ್ಲಿ ಸಮಸ್ಯೆ ಸೃಷ್ಟಿಸಿದ್ದೀರಿ ಎಂದು ಅವರು ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದ್ದಾರೆ. ಜತೆಗೆ ಮಾತುಕತೆಗೆ ಸಿದ್ಧವಿಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.
ಮಹದಾಯಿ ನದಿ ನೀರು ಹಂಚಿಕೊಳ್ಳುವುದು ಅನಿವಾರ್ಯ:ಪರಿಕ್ಕರ್
ಯಡಿಯೂರಪ್ಪನವರಿಗೆ ಬರೆದ ಪತ್ರದಲ್ಲಿ ಪರಿಕ್ಕರ್, ಗೋವಾಕ್ಕೆ 'ಸಮಂಜಸವಾದ' ಮತ್ತು 'ಸಮರ್ಥನೀಯ' ಪ್ರಮಾಣದ ನೀರು ನೀಡಲು ಯಾವುದೇ ತಕರಾರಿಲ್ಲ ಎಂದಿದ್ದರು. ಜತೆಗೆ ದ್ವಿಪಕ್ಷೀಯ ಮಾತುಕತೆಗೆ ಸಿದ್ಧ ಎಂದು ಹೇಳಿದ್ದರು. ಆದರೆ ಮಹಾದಾಯಿ ಜಲ ವಿವಾದ ನ್ಯಾಯ ಮಂಡಳಿ ಮುಂದಿದೆ ಎಂಬುದನ್ನೂ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.
ಕರ್ನಾಟಕ ಮುಖ್ಯಮಂತ್ರಿಗಳ ಬದಲಿಗೆ ಬಿಜೆಪಿ ಅಧ್ಯಕ್ಷರಿಗೆ ಬರೆದ ಈ ಪತ್ರ ವಿವಾದದಕ್ಕೆ ಕಾರಣವಾಗಿತ್ತು. ಕರ್ನಾಟಕದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಹಿನ್ನಲೆಯಲ್ಲಿ ಪರಿಕ್ಕರ್ ಈ ಆಟ ಆಡಿದ್ದಾರೆ ಎಂಬ ಟೀಕೆಗಳು ಕೇಳಿ ಬಂದಿತ್ತು.
ಇದೀಗ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜತೆಗನ ಸಭೆಯ ನಂತರ ಬುಧವಾರ ಪ್ರತಿಕ್ರಿಯೆ ನೀಡಿರುವ ಮನೋಹರ್ ಪರಿಕ್ಕರ್, "ಸುದ್ದಿಗಾಗಿ ನೀವು (ಮಾಧ್ಯಮ) ಮಹಾದಾಯಿ ಸಮಸ್ಯೆಯನ್ನು ಸೃಷ್ಟಿಸಿದ್ದೀರಿ. ಮಹಾದಾಯಿ ನೀರು ಹಂಚಿಕೆ ಹೋರಾಟ ನ್ಯಾಯಮಂಡಳಿ ಮುಂದಿದೆ ಮತ್ತು ನಾವು ಅಲ್ಲೇ ಹೋರಾಟ ಮಾಡುತ್ತೇವೆ," ಎಂದು ಸ್ಪಷ್ಟಪಡಿಸಿದ್ದಾರೆ.
ಮಹಾದಾಯಿ ಯೋಜನೆ
ಉತ್ತರ ಕರ್ನಾಟಕದ ಬರಪೀಡಿತ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆ ಇದಾಗಿದೆ. ಕರ್ನಾಟಕ ಕಳಸ-ಬಂಡೂರಿ ನಾಲೆಗಳಿಗೆ ನೀರು ಹರಿಸಲು ಮಹಾದಾಯಿ ನದಿಯಿಂದ7.56 ಟಿಎಂಸಿ ನೀರು ನೀಡುವಂತೆ ಗೋವಾ ಸರಕಾರವನ್ನು ಕೇಳುತ್ತಿದೆ. ಬೆಳಗಾವಿ, ಗದಗ ಜಿಲ್ಲೆಯ ಕುಡಿಯುವ ನೀರು ಹಾಗೂ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಕುಡಿಯುವ ನೀರಿನ ಬೇಡಿಕೆ ಈಡೇರಿಸಲು ಈ ಬೇಡಿಕೆ ಇಟ್ಟಿದೆ.